ಬೆಳಗಾವಿಯ ಗೋಕಾಕ್ ಗೆ ಮತ್ತೆ ಜಲಕಂಟಕ; ನೂರಾರು ಮನೆಗಳು ಜಲಾವೃತ
ಬೆಳಗಾವಿ, ಆಗಸ್ಟ್ 18: ಕರ್ನಾಟಕ ಮತ್ತು ಮಹಾರಾಷ್ಟ್ರ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಘಟಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಹೀಗಾಗಿ ಬೆಳಗಾವಿ ಜಿಲ್ಲೆ ಗೋಕಾಕ್ ನಗರಕ್ಕೆ ಮತ್ತೆ ಜಲಕಂಟಕ ಭೀತಿ ಶುರುವಾಗಿದೆ.
ಗೋಕಾಕ್ ನಗರ ಹೊರವಲಯದ ಪ್ರದೇಶಗಳಿಗೆ ನೀರು ನುಗ್ಗಿದೆ. ಅಂಗಡಿ ಮುಂಗಟ್ಟುಗಳು ಜಲಾವೃತಗೊಂಡಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಗೋಕಾಕ್ ನಗರದ ಹಳೆಯ ದನದ ಪೇಟೆ ಬಳಿ ನೂರಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿವೆ. ಮನೆಗಳು ಜಲಾವೃತಗೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ಪರದಾಡುವಂತಾಗಿದೆ.

ಕಳೆದ ವರ್ಷವೂ ಇದೇ ರೀತಿ ಆಗಿತ್ತು
ಗೋಕಾಕ್ನ ಮಹಾಲಿಂಗೇಶ್ವರ ನಗರಕ್ಕೆ ನೀರು ನುಗ್ಗಿದೆ. ಮನೆಗಳು, ಅಂಗಡಿ ಸಂಪೂರ್ಣ ಜಲಾವೃತಗೊಂಡಿವೆ. ಕಳೆದ ವರ್ಷವಷ್ಟೇ ಭೀಕರ ಜಲಪ್ರಳಯದಿಂದ ತತ್ತರಿಸಿದ್ದ ಗೋಕಾಕಿಗೆ ಈಗ ಮತ್ತೆ ಜಲಕಂಟಕ ಭೀತಿ ಶುರುವಾಗಿದೆ.

ಬಾಣಂತಿ ವಾಸವಿದ್ದ ಮನೆ ಗೋಡೆ ಕುಸಿತ
ಬಾಣಂತಿ ಸೇರಿ 6 ಜನರು ವಾಸವಿದ್ದ ಮನೆಯ ಗೋಡೆ ಕುಸಿತಗೊಂಡಿರುವ ಘಟನೆ ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರೆಲ್ಲ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾಳೇಶ ದುಂಡಪ್ಪಾ ಪಾಟೀಲ್ ಎಂಬುವವರಿಗೆ ಸೇರಿದ ಮನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಗೋಡೆ ಕುಸಿದಿದೆ. ತಕ್ಷಣವೇ ಸ್ಥಳೀಯರು ಮನೆಯಲ್ಲಿದ್ದವರನ್ನು ರಕ್ಷಿಸಿ ಬಾಣಂತಿ, ಮಗುವಿಗೆ ಆಸರೆ ನೀಡಿದ್ದಾರೆ. ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಜಲಾವೃತಗೊಂಡ ರಸ್ತೆಯಲ್ಲೇ ಶವ ಸಾಗಣೆ
ಜಲಾವೃತಗೊಂಡ ರಸ್ತೆಯಲ್ಲೇ ಶವವನ್ನು ಸಂಬಂಧಿಕರು ಸಾಗಿಸಿದ ಘಟನೆ ಬೆಳಗಾವಿಯ ಸಾಯಿ ನಗರದಲ್ಲಿ ನಡೆದಿದೆ. ಧಾರಾಕಾರ ಮಳೆ ಹಿನ್ನೆಲೆಯಲ್ಲಿ
ಬಳ್ಳಾರಿ ನಾಲೆ ಅಪಾಯಮಟ್ಟ ಮೀರಿ ಹರಿಯುತ್ತಿದೆ. ಸಾಯಿನಗರ ಸೇರಿ ಸುತ್ತಮುತ್ತಲಿನ ಪ್ರದೇಶದ ರಸ್ತೆಗಳು ಬಳ್ಳಾರಿ ನಾಲೆ ನೀರು ನುಗ್ಗಿ ಜಲಾವೃತಗೊಂಡಿವೆ. ರಸ್ತೆಯಲ್ಲಿ ನೀರು ಬಂದ ಕಾರಣ ಶವದ ವಾಹನ ಒಳಗೆ ಬಂದಿಲ್ಲ. ಹೀಗಾಗಿ ಜಲಾವೃತಗೊಂಡ ರಸ್ತೆಯಲ್ಲಿ ಶವ ಹೊತ್ತುಕೊಂಡು ಬಂದು ಸ್ಮಶಾನಕ್ಕೆ ಕರೆದೊಯ್ಯಲಾಗಿದೆ. ಮೊಣಕಾಲು ತನಕ ನೀರಿನಲ್ಲಿ ದಾಟಿ ನೂರಾರು ಜನರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

ಅಪಾಯ ಮಟ್ಟ ಮೀರಿ ಹರಿಯುತ್ತಿರುವ ನದಿಗಳು
ಮಹಾರಾಷ್ಟ್ರ ಘಟ್ಟಪ್ರದೇಶದಲ್ಲಿ ಮಳೆ ಮುಂದುವರೆದಿದ್ದು, ಅಲ್ಲಿನ ಎಲ್ಲ ಜಲಾಶಯಗಳು ಭರ್ತಿಯಾಗಿವೆ. ಭರ್ತಿಯಾದ ವಿವಿಧ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ನದಿ ತೀರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಡಳಿತ ಖಡಕ್ ಸೂಚನೆ ನೀಡಿದೆ. ಇಂಗಳಿ ಗ್ರಾಮಕ್ಕೆ ನೀರು ನುಸುಳಿದ್ದರಿಂದ ತೋಟಪಟ್ಟಿ ಜನರು ಸ್ಥಳಾಂತರಗೊಂಡಿದ್ದಾರೆ.












Click it and Unblock the Notifications