ನಿಷ್ಠಾವಂತರಿಗೆ ಕಾಂಗ್ರೆಸ್ಸಲ್ಲಿ ಕಾಲವಿಲ್ಲ ಎಂದು ನೊಂದು ನುಡಿದ ರಮೇಶ್ ಜಾರಕಿಹೊಳಿ
ಬೆಳಗಾವಿ, ನವೆಂಬರ್ 16: ಬಿಜೆಪಿ ಸೇರಿರುವ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದ ಜತೆಗಿನ ತಮ್ಮ ನಂಟನ್ನು ನೆನೆದು ಭಾವುಕರಾಗಿದ್ದಾರೆ. "ನಾನು ಮಾಜಿ ಪ್ರಧಾನಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ಕಟ್ಟಾ ಅಭಿಮಾನಿ. ಬಿಜೆಪಿ ಸೇರುವ ಹಿಂದಿನ ದಿನ ರಾತ್ರಿ ನನಗೆ ಒಂದು ನಿಮಿಷ ಕೂಡ ನಿದ್ದೆ ಬಂದಿಲ್ಲ. ನನ್ನ ದುಖಃವನ್ನು ನಾನು ಬಹಿರಂಗವಾಗಿ ಹೇಳಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ" ಎಂದು ಭಾವುಕವಾಗಿ ಮಾತನಾಡಿದ್ದಾರೆ.
"ನಾನು ಕಾಂಗ್ರೆಸ್ ನಲ್ಲೇ ಉಳಿದಿದ್ದರೆ ನನ್ನನ್ನು ನಿರ್ಣಾಮ ಮಾಡುತ್ತಿದ್ದರು. ಕಾಂಗ್ರೆಸ್ ನಲ್ಲಿ ಬ್ಯಾಗ್ ಹಿಡಿದು ಬಾಗಿಲು ಕಾಯೋರು ಮಾತ್ರ ಲೀಡರ್ ಗಳಾಗುತ್ತಾರೆ.
ಪಕ್ಷದಲ್ಲಿ ಮಾಸ್ ಲೀಡರ್ ಗಳಿಗೆ ಯಾವುದೇ ಬೆಲೆ ಇಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಪಕ್ಷವನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾರೆ" ಎಂದು ದೂರಿದರು.

"ಮಲ್ಲಿಕಾರ್ಜುನ ಖರ್ಗೆಗೆ ಬ್ಲ್ಯಾಕ್ ಮೇಲ್ ಮಾಡಲು ಬರಲ್ಲ"
"ಮಲ್ಲಿಕಾರ್ಜುನ ಖರ್ಗೆ ಬ್ಲ್ಯಾಕ್ ಮೇಲ್ ಮಾಡಲ್ಲ, ಧೈರ್ಯವನ್ನೂ ಮಾಡಲ್ಲ. ಆದರೆ ಸಿದ್ದರಾಮಯ್ಯ ಎರಡನ್ನು ಮಾಡಿ ಕಾಂಗ್ರೆಸ್ ನಲ್ಲಿ ಸಿಎಂ ಆದರು. ನಿಷ್ಠಾವಂತರಿಗೆ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬೆಲೆ ಇಲ್ಲ" ಎಂದು ಆರೋಪಿಸಿದರು.

ನಾನು ಸೀನಿಯರ್, ಹೆಬ್ಬಾಳ್ಕರ್ ಕೂರಿಸಿದರೆ ಹೇಗೆ?
"ಈಗ ತೋಳ ಬಂತು ತೋಳ ಅಲ್ಲ, ಹುಲಿ ಬಂತು ಹುಲಿಯಾಗಿದೆ" ಎಂದು ಆಪರೇಷನ್ ಕಮಲದ ಬಗ್ಗೆ ವ್ಯಂಗ್ಯವಾಡಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಟಾಂಗ್ ನೀಡಿದರು. ಜೊತೆಗೆ ಡಿಕೆಶಿ ಜತೆಗೆ ಜಗಳಕ್ಕೆ ಬೆಳಗಾವಿ ರಾಜಕಾರಣದಲ್ಲಿ ಅವರ ಹಸ್ತಕ್ಷೇಪವೇ ಕಾರಣ ಎಂದರು. "ಹೆಬ್ಬಾಳ್ಕರ್ ಸೀನಿಯರ್ ಆದಮೇಲೆ ಸಿಎಂ ಮಾಡಲು ನಮ್ಮದೇನು ಅಭ್ಯಂತರ ಇಲ್ಲ. ನಾನು ಸೀನಿಯರ್, ನನ್ನ ತಲೆಮೇಲೆ ಆಕೆಯನ್ನು ಕೂರಿಸಿದರೆ ಒಪ್ಪಲು ಹೇಗೆ ಸಾಧ್ಯ?. ಸಮ್ಮಿಶ್ರ ಸರ್ಕಾರ ಸಂದರ್ಭದಲ್ಲಿ ಹೆಬ್ಬಾಳ್ಕರ್ ಗೆ ಯಾವುದೇ ಸ್ಥಾನಮಾನ ಕೊಡಬಾರದು ಎಂದು ನಾನು ಷರತ್ತು ವಿಧಿಸಿದೆ. ಸಿದ್ದರಾಮಯ್ಯ, ಡಿಕೆಶಿ ಹಾಗೂ ಗುಂಡೂರಾವ್ ಸಮ್ಮುಖದಲ್ಲಿಯೇ ನಿರ್ಧಾರವಾಗಿತ್ತು
ಆದರೂ ಲಕ್ಷ್ಮೀ ಹೆಬ್ಬಾಳ್ಕರ್ ಗೆ ನಿಗಮ ಮಂಡಳಿಯನ್ನು ನೀಡಿದರು" ಎಂದು ದೂರಿದರು.

