ಕನ್ನಡ ರಾಜ್ಯೋತ್ಸವದಂದು ಕಿರಿಕ್ ಮಾಡಲು ಅನುಮತಿ ಕೇಳಿದ ಎಂಇಎಸ್
ಬೆಳಗಾವಿ, ಅಕ್ಟೋಬರ್ 30: ಮಹಾರಾಷ್ಟ್ರ ಏಕೀಕರಣ ಸಮಿತಿಯು (ಎಂಇಎಸ್) ತನ್ನ ಫುಂಡತನವನ್ನು ಈ ಬಾರಿಯೂ ಮುಂದುವರೆಸುವ ಯತ್ನ ಮಾಡಿದೆ. ನವೆಂಬರ್ 1 ರ ಕನ್ನಡ ರಾಜ್ಯೋತ್ಸವದಂದು ಕರಾಳ ದಿನ ಆಚರಣೆಗೆ ಅದು ಅನುಮತಿ ಕೇಳಿದೆ.
ಎಂಇಎಸ್ಗೆ ನವೆಂಬರ್ 1 ರಂದು ಕರಾಳ ದಿನ ಆಚರಣೆಗೆ ಅನುಮತಿ ನೀಡಬೇಕೋ ಬೇಡವೋ ಎಂಬುದನ್ನು ನಾಳೆ (ಅಕ್ಟೋಬರ್ 31) ರಂದು ನಿರ್ಧರಿಸಲಾಗುವುದು ಎಂದು ಬೆಳಗಾವಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಸೀಮಾ ಲಾಟ್ಕರ್ ಅವರು ಹೇಳಿದ್ದಾರೆ.
ಇದು ಅತ್ಯಂತ ಸೂಕ್ಷ್ಮ ವಿಚಾರ ಆಗಿರುವ ಕಾರಣ ಪೊಲೀಸ್ ಇಲಾಖೆ ವರದಿ ಆಧರಿಸಿ ಮೆರವಣಿಗೆಗೆ ಅವಕಾಶ ನೀಡಬೇಕೊ ಬೇಡವೋ ಎಂದು ನಿರ್ಧರಿಸಲಾಗುತ್ತದೆ. ಅನುಮತಿ ಕೇಳಿರುವ ಸದಸ್ಯರಲ್ಲಿ ಮೂವರಿಂದ ತಲಾ 5 ಲಕ್ಷಗಳ ಸ್ವಯಂ ಮುಚ್ಚಳಿಕೆ ಬರೆಸಿಕೊಳ್ಳುವ ಯೋಜನೆ ಇದೆ ಎಂದು ಅವರು ಹೇಳಿದರು.

ಸಾಂಭಾಜಿ ವೃತ್ತದಿಂದ ಮೆರವಣಿಗೆ ಮಾಡಲು ಅವಕಾಶ ಕೇಳಲಾಗಿದೆ, ಮೆರವಣಿಗೆ ಸಮಯದಲ್ಲಿ ಕನ್ನಡ ವಿರೋಧಿ ಘೋಷಣೆ ಕೂಗುವ ಸಂಭವವೂ ಇದೆ. ಹಾಗಾಗಿ ಜಿಲ್ಲಾಡಳಿತವು ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ನಾಳೆ ಪೊಲೀಸ್ ಇಲಾಖೆಯೊಂದಿಗೆ ಸಭೆ ಮಾಡಲಿದೆ. ಎಂಇಎಸ್ ಸದಸ್ಯರು ಮುಚ್ಚಳಿಕೆ ಕೊಟ್ಟ ನಂತರವೇ ಅನುಮತಿ ಕೊಡುವ ಬಗ್ಗೆ ಚರ್ಚಿಸಲಾಗುವುದು ಎಂದು ಸೀಮಾ ಲಾಟ್ಕರ್ ಹೇಳಿದ್ದಾರೆ.
ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ದಿನದಂದು ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆಯು ಕರಾಳ ದಿನ ಆಚರಣೆ ಮಾಡಿ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಪುಂಡಾಟಿಕೆಯನ್ನು ಮಾಡುತ್ತಲೇ ಬಂದಿದೆ. ಈ ಬಾರಿಯೂ ಅದನ್ನು ಮುಂದುವರೆಸುವ ಯತ್ನ ಮಾಡುತ್ತಿದೆ.












Click it and Unblock the Notifications