ಅಥಣಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಮಠಾಧೀಶರಿಗೆ?
ಬೆಳಗಾವಿ, ಜನವರಿ 16: ಬಿಜೆಪಿಯನ್ನು ಮಣಿಸಲು ತಂತ್ರಗಳನ್ನು ಹೆಣೆಯುತ್ತಿರುವ ಕಾಂಗ್ರೆಸ್ ಈಗ ಬಿಜೆಪಿಯ ಬಾಣವನ್ನು ಅದರ ಮೇಲೆಯೇ ಪ್ರಯೋಗಿಸುತ್ತಿದೆ.
ಅಥಣಿ ಕ್ಷೇತ್ರದಿಂದ ಮಠಾಧೀಶರೊಬ್ಬರನ್ನು ಕಣಕ್ಕಿಳಿಸಿ ಬಿಜೆಪಿ ಅಭ್ಯರ್ಥಿಗೆ ಟಾಂಗ್ ನೀಡಲು ಕಾಂಗ್ರೆಸ್ ಯೋಜಿಸಿದೆ, ಈ ಸಂಬಂಧ ಸ್ಥಳೀಯ ಜನಪ್ರಿಯ ಸ್ವಾಮಿಗಳಾದ ಪ್ರಭು ಚನ್ನಬಸವ ಸ್ವಾಮಿಗಳೊಂದಿಗೆ ಮಾತುಕತೆ ನಡೆಸಿದೆ.
ಅಥಣಿ ಕ್ಷೇತ್ರದಿಂದ ಮೂರು ಬಾರಿ ಬಿಜೆಪಿಯ ಲಕ್ಷ್ಮಣ ಸವಧಿ ಅವರು ಗೆಲ್ಲುತ್ತಾ ಬಂದಿದ್ದು, ಲಿಂಗಾಯತರು ಹೆಚ್ಚಿಗಿರುವ ಈ ಕ್ಷೇತ್ರದಲ್ಲಿ ಲಿಂಗಾಯತ ಮತದಾರರನ್ನು ಸೆಳೆಯಲು ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮಿಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ.
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಈಗಾಗಲೇ ಚನ್ನಬಸವ ಸ್ವಾಮಿಗಳ ಬಳಿ ಚುನಾವಣೆ ಬಗ್ಗೆ ಮಾತನಾಡಿರುವುದಾಗಿ ಸುದ್ದಗಾರಿಗೆ ತಿಳಿಸಿದ್ದಾರೆ. ಆದರೆ ಚನ್ನಬಸವ ಸ್ವಾಮಿಗಳು ಮಾತುಕತೆ ನಡೆದಿರುವ ಬಗ್ಗೆ ಸ್ಪಷ್ಟಪಡಿಸಿಲ್ಲ.
ಈ ಕ್ಷೇತ್ರದಲ್ಲಿ ಸಾಕಷ್ಟು ಭಕ್ತಾಧಿಗಳನ್ನು ಹೊಂದಿರುವ ಮೋಟಗಿ ಮಠದ ಚನ್ನಬಸವ ಸ್ವಾಮಿಗಳು ಚುನಾವಣೆಗೆ ಸ್ಪರ್ಧಿಸಿದರೆ ಲಕ್ಷ್ಮಣ್ ಸವಧಿ ಅವರಿಗೆ ಗೆಲುವು ಕಷ್ಟವಾಗಬಹುದು. ಸಿದ್ದರಾಮಯ್ಯ ಅವರನ್ನು ಅಥಣಿಯಿಂದ ಸ್ಪರ್ಧಿಸುವಂತೆ ಸವಾಲು ಹಾಕಿದ್ದ ಲಕ್ಷ್ಮಣ್ ಅವರನ್ನು ಸೋಲಿಸಲೇಬೆಂಕೆಂದು ಜಿಲ್ಲಾ ಉಸ್ತುವಾರಿ ಸಚಿವ ಸಚಿವ ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.