ಡಿಸೆಂಬರ್ 17ರಂದು ಬೆಳಗಾವಿ ಕೆಎಟಿ ಪೀಠ ಲೋಕಾರ್ಪಣೆ
ಬೆಳಗಾವಿ, ಡಿಸೆಂಬರ್ 05 : ಉತ್ತರ ಕರ್ನಾಟಕದಲ್ಲಿ ಕೆಎಟಿ ಪೀಠ ಸ್ಥಾಪನೆ ಮಾಡಬೇಕು ಎಂಬ ಬೇಡಿಕೆಗೆ ಒಪ್ಪಿಗೆ ಸಿಕ್ಕಿದೆ. ಬೆಳಗಾವಿ ಮತ್ತು ಕಲಬುರಗಿಯಲ್ಲಿ ಕೆಎಟಿ ಪೀಠ ಡಿಸೆಂಬರ್ ತಿಂಗಳಿನಲ್ಲಿಯೇ ಕಾರ್ಯಾರಂಭ ಮಾಡಲಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬೆಳಗಾವಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಪೀಠವನ್ನು ಡಿಸೆಂಬರ್ 17ರಂದು ಉದ್ಘಾಟಿಸಲಿದ್ದಾರೆ. ಉದ್ಘಾಟನೆ ದಿನಾಂಕದ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ರವಾನೆ ಮಾಡಲಾಗಿದೆ.
ನ್ಯಾಯಮೂರ್ತಿ ಕೆ.ಭಕ್ತವತ್ಸಲ ಅವರು ಅಧ್ಯಕ್ಷರಾಗಿರುವ ಪೀಠ ಬೆಳಗಾವಿಯಲ್ಲಿ ಡಿಸೆಂಬರ್ 17ರಿಂದಲೇ ಕೆಲಸ ಆರಂಭಿಸಲಿದೆ. ಈಗಿರುವ ಸಿಬ್ಬಂದಿಗಳನ್ನು ಇಟ್ಟುಕೊಂಡು ಡಿಸೆಂಬರ್ 21ರಿಂದ ಕಲಬುರಗಿಯಲ್ಲಿ ಕೆಲಸ ಆರಂಭಿಸಲಾಗುತ್ತದೆ.

ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಗೆ ಸಿಬ್ಬಂದಿಗಳನ್ನು ನೇಮಕ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಗೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ. ಆದ್ದರಿಂದ, ಇರುವ ಸಿಬ್ಬಂದಿಗಳನ್ನು ಇಟ್ಟುಕೊಂಡು ಪೀಠಗಳು ಕೆಲಸ ಮಾಡಲಿವೆ.
ಉತ್ತರ ಕರ್ನಾಟಕದಲ್ಲಿ ಕೆಎಟಿ ಪೀಠ ಸ್ಥಾಪನೆ ಮಾಡಬೇಕು ಎಂಬುದು ಹಲವು ವರ್ಷಗಳ ಒತ್ತಾಯವಾಗಿದೆ. ಬೆಳಗಾವಿ ಪೀಠದ ಉದ್ಘಾಟನೆಗೆ ದಿನಾಂಕ ನಿಗದಿಯಾಗಿದೆ. ಆದರೆ, ಕಲಬುರಗಿ ಪೀಠದ ಉದ್ಘಾಟನೆ ದಿನಾಂಕ ಇನ್ನೂ ಅಂತಿಮಗೊಂಡಿಲ್ಲ. ಆದರೆ, ಕೆಲಸ ಡಿ.21ರಿಂದ ಆರಂಭವಾಗಲಿದೆ.
ಯಾವ-ಯಾವ ಜಿಲ್ಲೆಗಳು : ಬೆಳಗಾವಿ ಕೆಎಟಿ ಪೀಠದ ವ್ಯಾಪ್ತಿಗೆ ಬೆಳಗಾವಿ, ಬಾಗಲಕೋಟೆ, ಬಳ್ಳಾರಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಉತ್ತರ ಕನ್ನಡ ಜಿಲ್ಲೆಗಳು ಒಳಪಡಲಿವೆ. ಈ ಜಿಲ್ಲೆಗಳಿಗೆ ಸೇರಿದ 2644 ಕೇಸುಗಳು ಬಾಕಿ ಇವೆ.
ಕಲಬುರಗಿ ಕೆಎಟಿ ಪೀಠದ ವ್ಯಾಪ್ತಿಗೆ ಬೀದರ್, ಕಲಬುರಗಿ, ವಿಜಯಪುರ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳು ಸೇರಲಿವೆ. ಈ ಜಿಲ್ಲೆಗಳ 1506 ಕೇಸುಗಳು ಬಾಕಿ ಇವೆ.












Click it and Unblock the Notifications