ಆನಂದ ಅಪ್ಪುಗೋಳ ಜಾರಿ ನಿರ್ದೇಶನಾಲಯದ ಬಲೆಗೆ ಬಿದ್ದಿದ್ದು ಹೇಗೆ?
ಬೆಳಗಾವಿ, ಜನವರಿ 07; ಸಂಗೊಳ್ಳಿ ರಾಯಣ್ಣ ಸಹಕಾರಿ ಬ್ಯಾಂಕ್ನ ಬಹುಕೋಟಿ ರೂಪಾಯಿ ವಂಚನೆ ಪ್ರಕರಣದ ಸಂಬಂಧ ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳರನ್ನು ಜಾರಿ ನಿದೇರ್ಶನಾಲಯ ಬಂಧಿಸಿದೆ. ಇದು ಸುಮಾರು 250 ಕೋಟಿಗೂ ಅಧಿಕ ರೂಪಾಯಿಗಳ ವಂಚನೆ ಪ್ರಕರಣವಾಗಿದೆ.
ವಂಚನೆ ಪ್ರಕರಣದ ತನಿಖೆ ಕೈಗೊಂಡಿದ್ದ ಇಡಿ ಅಧಿಕಾರಿಗಳು ಗುರುವಾರ ಆನಂದ ಅಪ್ಪುಗೋಳ ಬಂಧಿಸಿದ್ದಾರೆ. ಅವರ ವಿರುದ್ಧ ಪಿಎಂಎಲ್ಎ ಕಾಯ್ದೆಯಡಿ ದೂರು ದಾಖಲಾಗಿತ್ತು. ಗ್ರಾಹಕರು ಬ್ಯಾಂಕಿನಲ್ಲಿ ಇಟ್ಟಿದ್ದ ಠೇವಣಿ ಹಣವನ್ನು ತನ್ನ ಸ್ವಂತ ಬಳಕೆಗೆ ಉಪಯೋಗಿಸಿಕೊಂಡಿದ್ದು, ಹಣವನ್ನು ಹಿಂತಿರಿಗಿಸಿದೇ ವಂಚನೆ ಮಾಡಿರುವುದು ತನಿಖೆಯಲ್ಲಿ ಕಂಡು ಬಂದಿತ್ತು. ಆದ್ದರಿಂದ ಬಂಧಿಸಲಾಗಿದೆ.
ಮೊದಲು ಈ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು ಚಿತ್ರ ನಿರ್ಮಾಪಕರಾಗಿದ್ದ ಆನಂದ ಅಪ್ಪುಗೋಳ ಮಾಲೀಕತ್ವದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೊಸೈಟಿಯ ಬಹುಕೋಟಿ ರೂಪಾಯಿ ಠೇವಣಿ ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದರು.
ಸಿಐಡಿ ಡಿವೈಎಸ್ಪಿ ಪುರುಷೋತ್ತಮ ನೇತೃತ್ವದ ತಂಡ ಪ್ರಕರಣದ ತನಿಖೆ ನಡೆಸಿ ಎರಡು ದಿನಗಳ ಹಿಂದೆ ಬರೋಬ್ಬರಿ 2063 ಪುಟಗಳ ಚಾರ್ಜ್ಶೀಟ್ ಅನ್ನು ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದೆ. ಪ್ರಕರಣದಲ್ಲಿಒಟ್ಟು 13 ಜನರು 275 ಕೋಟಿ ರೂ. ಠೇವಣಿ ಹಣ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

2017ರಲ್ಲಿ ಮೊದಲು ದೂರು ದಾಖಲಾಗಿತ್ತು
ಸಂಗೊಳ್ಳಿ ರಾಯಣ್ಣ ಸೊಸೈಟಿಯು ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ 35 ಶಾಖೆಗಳನ್ನು ಹೊಂದ್ದಿದ್ದು, 26 ಸಾವಿರ ಜನರಿಂದ ಠೇವಣಿ ಸಂಗ್ರಹಿಸಿತ್ತು. ಆನಂದ ಅಪ್ಪುಗೋಳ ಸೇರಿ ಸೊಸೈಟಿಯ 13 ನಿರ್ದೇಶಕರು ಠೇವಣಿ ಹಣವನ್ನು ಸ್ವಂತಕ್ಕೆ ಬಳಸಿಕೊಂಡು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ದೂರಲಾಗಿತ್ತು. ಈ ಕುರಿತು ಸಹಕಾರ ಇಲಾಖೆ ನಿಬಂಧಕರು 2017ರಲ್ಲಿ ದೂರು ದಾಖಲಿಸಿದ್ದರು. ಆಗ ರಾಜ್ಯ ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿತ್ತು..
ಒಟ್ಟು 275 ಕೋಟಿ ಠೇವಣಿ ಹಣ ವಂಚನೆಯಾದ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಅಂದಿನ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಆದರೆ ಈವರೆಗೂ ಠೇವಣಿದಾರರಿಗೆ ಹಣ ವಾಪಸ್ ಸಿಕ್ಕಿಲ್ಲ. ತಮ್ಮ ಜೀವಮಾನವೀಡಿ ದುಡಿದ ಹಣ ವಾಪಸ್ ಸಿಗದೇ ವಯೋವೃದ್ಧರು, ಸಣ್ಣ ವ್ಯಾಪಾರಿಗಳು, ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ.

