ವಾಮಾಚಾರ, ಮಾಟ ಮಂತ್ರ: ಅನುಭವ ಹಂಚಿಕೊಂಡ ಐವಾನ್, ಯತ್ನಾಳ್
ಸುವರ್ಣ ವಿಧಾನಸೌಧ(ಬೆಳಗಾವಿ), ನವೆಂಬರ್ 22: ಏಳನೇ ಚಳಿಗಾಲದ ಅಧಿವೇಶನ ಏಳನೇ ದಿನದ ಕಲಾಪದಲ್ಲಿಂದು ವಾಮಾಚಾರ, ಮಾಟ, ಮಂತ್ರ, ಮೌಢ್ಯನಿಷೇಧದ ಬಗ್ಗೆ ಭಾರಿ ಚರ್ಚೆ ನಡೆಯಿತು.
ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜಾ ತಮ್ಮ ಅನುಭವ ಬಿಚ್ಚಿಟ್ಟು, ಚುನಾವಣೆಯಲ್ಲಿ ಗೆಲ್ಲಲು ನಾನೂ ವಾಮಚಾರ ಮಾಡಿಸಿದ್ದೆ. ನಾನು ಮಂಗಳೂರಿನಿಂದ ಚುನಾವಣೆಗೆ ಸ್ಪರ್ಧಿಸಿದ್ದೆ. ಸ್ನೇಹಿತನ ಒತ್ತಾಯಕ್ಕೆ ಕೇರಳದ ಜ್ಯೋತಿಷಿ ಬಳಿ ಹೋಗಿದ್ದೆ, ವಾಮಾಚಾರ ಮಾಡಿಸಿದರೆ ಗೆಲ್ಲುವುದಾಗಿ ಹೇಳಿದ್ದರು.

ನಾನು ಮಾಡುವುದೋ ಬಿಡುವುದೋ ಎಂಬ ಗೊಂದಲದಲ್ಲಿದ್ದೆ, ಸ್ನೇಹಿತನ ಒತ್ತಾಯಕ್ಕೆ ವಾಮಾಚಾರ ಮಾಡಿಸಿದ್ದೆ. ಅದಕ್ಕೆ ಒಂದೂವರೆ ಲಕ್ಷ ರೂಪಾಯಿ ಖರ್ಚಾಗಿತ್ತು. ಆದರೆ, ಅಷ್ಟೆಲ್ಲ ಮಾಡಿದ್ದರೂ ಚುನಾವಣೆಯಲ್ಲಿ ಗೆಲ್ಲಲ್ಲಿಲ್ಲ ಎಂದರು.
ಐವಾನ್ ಡಿಸೋಜಾ ಕಾಲೆಳೆದ ವಿ.ಎಸ್.ಉಗ್ರಪ್ಪ ಅವರು, ವಾಮಾಚಾರದ ಖರ್ಚು ಕೂಡ ಚುನಾವಣಾ ಆಯೋಗಕ್ಕೆ ಲೆಕ್ಕ ನೀಡಿದ್ದೀರಾ ಎಂದು ಪ್ರಶ್ನಿಸಿದಾಗ ಸದನ ನಗೆಗಡಲಿನಲ್ಲಿ ತೇಲಿತು.
ಯತ್ನಾಳ್ ಅನುಭವ: ನಾನು ಕೂಡ ಮಾಟ ಮಂತ್ರದ ಪೂಜೆಗೆ ಹೋಗಿದ್ದೆ, ಪೂಜೆ ಮಾಡಿದ ಬಳಿಕ 2 ಸಾವಿರ ರೂ. ನೋಟನ್ನು ಕಾಣಿಕೆ ಹಾಕಿದೆ. ನಾನು ದೊಡ್ಡ ಕುಳ ಇರಬೇಕು ಎಂದು ಅವರು ಅಂದುಕೊಂಡ್ರು.
ಬಳಿಕ ಅವರ ಮನೆಗೆ ಕರೆದುಕೊಂಡು ಹೋಗಿ ಟಿಫನ್ ಮಾಡಿಸಿದ್ರು, ಆಗ ಹಲವಾರು ಮಂತ್ರಿಗಳು ಬಂದು ಪೂಜೆ ಮಾಡಿಸಿದ್ದಾರೆ ಎಂದರು.
ನನಗೂ ಮುಂದಿನ ಸರ್ಕಾರದಲ್ಲಿ ಮಂತ್ರಿ ಆಗುವ ಆಸೆ, ಆ ಕಾರಣಕ್ಕಾಗಿಯೇ ಪೂಜೆ ಮಾಡಿಸಲು ಮುಂದಾದೆ. ತಕ್ಷಣವೇ ಪೂಜೆ ಮಾಡಿಸಿ ಕಂಟಕ ಇದೆ ಅಂದ್ರು, ಆಯ್ತು ಎಷ್ಟು ಖರ್ಚು ಎಂದಾಗ 7-8 ಲಕ್ಷ ರೂ. ಆಗಬಹುದು ಎಂದ್ರು,
ನನಗೆ ಮಂತ್ರಿ ಪದವಿಯೂ ಬೇಡ, ಏನೂ ಬೇಡ ಎಂದು ಆ ಸ್ವಾಮಿಜಿಗೆ ಕೈ ಮುಗಿದೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಅನುಭವ ಹಂಚಿಕೊಂಡರು.












Click it and Unblock the Notifications