ನನಗೆ ಮೆಡಿಕಲ್ ಸೀಟ್ ಸಿಗಲಿಲ್ಲ ಅದಕ್ಕೆ ಆಸ್ಪತ್ರೆ ಕಟ್ಟಿಸ್ತಾ ಇದ್ದೀನಿ : ಸಿಎಂ
ಬೆಳಗಾವಿ, ನವೆಂಬರ್ 23 : ಹೇಳಬೇಕಾದ ವಿಷಯಕ್ಕೆ ಲಘುಹಾಸ್ಯ ಸೇರಿಸಿ ಎದುರಿದ್ದವರಿಗೆ ಅರ್ಥವಾಗುವಂತೆ ಹೇಳುವುದು ಸಿದ್ದರಾಮಯ್ಯ ಅವರಿಗೆ ಸಿದ್ದಿಸಿಬಿಟ್ಟಿದೆ. ಇದಕ್ಕೆ ಸಾಕ್ಷಿ ಎಂಬಂತೆ ಅವರ ಸಾಲು ಸಾಲು ಭಾಷಣಗಳನ್ನೇ ಕೇಳಬಹುದು. ಸಿದ್ದರಾಮಯ್ಯ ಅವರ ಹಾಸ್ಯಪ್ರಜ್ಞೆಗೆ ಸದನವು ಸಾಕ್ಷಿಯಾಗಿದೆ.
ಇಂದು (ನವೆಂಬರ್ 23)ರಂದು ಸದನದಲ್ಲಿ ವೈದ್ಯಕೀಯ ಕಾಲೇಜುಗಳ ನಿರ್ಮಾಣದ ಬಗ್ಗೆ ಪ್ರಶ್ನೆಗೆ ಉತ್ತರಿಸುತ್ತಾ ಸಿಎಂ ನೀಡಿದ ಉತ್ತರ ತಮಾಷೆಯಾಗಿತ್ತು. "ನಮ್ಮ ತಂದೆ ಕೂಡ ನನ್ನನ್ನ ಡಾಕ್ಟರ್ ಮಾಡ್ಬೇಕು ಅಂತಾ ಬಯಸಿದ್ರು, ಆಗ ಸಿಗಲೇ ಇಲ್ಲ, ಅದಕ್ಕೆ ನಾನು ತೀರ್ಮಾನ ಮಾಡಿದೆ, ಪ್ರತಿ ಜಿಲ್ಲೆಯಲ್ಲೂ ಮೆಡಿಕಲ್ ಕಾಲೇಜು ಮಾಡಬೇಕೆಂದು ಮೊದಲು ನಾಲ್ಕು ಸರಕಾರಿ ಮೆಡಿಕಲ್ ಕಾಲೇಜಿತ್ತು, ಇದೀಗ 17 ಮೆಡಿಕಲ್ ಕಾಲೇಜುಗಳಿವೆ, ಮುಂದಿನ ದಿನದಲ್ಲಿ ಎಲ್ಲ ಜಿಲ್ಲೆಯಲ್ಲೂ ಮೆಡಿಕಲ್ ಕಾಲೇಜು ಮಾಡ್ತೀವಿ ಎಂದರು.

ಚಿಕ್ಕೋಡಿ ಜಿಲ್ಲೆ ಆಗೋದು ಭೇಡ ಅಂದೋರು ಯಾರು
ಸಿದ್ದರಾಮಯ್ಯ ಅವರ ಮಾತಿನ ಮಧ್ಯೆ ಪ್ರವೇಶಿಸಿದ ಉಮೇಶ ಕತ್ತಿ ಮಧ್ಯೆ ಪ್ರವೇಶಿಸಿ ಚಿಕ್ಕೋಡಿ ಜಿಲ್ಲೆ ಆಗಲಿಲ್ಲ ಅನ್ಬೋ ಕಾರಣಕ್ಕೆ ಮೆಡಿಕಲ್ ಕಾಲೇಜ್ ಆಗಲಿಲ್ಲ, ಆದ್ರೂ ಒಂದು ಕಾಲೇಜು ಕೊಡಿ ಎಂದು ಒತ್ತಾಯ ಮಾಡಿದರು.