ಸ್ವಂತ ಉಪಯೋಗಕ್ಕೆ ಹಣ ಬಳಕೆ
ಆನಂದ ಅಪ್ಪುಗೋಳ ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಗಮ, ಭೀಮಾಂಬಿಕಾ ಮಹಿಳಾ ವಿವಿಧೋದ್ದೇಶಗಳ ಸಹಕಾರಿ ಸಂಘ, ಗಜರಾಜ ಸೊಸೈಟಿಯಲ್ಲಿ ಹೆಚ್ಚಿನ ಬಡ್ಡಿ ಆಮಿಷವೊಡ್ಡಿದ್ದರು. ಸಾವಿರಾರು ಜನರಿಂದ ಕೋಟ್ಯಂತರ ಹಣ ಠೇವಣಿ ಇಟ್ಟಿದ್ದರು. ಬೆಳಗಾವಿ ಹಾಗೂ ಬಾಗಲಕೋಟ ಜಿಲ್ಲೆಗಳಲ್ಲಿ ಶಾಖೆ ಹೊಂದಿದ್ದ ಸೊಸೈಟಿಯಲ್ಲಿ ಠೇವಣಿ ಇಟ್ಟ ಹಣವನ್ನು ಆನಂದ ಅಪ್ಪುಗೋಳ ಹಾಗೂ ಸೊಸೈಟಿಯ ನಿರ್ದೇಶಕರು ಸ್ವಂತ ಬಳಕೆಗೆ ಬಳಸಿಕೊಂಡ ಬಗ್ಗೆ 2017ರಲ್ಲಿ ಸಹಕಾರ ಇಲಾಖೆ ನಿಬಂಧಕರು ದೂರು ದಾಖಲಿಸಿದ್ದರು.
ರಿಯಲ್ ಎಸ್ಟೇಟ್ ಸೇರಿದಂತೆ ಇತರ ಕಡೆಗಳಲ್ಲಿ ಅವರು ಹಣ ತೊಡಗಿಸಿದ್ದರಿಂದ ಸೊಸೈಟಿ ತೀರ ಆರ್ಥಿಕ ಹಿನ್ನಡೆ ಅನುಭವಿಸಿತ್ತು. ಬೆಳಗಾವಿಯಲ್ಲಿ ಮುಂಚೂಣಿಯಲ್ಲಿದ್ದ ಈ ಸೊಸೈಟಿ ತೀವ್ರ ಆರ್ಥಿಕ ಕುಸಿತದಿಂದ ಮುಚ್ಚಿತ್ತು. ಇದರಿಂದ ಸಂಕಷ್ಟಕ್ಕೆ ಒಳಗಾದ ಗ್ರಾಹಕರು ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರಿಗೆ ಸಾಕಷ್ಟು ಸಲ ಮನವಿ ಸಲ್ಲಿಸಿ ಹಣವನ್ನು ಮರಳಿಸುವಂತೆ ಮನವಿ ಮಾಡಿಕೊಂಡಿದ್ದರು.

ಚಿತ್ರ ನಿರ್ಮಾಣ ಮಾಡಿದ್ದರು
ಕಳೆದ 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಸೊಸೈಟಿಯು 40ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿತ್ತು. ಆನಂದ ಅಪ್ಪುಗೋಳ ಕಾಂಗ್ರೆಸ್, ಜೆಡಿಎಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದರು. ದರ್ಶನ್ ಅಭಿನಯದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಲನ ಚಿತ್ರ ನಿರ್ಮಿಸಿ ಯಶಸ್ಸು ಕಂಡಿದ್ದರು. ಆದರೆ ಗ್ರಾಹಕರಿಗೆ ಹಣ ನೀಡದೆ ತಲೆಮರೆಸಿಕೊಂಡಿದ್ದ ಅಪ್ಪುಗೋಳ ವಿರುದ್ಧ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇನ್ನು ಶ್ರೀ ಭೀಮಾಂಬಿಕಾ ಮಹಿಳಾ ವಿವಿಧೋದ್ದೇಶಗಳ ಬೆಳಗಾವಿ ಸೌಹಾರ್ದ ಸಹಕಾರಿ ನಿಗಮ ಸಾರ್ವಜನಿಕರಿಂದ ವಿವಿಧ ರೀತಿಯ ಠೇವಣಿಗಳನ್ನು ಸಂಗ್ರಹಿಸಿದ್ದು ಅವುಗಳ ನಿಗದಿತ ಅವಧಿ ಮುಗಿದ ನಂತರ ಅದರ ಹೂಡಿಕೆದಾರರಿಗೆ ಹಿಂತಿರುಗಿಸದೆ ವಂಚಿಸಿರುವ ಪ್ರಕರಣ ಸಂಬಂಧ ಸಂಸ್ಥೆಯ ಆಸ್ತಿಯನ್ನು ಕರ್ನಾಟಕ ಹಣಕಾಸು ಸಂಸ್ಥೆಗಳ ಠೇವಣಿದಾರರ ಹಿತ ಸಂರಕ್ಷಣಾ ಕಾಯ್ದೆ 2004ರ ಅಡಿ ಮುಟ್ಟುಗೋಲು ಹಾಕಿಕೊಂಡಿದ್ದು ಹರಾಜು ಪ್ರಕ್ರಿಯೆಗಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು

