ಅದೃಷ್ಟ ಖುಲಾಯಿಸಿದ್ರೆ ನಾನೇ ಸಿಎಂ ಆಗ್ತೀನಿ; ಉಮೇಶ್ ಕತ್ತಿ
ಬೆಳಗಾವಿ, ಸೆಪ್ಟೆಂಬರ್ 25: "ನನಗೆ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ಶಾಸಕನಾಗಿ ಕ್ಷೇತ್ರದ ಕೆಲಸ ಮಾಡುತ್ತೇನೆ. ಮುಖ್ಯಮಂತ್ರಿ ಆಗೋ ಸಂದರ್ಭ ಬಂದ್ರೆ ರಾಜ್ಯ ಕಟ್ಟುತ್ತೇನೆ. ಅನ್ಯಾಯವಾದ ಸಂದರ್ಭದಲ್ಲಿ ಧ್ಚನಿ ಎತ್ತುತ್ತೇನೆ" ಎಂದಿದ್ದಾರೆ ಮಾಜಿ ಸಚಿವ ಉಮೇಶ್ ಕತ್ತಿ.
ಉಪಚುನಾವಣೆ ದಿನಾಂಕ ಘೋಷಣೆಯಾಗಿದ್ದು, ತಮ್ಮ ಪಕ್ಷದ ಚುನಾವಣಾ ತಯಾರಿಯಲ್ಲಿ ತೊಡಗಿಕೊಂಡಿರುವ ಅವರು, 15 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲ್ಲಿದೆ. ಅನರ್ಹರಿಗೆ ಟಿಕೆಟ್ ನೀಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ, ಹೈಕಮಾಂಡ್ ತೀರ್ಮಾನಕ್ಕೆ ಬದ್ಧವಾಗಿರುವುದಾಗಿಯೂ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ, ಯಡಿಯೂರಪ್ಪ ದುರ್ಬಲ ಸಿಎಂ ಎಂಬ ಸಿದ್ದರಾಮಯ್ಯ ಆರೋಪಕ್ಕೆ, "ಯಡಿಯೂರಪ್ಪ ಗುಡುಗಿದ್ರೆ ಇಂದಿಗೂ ವಿಧಾನಸಭೆ ನಡುಗುತ್ತೆ" ಎಂದು ಪ್ರತಿಕ್ರಿಯಿಸಿದ್ದಾರೆ. ಈ ಬಾರಿ ಸಚಿವ ಸ್ಥಾನ ಕೈತಪ್ಪಿದ್ದರೂ ತಮಗೆ ಯಾವುದೇ ಬೇಸರ ಇಲ್ಲ. ಹೈಕಮಾಂಡ್ ಬದಲಾವಣೆ ಬಯಸಿ ಹೀಗೆ ತೀರ್ಮಾನಿಸಿದ್ದಾರೆ. ನಾನು ರಾಜಕೀಯದಲ್ಲಿ 35 ವರ್ಷ ಕೆಲಸ ಮಾಡಿದ್ದೇನೆ. ಪಕ್ಷದ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ.

ಸದ್ಯಕ್ಕೆ ಗೋಕಾಕ್ ನಲ್ಲಿ ಅಶೋಕ ಪೂಜಾರಿ, ಕಾಗವಾಡದಲ್ಲಿ ರಾಜು ಕಾಗೆ, ಅಥಣಿಗೆ ಲಕ್ಷ್ಮಣ ಸವದಿ ಅಭ್ಯರ್ಥಿಗಳಾಗಿದ್ದು, ಸುಪ್ರೀಂ ಕೋರ್ಟ್ ಅನರ್ಹರ ತೀರ್ಪು ಪ್ರಟಿಸಿದ ನಂತರ ಬದಲಾವಣೆ ಮಾಡುವುದಾಗಿ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ, ತಮಗೆ ಮತ್ತೊಮ್ಮೆ ಅವಕಾಶ ಸಿಕ್ಕರೆ ಬೆಳಗಾವಿ ಅಭಿವೃದ್ಧಿಗೆ ಬದ್ಧರಾಗಿರುವುದಾಗಿಯೂ ಹೇಳಿದರು. "ನನ್ನ ವಿರುದ್ಧ ಷಡ್ಯಂತ್ರ ಯಾರಿಂದಲೂ ಸಾಧ್ಯವಿಲ್ಲ. ಸಚಿವ ಸ್ಥಾನ ಯಾರಿಂದಲೂ ತಪ್ಪಿಲ್ಲ. ಅದು ಹಣೆ ಬರಹದಲ್ಲಿ ಬರೆದಿರಬೇಕು. ಶಾಸಕನಾಗಿ ಕ್ಷೇತ್ರದ ಕೆಲಸ ಮಾಡುತ್ತೇನೆ. ಉತ್ತರ ಕರ್ನಾಟಕದಲ್ಲಿ ಇನ್ನೂ ಅಭಿವೃದ್ಧಿ ಕೆಲಸ ಇವೆ. 8 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಅದೃಷ್ಟ ಖುಲಾಯಿಸಿದ್ರೆ ನಾನು ಸಿಎಂ ಆಗಲಿದ್ದೇನೆ. ಸಿಎಂ ಆದರೆ ಸಮಗ್ರ ಕರ್ನಾಟಕದ ಅಭಿವೃದ್ಧಿ ಮಾಡುತ್ತೇನೆ. ಕೃಷ್ಣ ನೀರಿನ ಉಪಯೋಗಕ್ಕೆ ಹೆಚ್ಚಿನ ಒತ್ತು ನೀಡುತ್ತೇನೆ" ಎಂದು ತಿಳಿಸಿದರು.












Click it and Unblock the Notifications