ಯತ್ನಾಳ್ ಬೆಂಬಲಕ್ಕೆ ನಿಂತ ರಮೇಶ್ ಜಾರಕಿಹೊಳಿ: ಉಚ್ಛಾಟನೆ ರದ್ದು ಮಾಡಿಸುವ ಭರವಸೆ
ಬೆಳಗಾವಿ, ಮಾರ್ಚ್ 27: ಬಿಜೆಪಿ ನಾಯಕರ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸುತ್ತಿದ್ದ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕೊನೆಗೂ ಬಿಜೆಪಿ ಹೈಕಮಾಂಡ್ ಕ್ರಮ ಕೈಗೊಂಡಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಿ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ನಿನ್ನೆ ಆದೇಶ ಹೊರಡಿಸಿದೆ.
ಸದ್ಯ ಪಕ್ಷದಿಂದ ಉಚ್ಛಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರ ಕೆಲ ಬಿಜೆಪಿ ನಾಯಕರು ಧ್ವನಿ ಎತ್ತುತ್ತಿದ್ದು, ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಛಾಟನೆಯನ್ನು ರದ್ದು ಮಾಡಿಸುತ್ತೇವೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಟ್ಟ ಘಳಿಗೆ, ಏನೋ ಆಗಿದೆ. ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಛಾಟನೆಯನ್ನು ರದ್ದು ಮಾಡಿಸುತ್ತೇವೆ. ಎಲ್ಲವನ್ನೂ ಸರಿಪಡಿಸಿಕೊಂಡು ಹೋಗುತ್ತೇವೆ. ಈಗ ಬೇರೇನೂ ಮಾತನಾಡುವುದಿಲ್ಲ. ದಯವಿಟ್ಟು ವಿವಾದ ಮಾಡಬೇಡಿ ಎಂದು ಯತ್ನಾಳ್ ಅವರ ಉಚ್ಛಾಟನೆಯನ್ನು ಶೀಘ್ರವೇ ರದ್ದುಪಡಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಇದು ನಮಗೆ ಮೊದಲೇ ಗೊತ್ತಿತ್ತು. ನೋಟೀಸ್ ಕೊಟ್ಟಾಗಲೇ ವಾಸನೆ ಬಡಿದಿತ್ತು. ಇದು ಆಗಬಾರದಿತ್ತು ಮನಸ್ಸಿಗೆ ನೋವಾಗಿದೆ. ಎಲ್ಲವನ್ನೂ ಸರಿಪಡಿಸುತ್ತೇವೆ. ಬಿ.ವೈ ವಿಜಯೇಂದ್ರ ಅವರ ಬಗ್ಗೆ ಏನೂ ಮಾತನಾಡುವುದಿಲ್ಲ ಎಂದರು.

ಈ ಬಗ್ಗೆ ಜನರ ಭಾವನೆ ತಿಳಿದುಕೊಂಡು ಮಾತನಾಡೋಣ ಎಂದು ನಿನ್ನೆ ಈ ಬಗ್ಗೆ ಮಾತನಾಡಿಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಅವರು ಪಕ್ಷದ ದೊಡ್ಡ ನಾಯಕರು. ನಮ್ಮ ನಾಯಕರು ಹಾಗೂ ಪಕ್ಷ ಯಾಕೆ ಇಂತಹ ನಿರ್ಣಯ ತೆಗೆದುಕೊಂಡಿದೆ ಗೊತ್ತಿಲ್ಲ. ಅವರು ಇಂದು ರಾತ್ರಿ ಬೆಂಗಳೂರಿಗೆ ಬರುತ್ತಾರೆ. ನಾನೂ ಬೆಂಗಳೂರಿಗೆ ತೆರಳುತ್ತೇನೆ. ನಾಳೆ ಸಭೆ ಮಾಡುತ್ತೇವೆ. ಯತ್ನಾಳ್ ಉಚ್ಛಾಟನೆ ಹಿಂದಕ್ಕೆ ಪಡೆಯುವಂತೆ ಮನವಿ ಮಾಡುತ್ತೇವೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಇನ್ನು ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕೂಡ ಯತ್ನಾಳ್ ಬೆನ್ನಿಗೆ ನಿಂತಿದ್ದು, ಈ ಉಚ್ಛಾಟನೆ ಹಿಂಪಡೆಯದೇ ಹೋದರೆ ಎಲ್ಲಾ ಲಿಂಗಾಯತ ಶಾಸಕರು ಬಿಜೆಪಿ ಬಿಟ್ಟು ಹೊರ ಬನ್ನಿ, ಯತ್ನಾಳ್ ಏನೇ ಮಾತನಾಡಿದರೂ ಅವರು ಉತ್ತರ ಕರ್ನಾಟಕ, ಹಿಂದೂತ್ವದ ಬಗ್ಗೆಯೇ ಮಾತನಾಡಿದ್ದಾರೆ. ಯತ್ನಾಳ್ ಅವರನ್ನು ಉಚ್ಛಾಟನೆ ಮಾಡಿ ಬಿಜೆಪಿ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಿದ್ದು, ಇದು ಪಕ್ಷಕ್ಕೆ ಹಿನ್ನಡೆ. ಈಗ ಬಿಜೆಪಿ 90 ಸ್ಥಾನ ಬಂದಿದ್ದು, ಮುಂದೆ 30 ಸ್ಥಾನ ಕೂಡ ಬರುವುದಿಲ್ಲ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದರು.












Click it and Unblock the Notifications