ಕನ್ನಡ ಪಾಠ ಮಾಡಲು ಅವಕಾಶ ಕೊಡುತ್ತಿಲ್ಲವೆಂದು ಶಿಕ್ಷಕನ ಪ್ರತಿಭಟನೆ
ಬೆಳಗಾವಿ, ನವೆಂಬರ್ 24 : ನಿವೃತ್ತಿಯ ಅಂಚಿನಲ್ಲಿರುವ ಈ ಶಿಕ್ಷಕ ಕನ್ನಡ ಪಾಠ ಮಾಡಲು ಅಡ್ಡಿಪಡಿಸಿದವರ ವಿರುದ್ಧ ಪ್ರತಿಭಟನೆಯನ್ನೇ ಹೂಡಿಬಿಟ್ಟಿದ್ದಾರೆ.
ಖಾನಾಪುರ ತಾಲ್ಲೂಕಿನ ಚೋರ್ಲಾ ಗ್ರಾಮದಲ್ಲಿರುವ ಮರಾಠಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಪಾಠ ಮಾಡಲು ಅಲ್ಲಿನ ಎಸ್ ಡಿ ಎಂ ಸಿಯವರು ಅವಕಾಶ ಕೊಡುತ್ತಿಲ್ಲ. ಹೀಗಾಗಿ ವಿ ಆರ್ ಎಸ್ ಕೊಡಬೇಕು ಅಥವಾ ಕನ್ನಡ ಕಲಿಸಲು ಅವಕಾಶ ಕೊಡಬೇಕು ಎಂದು ಒತ್ತಾಯಿಸಿ ಕನ್ನಡ ಶಿಕ್ಷಕ ವಿ.ಜಿ. ಬಾಳೇಕುಂದ್ರಿ ಸುವರ್ಣ ವಿಧಾನಸೌಧದ ಬಳಿ ಶುಕ್ರವಾರ (ನವೆಂಬರ್ 24) ಏಕಾಂಗಿಯಾಗಿ ಧರಣಿ ನಡೆಸಿದರು.

ಮಹಾರಾಷ್ಟ್ರ-ಕರ್ನಾಟಕ ಗಡಿಯಲ್ಲಿರುವ ಈ ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರು 'ಕನ್ನಡ ಶಿಕ್ಷಕ ನಮ್ಮ ಶಾಲೆಗೆ ಬೇಕಿಲ್ಲ' ಎಂದು ಹೇಳುತ್ತಿದ್ದಾರಂತೆ. ಶಿಕ್ಷಕ ವಿ.ಜಿ.ಬಾಳೆಕುಂದ್ರಿ ಶಾಲೆಗೆ ಹೋದರೆ ಹಲವು ರೀತಿಯಲ್ಲಿ ತೊಂದರೆ ಕೊಡುತ್ತಿದ್ದಾರಂತೆ. ಇದನ್ನು ಬಿಇಒ ಸೇರಿದಂತೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ ಎಂದು ಅವರು ದೂರಿದರು.
ನಾಲ್ಕು ತಿಂಗಳಿಂದ ಶಿಕ್ಷಕ ಬಾಳೆಕುಂದ್ರಿ ಶಾಲೆಗೆ ಹೋಗಿಲ್ಲ ಹೀಗಾಗಿ ವೇತನವೂ ಬಂದಿಲ್ಲ. ನಿವೃತ್ತಿಗೆ ಇನ್ನೆರಡು ವರ್ಷಗಳಷ್ಟೇ ಇದೆ. ಸ್ವಯಂ ನಿವೃತ್ತಿಯನ್ನೂ ನೀಡುತ್ತಿಲ್ಲ. ಅಧಿಕಾರಿಗಳು ನನ್ನ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸುತ್ತಿಲ್ಲ. ಭದ್ರತೆ ಒದಗಿಸಿದರೆ ಶಾಲೆಯಲ್ಲಿ ಕನ್ನಡ ಪಾಠ ಮಾಡಲು ಸಿದ್ಧವಿದ್ದೇನೆ. ಇದಕ್ಕಾಗಿ ₹10ಸಾವಿರ ವೇತನ ಕೊಟ್ಟರೂ ಸಾಕು ಎಂಬುದು ಶಿಕ್ಷಕ ಬಾಳೆಕುಂದ್ರಿ ಮಾತು.
ಮೂರು ವರ್ಷದಿಂದಲೂ ಆ ಶಾಲೆಯಲ್ಲಿ ಕನ್ನಡ ಕಲಿಸಲು ತೊಂದರೆ ಇರಲಿಲ್ಲವಂತೆ. ಆದರೆ, ಹೊಸದಾಗಿ ಶಾಲಾಭಿವೃದ್ಧಿ ಸಮಿತಿ ರಚನೆಯಾದ ಮೇಲೆ ತೊಂದರೆ ಆಗಿದೆ ಎಂದು ಅವರು ಹೇಳುತ್ತಾರೆ.
ಬೈಲಹೊಂಗಲದಿಂದ ಪಾದಯಾತ್ರೆಯಲ್ಲಿ ಆಗಮಿಸಿದ ಬಾಳೆಕುಂದ್ರಿ ಅವರನ್ನು ಪೊಲೀಸರೆ ತಮ್ಮ ವಾಹನದಲ್ಲಿ ಸುವರ್ಣ ವಿಧಾನಸೌಧಕ್ಕೆ ಕರೆದೊಯ್ದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ಅವಕಾಶ ಮಾಡಿಕೊಟ್ಟರು.












Click it and Unblock the Notifications