"ಶಿಕ್ಷಕರ ತವರೂರು" ಬೆಳಗಾವಿಯ ಈ ಇಂಚಲ ಗ್ರಾಮ
ಬೆಳಗಾವಿ, ಸೆಪ್ಟೆಂಬರ್ 5: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮ ದೇಶಕ್ಕೆ ಅತಿ ಹೆಚ್ಚು ಸೈನಿಕರನ್ನು ನೀಡಿದ ಗೌರವಕ್ಕೆ ಪಾತ್ರವಾದ ಊರು. ಒಂದು ಕಾಲದಲ್ಲಿ ಅಪರಾಧ ಕೃತ್ಯಗಳ ಮೂಲಕ ಈ ಗ್ರಾಮ ಅಪಕೀರ್ತಿಗೆ ಪಾತ್ರವಾಗಿತ್ತು. ಈ ಗ್ರಾಮದಲ್ಲಿ ಕೊಲೆ ಸುಲಿಗೆ, ಮಚ್ಚು ಲಾಂಗುಗಳ ಅಬ್ಬರವೇ ಜಾಸ್ತಿಯಾಗಿತ್ತು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಶಿಕ್ಷಣದ ಕಂಪು ಮನೆ ಮನೆಯಲ್ಲೂ ಪಸರಿಸಿದೆ.
ಇಂಚಲ ಮಠದ ಶಿವಾನಂದ ಭಾರತಿ ಮಹಾಸ್ವಾಮಿಗಳು ಇಡೀ ಗ್ರಾಮವನ್ನೇ ಬದಲಿಸಿದ್ದಾರೆ. ಗ್ರಾಮದಲ್ಲಿ ಎಲ್ ಕೆಜಿ ಯಿಂದ ಹಿಡಿದು ಪದವಿವರೆಗೆ ಶಿಕ್ಷಣ ಸಂಸ್ಥೆ ಆರಂಭಿಸಿದ್ದಾರೆ. ಡಿಇಡಿ, ಬಿಇಡಿ ಕಾಲೇಜು, ವೈದ್ಯಕೀಯ ಮಹಾವಿದ್ಯಾಲಯ ಆರಂಭಿಸಿದ್ದಾರೆ. ಗ್ರಾಮಕ್ಕೆ ಶಿಕ್ಷಣದ ಮಹತ್ವದ ಅರಿವು ಮೂಡಿಸಿದ್ದಾರೆ.

ಗ್ರಾಮದಲ್ಲಿ ಅನಕ್ಷರತೆ ಹೋಗಲಾಡಿಸಿ ಪ್ರತಿಯೊಬ್ಬರಿಗೂ ಶಿಕ್ಷಣ ಕೊಡಿಸಿದ್ದಾರೆ. ಹೀಗಾಗಿ ಗ್ರಾಮದಲ್ಲಿ ಮನೆಗೊಬ್ಬರಂತೆ ಸರ್ಕಾರಿ ನೌಕರಿಯಲ್ಲಿದ್ದಾರೆ. ಜೊತೆಗೆ ಇಡೀ ಗ್ರಾಮದಲ್ಲಿ ಅತಿಹೆಚ್ಚು ಶಿಕ್ಷಕರಿದ್ದು, ರಾಜ್ಯದಲ್ಲಿ "ಶಿಕ್ಷಕರ ತವರೂರು" ಎಂದೇ ಗುರುತಿಸಿಕೊಂಡಿದೆ.

ಇಂಚಲ ಮಠದ ಶಿವಾನಂದ ಭಾರತಿ ಮಹಾಸ್ವಾಮಿಗಳು ಗ್ರಾಮದಲ್ಲಿ ಮೊದಲು ಪ್ರಾಥಮಿಕ ಶಿಕ್ಷಣ ಆರಂಭಿಸಿದರು. 1975ರಲ್ಲಿ ಪ್ರೌಢ ಶಿಕ್ಷಣ, 1982ರಲ್ಲಿ ಪಿಯು ಕಾಲೇಜು, 1985ರಲ್ಲಿ ಡಿಎಡ್ ಕಾಲೇಜು ಆರಂಭ ಮಾಡಿದರು. ಆರಂಭದಲ್ಲಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿದ್ದರು. ಇದೀಗ ಸಾವಿರಾರು ವಿದ್ಯಾರ್ಥಿಗಳಿದ್ದಾರೆ. ಇಂಚಲ ಗ್ರಾಮದಲ್ಲಿ ಹತ್ತು ಸಾವಿರಕ್ಕೂ ಅಧಿಕ ಜನಸಂಖ್ಯೆಯಿದ್ದು, ಸುಮಾರು ಒಂದು ಸಾವಿರಕ್ಕೂ ಅಧಿಕ ಮನೆಗಳಿವೆ. ಗ್ರಾಮದಲ್ಲಿ ಇಲ್ಲಿವರೆಗೂ ಸುಮಾರು ಒಂಬತ್ತನೂರಕ್ಕೂ ಅಧಿಕ ಶಿಕ್ಷಕರಿದ್ದು, ಎಲ್ಲರೂ ಸರ್ಕಾರಿ ಶಿಕ್ಷಕರೇ ಎಂಬುದು ವಿಶೇಷ.












Click it and Unblock the Notifications