ನಾಪತ್ತೆಯಾಗಿದ್ದ ಶಾಸಕ ಮಹೇಶ್ ಕುಮಟಳ್ಳಿ ಕೊನೆಗೂ ಕ್ಷೇತ್ರಕ್ಕೆ ವಾಪಸ್!
ಚಿಕ್ಕೋಡಿ, ಜನವರಿ 25: ಕಳೆದ 15-20 ದಿನಗಳಿಂದಲೂ ನಾಪತ್ತೆಯಾಗಿದ್ದ ಅಥಣಿಯ ಕಾಂಗ್ರೆಸ್ ಶಾಸಕ ಮಹೇಶ್ ಕುಮಟಳ್ಳಿ ಅವರು ನಿನ್ನೆ ರಾತ್ರಿ ಸ್ವಕ್ಷೇತ್ರಕ್ಕೆ ವಾಪಸ್ಸಾಗಿದ್ದಾರೆ.
ಕಾಂಗ್ರೆಸ್ ಮೇಲೆ ಮುನಿಸಿಕೊಂಡು ಮುಂಬೈನ ಪಂಚತಾರಾ ಹೊಟೆಲ್ ಸೇರಿ ಬಿಜೆಪಿಗೆ ಹಾರಲು ಸಜ್ಜಾಗಿದ್ದ ಅವರು ಕಳೆದ 15-20 ದಿನಗಳಿಂದಲೂ ಕ್ಷೇತ್ರಕ್ಕೆ ಕಾಲಿಟ್ಟಿರಲಿಲ್ಲ.
ನಿನ್ನೆ ಕ್ಷೇತ್ರಕ್ಕೆ ವಾಪಸ್ಸಾಗಿರುವ ಅವರು, ನನಗೆ ಬೆನ್ನು ನೋವಿತ್ತು ಹಾಗಾಗಿ ಮುಂಬೈಗೆ ಚಿಕಿತ್ಸೆಗೆ ಹೋಗಿದ್ದೆ ಎಂದು ಸಬೂಬು ಹೇಳಿದ್ದಾರೆ.

ನಮ್ಮ ನಾಯಕ ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಮೇಲೆ ಮುನಿಸಿದ್ದಿದ್ದು ನಿಜ, ಆದರೆ ಈಗ ಎಲ್ಲವೂ ಸರಿ ಹೋಗಿದೆ. ನಾವು ಯಾವುದೇ ಹಣ ಅಥವಾ ಅಧಿಕಾರದ ಆಮೀಷಕ್ಕೆ ಒಳಗಾಗಿ ಮುಂಬೈಗೆ ಹೋಗಿರಲಿಲ್ಲ ಎಂದು ಅವರು ಹೇಳಿದ್ದಾರೆ.
ನಾನು ಯಾವುದೇ ಸಮಿತಿ ಅಥವಾ ಸಚಿವ ಸ್ಥಾನ ಆಕಾಂಕ್ಷಿ ಅಲ್ಲ ಎಂದ ಅವರು, ನಾನು 25 ವರ್ಷಗಳಿಂದಲೂ ಕಾಂಗ್ರೆಸ್ ಕಾರ್ಯಕರ್ತ ಯಾವುದೇ ಕಾರಣಕ್ಕೂ ನಾನು ಪಕ್ಷ ಬಿಡುವುದಿಲ್ಲ. ಸಿಎಲ್ಪಿ ಸಭೆಗೆ ಹೋಗದೆ ಇರಲು ಬೆನ್ನುನೋವು ಕಾರಣವೇ ಹೊರತು ಬೇರೇನೂ ಅಲ್ಲ ಎಂದು ಅವರು ಹೇಳಿದರು.
ಅಥಣಿ ಕ್ಷೇತ್ರದ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಹುಡುಕಿಕೊಡಿ ಎಂದು ಫೇಸ್ಬುಕ್ ನಲ್ಲಿ ಪೋಸ್ಟ್ಗಳು ಹರಿದಾಡುತ್ತಿದ್ದವು. ಮಹೇಶ್ ಅವರು ಮಾತ್ರವಲ್ಲದೆ ಅತೃಪ್ತ ಶಾಸಕರಾದ ಉಮೇಶ್ ಜಾಧವ್, ಬಿ.ನಾಗೇಂದ್ರ ಅವರುಗಳು ಸಹ ತಮ್ಮ-ತಮ್ಮ ಕ್ಷೇತ್ರಗಳಿಗೆ ವಾಪಸ್ ಆಗಿದ್ದಾರೆ.












Click it and Unblock the Notifications