ಸಚಿವ ಸುರೇಶ್ ಅಂಗಡಿ ಕಾಳಜಿ; ಮಗುವಿಗಾಗಿ ರೈಲಿನಲ್ಲಿ ಬಂತು ಔಷಧಿ
ಬೆಳಗಾವಿ, ಏಪ್ರಿಲ್ 21 : ಐದು ವರ್ಷದ ಮಗುವಿಗೆ ಅಗತ್ಯವಿದ್ದ ಔಷಧಗಳನ್ನು ರೈಲಿನ ಮೂಲಕ ತರಿಸಿದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಮಗುವಿನ ಜೀವ ಉಳಿಸಿದರು. ಲಾಕ್ ಡೌನ್ ಪರಿಣಾಮ ಔಷಧಿಯನ್ನು ತರಲಾಗದೆ ಮಗುವಿನ ಕುಟುಂಬದವರು ಸಂಕಷ್ಟಕ್ಕೆ ಸಿಲುಕಿದ್ದರು.
ಬೆಳಗಾವಿಯ ಬಿಜೆಪಿ ಸಂಸದ ಮತ್ತು ಕೇಂದ್ರ ಸಚಿವ ಸುರೇಶ್ ಅಂಗಡಿ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿ ಪುಣೆಯಿಂದ ಬೆಳಗಾವಿಗೆ ಔಷಧ ತರಿಸಿದ್ದಾರೆ. ಬೆಳಗಾವಿಗೆ ಬಂದ ಔಷಧಿಯನ್ನು ಇಲಾಖೆಯ ಸಿಬ್ಬಂದಿಯೇ ಮಗುವಿನ ಮನೆಗೆ ತಲುಪಿಸಿದ್ದಾರೆ.
ಘಟನೆ ವಿವರ : ಏಪ್ರಿಲ್ 11ರಂದು ಬೆಳಗಾವಿಯಲ್ಲಿರುವ ಸುರೇಶ್ ಅಂಗಡಿ ಅವರ ಕಚೇರಿಗೆ ಕರೆಯೊಂದು ಬಂದಿತ್ತು. ಬೆಳಗಾವಿಯಲ್ಲಿನ 5 ವರ್ಷದ ಮಗುವಿಗೆ ಪುಣೆಯ ಡಾಕ್ಟರ್ ಚಿಕಿತ್ಸೆ ನೀಡುತ್ತಿದ್ದಾರೆ. ಮಗುವಿಗೆ ಔಷಧಗಳ ಅಗತ್ಯವಿದ್ದು ಅದನ್ನು ಪುಣೆಯಿಂದ ತರಿಸಬೇಕಿದೆ.

ಮಹಾರಾಷ್ಟ್ರ ಸರ್ಕಾರದ ಜೊತೆ ಮಾತನಾಡಿ ಪುಣೆಯಿಂದ ಸಂಬಂಧಿಕರು ಔಷಧವನ್ನು ತರಲು ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿತ್ತು. ಪರಿಸ್ಥಿತಿ ಗಂಭೀರತೆ ಅರಿತ ಸಚಿವರು ಪುಣೆಯಲ್ಲಿರುವ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಗುವಿನ ಔಷಧಿಯನ್ನು ಪುಣೆ ರೈಲು ನಿಲ್ದಾಣಕ್ಕೆ ತರಲಾಯಿತು. ಬಳಿಕ ಬೆಳಗಾವಿ ಮಾರ್ಗವಾಗಿ ಸಂಚಾರ ನಡೆಸುತ್ತಿದ್ದ ಗೂಡ್ಸ್ ರೈಲಿನಲ್ಲಿ ಅದನ್ನು ಬೆಳಗಾವಿಗೆ ಕಳುಹಿಸಿಕೊಡಲಾಯಿತು. ಮರುದಿನ ಬೆಳಗ್ಗೆ ಔಷಧಿಗಳು ಬೆಳಗಾವಿ ತಲುಪಿತು.
ಆದರೆ, ಲಾಕ್ ಡೌನ್ ಕಾರಣದಿಂದ ಬೆಳಗಾವಿ ರೈಲು ನಿಲ್ದಾಣಕ್ಕೆ ಬರುವ ಮಾರ್ಗಗಳನ್ನು ಬಂದ್ ಮಾಡಲಾಗಿತ್ತು. ರೈಲ್ವೆ ಅಧಿಕಾರಿಗಳು ತಾವೇ ಔಷಧಿಯನ್ನು ಮಗುವಿನ ಮನೆಗೆ ತಲುಪಿಸುವ ಜವಾಬ್ದಾರಿ ತೆಗೆದುಕೊಂಡರು. ಔಷಧಿಯನ್ನು ತಲುಪಿಸಿದರು.












Click it and Unblock the Notifications