ಹಣ ವಾಪಸ್ ಕೊಡದೇ ಭಾರೀ ವಂಚನೆ
2000 ಜನವರಿ 30ರಂದು ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಅರ್ಬನ್ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಸಂಸ್ಥೆ ಸ್ಥಾಪನೆಯಾಗಿತ್ತು. ಇದರ ಸಂಸ್ಥಾಪಕ, ಅಧ್ಯಕ್ಷ ಆನಂದ ಅಪ್ಪುಗೋಳ ಆಗಿದ್ದರು. ಈ ಸಂಸ್ಥೆಯು ಜನರ ವಿಶ್ವಾಸದಿಂದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ 35 ಶಾಖೆಗಳನ್ನು ವಿಸ್ತರಿಸಿಕೊಂಡಿತು. ಇನ್ನು ಭೀಮಾಂಬಿಕಾ ಮಹಿಳಾ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ನಿಯಮಿತದ 14 ಶಾಖೆಗಳು ಮತ್ತು ಗಜರಾಜ ಸೌಹಾರ್ಧ ಸಹಕಾರಿ ನಿಯಮಿತದ 2 ಶಾಖೆಗಳು ಕೂಡ ಇದೇ ಸಂಸ್ಥೆಯೊಂದಿಗೆ ಕಾರ್ಯ ನಿರ್ವಹಿಸುತ್ತಾ ಬಂದಿತ್ತು.
ಈ ಎಲಾ ಶಾಖೆಗಳಲ್ಲಿ ನುರಿತ ಮತ್ತು ಅನುಭವಿ ನೌಕರರನ್ನು ವಿವಿಧ ಇಲಾಖೆ ಬ್ಯಾಂಕ್ ಮತ್ತು ಅರೆ ಸರ್ಕಾರಿ ಸಂಸ್ಥೆಗಳಲ್ಲಿ ಅನುಭವ ಹೊಂದಿದ ಸಿಬ್ಬಂದಿಯನ್ನು ಶಾಖಾ ವ್ಯವಸ್ಥಾಪಕರೆಂದು ನೇಮಿಸಿ ಪ್ರತಿಯೊಬ್ಬ ಶಾಖಾಧಿಕಾರಿಗೂ ಮಾಸಿಕ ವೇತನ ನೀಡಲಾಗುತ್ತಿತ್ತು. ಆದರೆ ಪ್ರತಿದಿನ ಸಂಜೆ 6ರ ವೇಳೆಗೆ ಆಯಾ ಶಾಖೆಗಳಲ್ಲಿ ಶೇಖರಿಸಲ್ಪಟ್ಟಿದ್ದ ಠೇವಣಿ ಮೊತ್ತವನ್ನು ಮುಖ್ಯ ಕಚೇರಿಗೆ ಜಮಾ ಮಾಡಿ ಅಲ್ಲಿಂದ ರಶೀದಿ ಪಡೆದುಕೊಳ್ಳಬೇಕಾಗಿತ್ತು. ಆದರೆ ಇದೀಗ ಸಂಸ್ಥೆಯಲ್ಲಿ ಜಮಾ ಆದ ಹಣವನ್ನು ಸ್ಥಾಪಕಾಧ್ಯಕ್ಷರು ಮತ್ತು ಆಡಳಿತ ಮಂಡಳಿಯವರು ದುರುಪಯೋಗ ಮಾಡಿಕೊಂಡಿರುವ ಬಗ್ಗೆ, ವಂಚನೆ ನಡೆದಿರುವ ಬಗ್ಗೆ ಆರೋಪ ಕೇಳಿ ಬಂದಿದೆ.












Click it and Unblock the Notifications