SM Krishna: ಕರ್ನಾಟಕ ನೀರಾವರಿಗೆ ಎಸ್.ಎಂ.ಕೃಷ್ಣ ಕೊಡುಗೆ ಅಪಾರ
ಬೆಳಗಾವಿ, ಡಿಸೆಂಬರ್ 10: ಕರ್ನಾಟಕದ ಧೀಮಂತ ನಾಯಕ, ಹಿರಿಯ ರಾಜಕಾರಣಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಇಂದು ಬೆಳಗಿನ ಜಾವ ನಿಧನರಾದರು. ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದೆ. ಸಚಿವ ಎಚ್ಕೆ ಪಾಟೀಲ್ ಅವರು ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗೆ ಎಸ್ಎಂ ಕೃಷ್ಣರು ನೀಡಿದ್ದ ಕೊಡುಗೆಗಳನ್ನು ಅವರು ಸ್ಮರಿಸಿದ್ದಾರೆ.
ಕೃಷ್ಣ ಅವರ ನಿಧನಕ್ಕೆ ಕಂಬನಿ ಮಿಡಿದ ಸಚಿವ ಎಚ್.ಕೆ.ಪಾಟೀಲ್ ಅವರು, ರಾಜ್ಯದ ನೀರಾವರಿಗೆ ಕೃಷ್ಣ ಅವರ ಕೊಡುಗೆ ಅಪಾರವಾಗಿದೆ. ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದ ಅವರು, ಕೆಬಿಜೆಎನ್ಎಲ್ ಕರ್ನಾಟಕ ನೀರಾವರಿ ನಿಗಮ ಸ್ಥಾಪನೆ ಕಾರ್ಯಕತೃವಾಗಿದ್ದರು ಎಂದು ಎಸ್.ಎಂ.ಕೃಷ್ಣ ಅವರ ಆಡಳಿತ, ಕಾರ್ಯ ವೈಖರಿಯನ್ನು ವಿವರಿಸಿದರು.

ಹಾಗೆಯೇ ಕಾವೇರಿ ನೀರಾವರಿ ನಿಗಮಕ್ಕೂ ಮಾಜಿ ಸಿಎಂ ಅವರ ಕೊಡುಗೆ ಮಹತ್ವದ್ದಾಗಿದೆ. ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗೆ ಚಾಲನೆ ನೀಡುವ ಮೂಲಕ ರೈತರ ಬದುಕಿಗೆ ಆಸೆಯಾಗಿದ್ದರು. ನನ್ನದು ಅವರದ್ದು ಎರಡನೇ ಜನರೇಷನ್ ಸಂಬಂಧ. ನನ್ನ ತಂದೆ ಜೊತೆಗೆ ಅವರು ನಿಕಟ ಸಂಬಂಧ ಹೊಂದಿದ್ದರು.
ಕೆ.ಎಚ್.ಪಾಟೀಲ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಅವರು ಹೇಳಿದ್ದರು. ನನ್ನನ್ನು ಸೇರಿದಂತೆ ತಮ್ಮ ಸಹೋದರರನ್ನು ಎಸ್ಎಂ ಕೃಷ್ಣ ಅವರು ಸ್ವಂತ ಮಕ್ಕಳಂತೆ ಕಾಣುತ್ತಿದ್ದರು ಎಂದು ಹೇಳಿದರು.
ಕರ್ನಾಟಕ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಎತ್ತರ ಬೆಳೆಸಲು ಸೂಚಿಸಿದ್ದರು. 1999 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಮಟ್ಟದ ಜನಾದೇಶ ಸಿಕ್ಕಾಗ, ನಾವು ಹೆಚ್ಚಿನ ಶಾಸಕರು ಮೆರವಣಿಗೆ ಮಾಡಿ ಕೃಷ್ಣ ಅವರು ನಾಡಿನ ಮುಖ್ಯಮಂತ್ರಿ ಆಗಬೇಕೆಂದು ಒತ್ತಾಯ ಮಾಡಿದ್ದೆವು.