ಹೊಟ್ಟೆ ಕಿಚ್ಚುಪಡುವಷ್ಟು ಸಣ್ಣ ಮನುಷ್ಯನಲ್ಲ
ಸತೀಶ್ ಜಾರಕಿಹೊಳಿ ಹೋರಾಟಗಾರ ಅಲ್ಲ, ಸತೀಶ್, ಹೆಬ್ಬಾಳ್ಕರ್ ಮನೆಗೆ ಚಹಾ ಕುಡಿಯೋಕೆ ಹೋಗುತ್ತಿದ್ದರು. ಅನಿವಾರ್ಯವಾಗಿ ನಾನು ನಿರ್ಧಾರ ಕೈಗೊಳ್ಳುವ ಸ್ಥಿತಿ ನಿರ್ಮಾಣವಾಯಿತು, ಲಕ್ಷ್ಮೀ ಹೆಬ್ಬಾಳ್ಕರ್ ಪ್ರಭಾವಿ ಆಗೋಕೆ ಡಿಕೆಶಿ ಅಷ್ಟೇ ಅಲ್ಲ ನಾವು ಕಾರಣರು. ಹೆಬ್ಬಾಳ್ಕರ್ ಸಚಿವೆಯಾದ್ರೆ ಹೊಟ್ಟೆ ಕಿಚ್ಚುಪಡುವಷ್ಟು ಸಣ್ಣ ಮನುಷ್ಯ ನಾನಲ್ಲ, ಆಕೆಯ ಹಣೆಬರದಲ್ಲಿ ಇದ್ರೆ ಸಚಿವೆಯಾಗಲಿ ತೊಂದರೆ ಇಲ್ಲ. ಆದರೆ ಆಕೆಗಾಗಿ ದುಡಿದವರ ಬಗ್ಗೆ ಸ್ವಲ್ಪ ಚಿಂತೆ ಮಾಡಬೇಕಿತ್ತು. ಕಾಂಗ್ರೆಸ್ ಪಕ್ಷ ಡಿಕೆಶಿ ಕೈಯಲ್ಲಿದೆ, ನಂದೇ ರಾಜ್ಯ ಅನ್ನುವಂತೆ ಅವರಿಗೆ ಭಾವನೆ ಬಂತು. ರಾಜಕಾರಣದಲ್ಲಿ ಯಾರು ದೊಡ್ಡವರು, ಸಣ್ಣವರು ಎಂಬುದು ತಿಳಿಯಲಿಲ್ಲ" ಎಂದರು.

ಪೋಸ್ ಕೊಟ್ಟವರು ಜೀರೋ
ರಾಜಕಾರಣದಲ್ಲಿ ಪೋಸ್ ಕೊಡದೇ ಇರುವವರು ಶೇ100 ರಷ್ಟು ಸರಿ ಇರುತ್ತಾರೆ. ಯಾರು ಪೋಸ್ ಕೊಟ್ಟಾರೋ ಅವರು ಬಿಗ್ ಜೀರೋ ಆಗಿರುತ್ತಾರೆ. ಇದು ನಿಜ ಎಂದು ಕಾಂಗ್ರೆಸ್ ನಾಯಕರಿಗೆ ಪರೋಕ್ಷವಾಗಿ ವ್ಯಂಗ್ಯ ಮಾಡಿದ್ದಾರೆ ರಮೇಶ್ ಜಾರಕಿಹೊಳಿ.











Click it and Unblock the Notifications