ಉಮೇಶ್ ಕತ್ತಿ ಅವರ ಮಾತಿಗೆ ಉತ್ತಿರಿಸಿದ ಸಿದ್ದರಾಮಯ್ಯ ಅವರು ಜೆ ಹೆಚ್ ಪಟೇಲ್ ಚಿಕ್ಕೋಡಿ ಜಿಲ್ಲೆ ಮಾಡಲು ಹೊರಟಾಗ ಬೇಡ ಅಂದೋರು ಯಾರು ? ಎಂದು ಪ್ರಶ್ನೆ ಮಾಡಿದರು. ಅಷ್ಟಕ್ಕೆ ಸುಮ್ಮನಾಗದೆ ಚಿಕ್ಕೋಡಿ ಜಿಲ್ಲೆ ಆಗುವುದನ್ನು ವಿರೋಧಿಸಿದವರಲ್ಲಿ ಉಮೇಶ್ ಕತ್ತಿ ಕೂಡ ಒಬ್ಬರು ಎಂದು ರಹಸ್ಯ ಬಯಲು ಮಾಡಿದರು.
'ಈ ಬೆಳಗಾವಿ ಶಾಸಕರಿದ್ದಾರಲ್ಲ ಇವರಿಂದಾಗಿಯೇ ಚಿಕ್ಕೋಡಿ ಜಿಲ್ಲೆ ಆಗಲಿಲ್ಲ, ಎಲ್ಲರೂ ಗೋಕಾಕ್ ಆಗ್ಲಿ ಅಂತಾ ಬೇಡ ಚಿಕ್ಕೋಡಿ ಆಗಲಿ ಅಂತಾ ಹೀಗಾಗಿ ಜೆ ಹೆಚ್ ಪಟೇಲರು ಬೇಡ್ವೇ ಬೇಡ ಅನ್ಕೊಂಡು ಮುಂದಕ್ಕೆ ಹಾಕಿದರು' ಎಂದು ಚಿಕ್ಕೋಡಿ ಜಿಲ್ಲೆ ಆಗದೇ ಇರುವುದಕ್ಕೆ ಕಾರಣ ಬಹಿರಂಗಪಡಿಸಿದರು.
ಬಹಿರ್ದೆಸೆ ಮುಕ್ತ ರಾಜ್ಯ
2018 ರ ಮಾರ್ಚ್ ಅಂತ್ಯಕ್ಕೆ ಇಡೀ ರಾಜ್ಯ ಬಯಲು ಬಹಿರ್ದೆಸೆ ಮುಕ್ತ ಆಗಲಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದರು. ಕುಡಿಯುವ ನೀರಿನಲ್ಲೂ ಉತ್ತಮ ಅಭಿವೃದ್ಧಿ ಕಾಣುತ್ತಿದ್ದು ಇಲ್ಲಿಯವರೆಗೆ 234 ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೂರ್ಣಗೊಂಡಿದೆ. ಉತ್ತರ ಕರ್ನಾಟಕದಲ್ಲಿ 163 ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೂರ್ತಿ ಮಾಡಿದ್ದೇವೆ ಇದರ ಜೊತೆಗೆ ಅಲ್ಪಸಂಖ್ಯಾತ, ಹಿಂದುಳಿದ, ದಲಿತ ಮತ್ತು ಮಹಿಳೆಯರಿಗೆ ಒಟ್ಟಿನಲ್ಲಿ ಅವಕಾಶ ವಂಚಿತರಿಗೆ ಅವಕಾಶ ನೀಡೋ ಕೆಲಸವನ್ನ ಸರ್ಕಾರ ಮಾಡಿದೆ ಎಂದರು.












Click it and Unblock the Notifications