ಎಸ್ಎಂ ಕೃಷ್ಣ ಅವರನ್ನು ಅವಿರೋಧವಾಗಿ ಮುಖ್ಯಮಂತ್ರಿ ಆಗಿ ಆಯ್ಕೆ ಮಾಡಲಗಿತ್ತು. ಸಚಿವ ಸಂಪುಟ ರಚನೆ ಮಾಡುವ ಸಂದರ್ಭದಲ್ಲಿ ನಮ್ಮಗಳ ಜೊತೆಗೆ ಯಾವ ಖಾತೆ ಬೇಕು ಎಂದೆಲ್ಲ ತಿಳಿಸಿದ್ದರು. ಆಗ ನಾನು ಕೇಳಿದ್ದ ಗ್ರಾಮೀಣಾಭಿವೃದ್ಧಿ ಖಾತೆಯ ಜವಾಬ್ದಾರಿಯನ್ನೇ ನನಗೆ ನೀಡಲು ಒಪ್ಪಿದ್ದರು ಎಂದು ಕೃಷ್ಣ ಅವರೊಂದಿಗೆ ಒಡನಾಟವನ್ನು ಸಚಿವರು ಸ್ಮರಿಸಿದರು.
ನೀರಾವರಿ ಖಾತೆ ನಿರ್ವಹಣೆ: ಅಧಿಕ ಅನುದಾನ ಮೀಸಲು
ನಂತರ ಕೆಲವು ಬದಲಾವಣೆಗಳು ಆದ ಪರಿಣಾಮ ನನಗೆ ಗ್ರಾಮೀಣಾಭಿವೃದ್ಧಿ ಖಾತೆ ಬದಲಾಗಿ ನೀರಾವರಿ ಖಾತೆ ಕೊಟ್ಟರು. ಅದರಲ್ಲಿ ನನಗೆ ಅನುಭವವಿರಲಿಲ್ಲ. ಆದರೆ ಉತ್ತರ ಕರ್ನಾಟಕ ಭಾಗದ ನೀರಾವರಿ ಸಮಸ್ಯೆ ಬಗ್ಗೆ ಮಾಹಿತಿ ಇತ್ತು. ನೀರಾವರಿ ಕ್ಷೇತ್ರದಲ್ಲಿ ಕೆಲಸ ಮಾಡುವಂತಾಯಿತು.
ಅನುದಾನದಲ್ಲಿ ಶೇಕಡಾ 37 ರಷ್ಟು ಹಣ ನೀರಾವರಿಗೆ ಮೀಸಲಾಗಿಟ್ಟಿದ್ದರು. ತನ್ನ ರಾಜಕೀಯ ನಡೆ, ನಿಲುವುಗಳ ಮೂಲಕ ಅವರು ಅಜಾತ ಶತ್ರುವಾಗಿದ್ದರು. ಶಿಸ್ತು, ಬದ್ಧತೆಗೆ ಅವರು ಮಾದರಿಯಾದವರು. ಇಂದು ನಾವು ದೊಡ್ಡ ವ್ಯಕ್ತಿತ್ವವನ್ನು ಕಳೆದುಕೊಂಡಿದ್ದೇವೆ ಎಂದು ಅವರ ಆತ್ಮಕ್ಕೆ ಶಾಂತಿ ಕೋರಿದರು.
ಸದನದಲ್ಲಿ ಕೃಷ್ಣ ಅವರ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸಲಾಗುತ್ತದೆ. ಇಂದು ಬಿಸಿನೆಸ್ ಅಡ್ವೈಸರಿ ಮೀಟಿಂಗ್ ಬೆಳಗ್ಗೆ 10 ಕ್ಕೆ ಇದ್ದು, ಅದನ್ನು ಸಂತಾಪ ಸಭೆ ಮಾಡಿ ಸಭೆ ಮಾಡಲಿದ್ದೇವೆ ಎಂದರು.












Click it and Unblock the Notifications