ಶವದ ಜೊತೆಗೆ ಚಿನ್ನ ಪತ್ತೆ ಪ್ರಕರಣ: ಹಂತಕನನ್ನು ಬಂಧಿಸಿದ ಅಥಣಿ ಪೊಲೀಸರು
ಬೆಳಗಾವಿ, ಅಕ್ಟೋಬರ್ 14: ಒಂದೂವರೆ ಕೆಜಿ ಚಿನ್ನದ ಜತೆಗೆ ಕೃಷ್ಣಾ ನದಿಯಲ್ಲಿ ಶವ ಪತ್ತೆಯಾದ ಪ್ರಕರಣವನ್ನು ಬೆಳಗಾವಿ ಜಿಲ್ಲೆಯ ಅಥಣಿ ಪೊಲೀಸರು ಭೇದಿಸಿದ್ದಾರೆ.
ಅಥಣಿ ತಾಲೂಕಿನ ಅವರಖೋಡ ಗ್ರಾಮದ ಕೃಷ್ಣಾ ನದಿಯ ದಡದಲ್ಲಿ ಪತ್ತೆಯಾದ ವ್ಯಕ್ತಿ ಹತ್ಯೆಗೊಳಗಾಗಿರುವುದು ತನಿಖೆಯಿಂದ ದೃಢಪಟ್ಟಿದೆ. ಈ ಪ್ರಕರಣ ಸಂಬಂಧ ಅಥಣಿ ಠಾಣೆ ಪೊಲೀಸರು ಕೊಲೆ ಮಾಡಿರುವ ಹಂತಕನನ್ನು ಬಂಧಿಸಿದ್ದಾರೆ. ಅಥಣಿ ತಾಲೂಕಿನ ಜಂಬಗಿ ಗ್ರಾಮದ ನವನಾಥ ಬಾಬರ್ ಬಂಧಿತನಾಗಿದ್ದು, ಈತನಿಂದ 2 ಲಕ್ಷ ರೂ. ಮೌಲ್ಯದ ಮೂರುವರೆ ಕೆಜಿ ಬೆಳ್ಳಿ ವಶಪಡಿಸಿಕೊಂಡಿದ್ದಾರೆ.
ಘಟನೆ ಹಿನ್ನೆಲೆ:
ಕೃಷ್ಣಾ ನದಿಯಲ್ಲಿ ಅ. 5 ರಂದು ಪತ್ತೆಯಾದ ಶವದ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಮೃತ ವ್ಯಕ್ತಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಪಾಟಗಾಂವ ಗ್ರಾಮದ ಸಾಗರ್ ಪಾಟೀಲ (30) ಎಂದು ಗುರುತಿಸಲಾಗಿತ್ತು.

ಸಂಬಂಧಿ ಸಂತೋಷ ಜತೆಗೂಡಿ ಸಾಗರ್, ಉತ್ತರ ಪ್ರದೇಶದ ಜಾಂದೌಲಿ ಜಿಲ್ಲೆಯಲ್ಲಿ ಚಿನ್ನ ಕರಗಿಸಿ ಗಟ್ಟಿ ಚಿನ್ನ ಮಾಡಿಕೊಡುವ ವ್ಯಾಪಾರ ನಡೆಸುತ್ತಿದ್ದರು. ಒಂದೂವರೆ ಕೆಜಿ ಚಿನ್ನದ ಜತೆಗೆ ಅ.5 ರಂದು ಸಾಗರ್ ಮಹಾರಾಷ್ಟ್ರದ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದನು.
ಆ ವೇಳೆ ನವನಾಥ್ ತನ್ನ ಸ್ನೇಹಿತರ ಜತೆಗೂಡಿ ಸಾಗರ್ ನನ್ನು ತಡೆದಿದ್ದಾರೆ. ಸಾಗರ್ ಕೈಯಲ್ಲಿರುವ ಬ್ಯಾಗಲ್ಲಿ ಚಿನ್ನ ಇದೆ ಎಂದು ಭಾವಿಸಿ ಇಬ್ಬರು ಸೇರಿ ಸಾಗರ್ ನನ್ನು ಹತ್ಯೆಗೈದು ಚೀಲ ಕಸಿದುಕೊಂಡಿದ್ದಾರೆ. ಬಳಿಕ ಸಾಕ್ಷ್ಯ ನಾಶಪಡಿಸಲು ಶವವನ್ನು ಕೃಷ್ಣಾ ನದಿಯಲ್ಲಿ ಎಸೆದಿದ್ದಾರೆ.

ಆದರೆ ಸಾಗರ್ ಪಾಟೀಲ್ ಚಿನ್ನವನ್ನು ಬ್ಯಾಗಿನಲ್ಲಿ ಇಡದೇ ತಮ್ಮ ಪ್ಯಾಂಟಿನ ಜೇಬಿನಲ್ಲಿ ಇಟ್ಟುಕೊಂಡಿದ್ದನು. ಹೀಗಾಗಿ ಅಥಣಿ ಪೊಲೀಸರಿಗೆ ಶವದ ಜತೆಗೆ ಒಂದೂವರೆ ಕೆಜಿ ಬಂಗಾರ ಸಿಕ್ಕಿತ್ತು. ಅಥಣಿ ಡಿವೈಎಸ್ಪಿ ಎಸ್.ವಿ ಗಿರೀಶ್ ನೇತೃತ್ವದ ತಂಡ ಪ್ರಮುಖ ಹಂತಕನನ್ನು ಬಂಧಿಸಿದ್ದು, ಮತ್ತೋರ್ವನಿಗೆ ತಲಾಷ್ ನಡೆಸಿದ್ದಾರೆ.












Click it and Unblock the Notifications