ಬೆಳಗಾವಿಯಲ್ಲಿ ಇನ್ಮುಂದೆ ವಾಹನ ಹೊರಬಂದರೆ ಕ್ರಿಮಿನಲ್ ಕೇಸ್
ಬೆಳಗಾವಿ, ಮಾರ್ಚ್ 27: ಬೆಳಗಾವಿ ನಗರವನ್ನು ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗಿದ್ದು, ನಗರದಲ್ಲಿ ಇನ್ಮುಂದೆ ಅನಗತ್ಯವಾಗಿ ಸುತ್ತಾಡುವ ಕಿಡಿಗೇಡಿಗಳ ವಾಹನಗಳನ್ನು ಸೀಜ್ ಮಾಡಿ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುವದು ಎಂದು ನಗರ ಪೊಲೀಸ್ ಆಯುಕ್ತ ಬಿ.ಲೋಕೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿಯ ಎಪಿಎಂಸಿ ಮಾರುಕಟ್ಟೆ ಕಚೇರಿಯಲ್ಲಿ ನಡೆದ ಜಿಲ್ಲಾಡಳಿತದ ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಳಗಾವಿ ನಗರ ನಿವಾಸಿಗಳು ಯಾರೂ ಮನೆಯಿಂದ ಹೊರಗೆ ಬರಬೇಡಿ, ಯಾರ ಮೇಲೂ ಬಲ ಪ್ರಯೋಗ ಮಾಡುವ ಇಚ್ಛೆ ನಮಗಿಲ್ಲ ಎಂದರು.
ಎಲ್ಲ ಬಡಾವಣೆಗಳಲ್ಲಿ, ತರಕಾರಿ ಮತ್ತು ದಿನಸಿ ಸಾಮಾಗ್ರಿಗಳನ್ನು ಮುಟ್ಟಿಸುವ ವ್ಯವಸ್ಥೆ ಮಾಡಿದ್ದೇವೆ. ವಾಹನಗಳಲ್ಲಿ ಮೈಕ್ ಹಚ್ಚಿಕೊಂಡು ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ಮುಟ್ಟಿಸುತ್ತೇವೆ. ದಯವಿಟ್ಟು ಯಾರೊಬ್ಬರೂ ಮನೆಯಿಂದ ಹೊರಗೆ ಬರಬೇಡಿ ಪೊಲೀಸರಿಗೆ ಸಹಕಾರ ಕೊಡಿ ಎಂದು ಪೊಲೀಸ್ ಆಯುಕ್ತರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

ಜಿಲ್ಲಾಧಿಕಾರಿ ಎಸ್.ಬಿ ಬೊಮ್ಮನಹಳ್ಳಿ ಮಾತನಾಡಿ, ಬೆಳಗಾವಿ ಜಿಲ್ಲೆಯ ಎಲ್ಲ ರೈತರು ಬೆಳಗಾವಿಯ ಎಪಿಎಂಸಿ ಮಾರುಕಟ್ಟೆಗೆ ಬರುತ್ತಿರುವುದರಿಂದ, ಮಾರುಕಟ್ಟೆಯಲ್ಲಿ ಜನಜಂಗುಳಿ ಆಗುತ್ತಿದೆ, ಅದಕ್ಕಾಗಿ ಆಯಾ ತಾಲ್ಲೂಕಿನ ರೈತರು ತಮ್ಮ ತಾಲ್ಲೂಕಾ ಎಪಿಎಂಸಿ ಮಾರುಕಟ್ಟೆಗೆ ಹೋಗಬೇಕು, ಅಲ್ಲಿಯೇ ರೈತರು ತಮ್ಮ ಫಸಲು ಮಾರಾಟ ಮಾಡುವುದು ಒಳ್ಳೆಯದು ಎಂದು ಡಿಸಿ ಹೇಳಿದರು.
ಎಪಿಎಂಸಿ ಮಾರುಕಟ್ಟೆಯಲ್ಲಿ ಜನರ ಗುಂಪು ತಡೆಯುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಎಪಿಎಂಸಿ ಕಚೇರಿಯಲ್ಲಿ ತುರ್ತು ಸಭೆ ನಡೆಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.












Click it and Unblock the Notifications