ಅಧಿವೇಶನಕ್ಕೆ ಹಾಜರಾದ ಅತೃಪ್ತರು, ಕಾಂಗ್ರೆಸ್ ನಿರಾಳ
Recommended Video

ಬೆಳಗಾವಿ, ಡಿಸೆಂಬರ್ 10: ಸಚಿವ ಸ್ಥಾನ ಸಿಗದೇ ಅತೃಪ್ತರಾಗಿರುವ ಕಾಂಗ್ರೆಸ್ ಶಾಸಕರು ಅಧಿವೇಶನಕ್ಕೆ ಬರುವುದಿಲ್ಲವೆಂಬ ಆತಂಕ ಕಾಂಗ್ರೆಸ್ಗೆ ಇತ್ತು. ಆದರೆ ಹಾಗೆ ಆಗಲಿಲ್ಲ.
ಅತೃಪ್ತ ಶಾಸಕರ ಪಟ್ಟಿಯಲ್ಲಿರುವ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಹೊರತು ಪಡಿಸಿ ಇನ್ನೆಲ್ಲ ಅತೃಪ್ತ ಶಾಸಕರೂ ಅಧಿವೇಶನದ ಮೊದಲ ದಿನ ಹಾಜರಾಗಿದ್ದರು. ಅಷ್ಟರ ಮಟ್ಟಿಗೆ ಕಾಂಗ್ರೆಸ್ ಇಂದು ನಿರಾಳವಾಯಿತು.
ಅಧಿವೇಶನಕ್ಕೆ ಮುನ್ನಾ ಸಂಪುಟ ವಿಸ್ತರಣೆ ಮಾಡಲಿಲ್ಲವಾದರೆ ಅಧಿವೇಶನಕ್ಕೆ ಗೈರಾಗುವುದಾಗಿ ಹಲವು ಅತೃಪ್ತ ಶಾಸಕರು ಎಚ್ಚರಿಕೆ ನೀಡಿದ್ದರು. ಆದರೆ ಕಾಂಗ್ರೆಸ್ ಮುಖಂಡರು ಅವರ ಮನ ಒಲಿಸಿ ಅತೃಪ್ತರನ್ನು ಸದನಕ್ಕೆ ಕರೆತರಲು ಯಶಸ್ವಿಯಾಗಿದ್ದಾರೆ.

ಸುಧಾಕರ್, ರಮೇಶ್ ಜಾರಕಿಹೊಳಿ ಗೈರು
ಸುಧಾಕರ್ ಜೊತೆಗೆ ಇಂದು ರಮೇಶ್ ಜಾರಕಿಹೊಳಿ ಸಹ ಅಧಿವೇಶನಕ್ಕೆ ಗೈರಾಗಿದ್ದರು. ಅವರು ಬೆಳಗಾವಿಯಲ್ಲಿಲ್ಲ ಎಂಬ ಮಾಹಿತಿ ಇದೆ. ಈ ಇಬ್ಬರೂ ಮುಂದಿನ ದಿನಗಳಲ್ಲಿ ಅಧಿವೇಶನಕ್ಕೆ ಜೊತೆ ಆಗುತ್ತಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.

ಡಿಸೆಂಬರ್ 22ಕ್ಕೆ ಸಂಪುಟ ವಿಸ್ತರಣೆ
ಸಂಪುಟ ವಿಸ್ತರಣೆಯು ಅಧಿವೇಶನದ ನಂತರ ಮಾಡಲಾಗುವುದು ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾಗಿ ಅಲ್ಲಿಯ ವರೆಗೆ ಕಾಯದೆ ಸಚಿವ ಸ್ಥಾನ ಆಕಾಂಕ್ಷಿ ಶಾಸಕರಿಗೆ ಬೇರೆ ದಾರಿ ಇಲ್ಲ. ಡಿಸೆಂಬರ್ 22 ರಂದು ಸಂಪುಟ ವಿಸ್ತರಣೆ ಆಗಲಿದೆ.

ಮನವೊಲಿಸಿದ ಕಾಂಗ್ರೆಸ್ ಮುಖಂಡರು
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಸಿದ್ದರಾಮಯ್ಯ ಆಪ್ತ ಜಮೀರ್ ಅಹ್ಮದ್ ಅವರು ಅತೃಪ್ತರ ಮನವೊಲಿಸಿ ಅವರನ್ನು ಸದನಕ್ಕೆ ಕರೆತಂದಿದ್ದಾರೆ ಎನ್ನಲಾಗಿದೆ. ಸುಧಾಕರ್ ಅವರು ವೈಯಕ್ತಿಕ ಕಾರಣದಿಂದ ಅಧಿವೇಶಕ್ಕೆ ಇಂದು ಗೈರಾಗಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ನಲ್ಲಿಯೇ ಅಸಮಾಧಾನ
ಡಿಸೆಂಬರ್ 22 ರಂದು ಸಂಪುಟ ವಿಸ್ತರಣೆ ಮಾಡುವ ನಿರ್ಣಯದ ಬಗ್ಗೆ ಕಾಂಗ್ರೆಸ್ ನಲ್ಲಿಯೇ ಅಸಮಾಧಾನ ಉಂಟಾಗಿದೆ. ಇದು ಕೇವಲ ಕಣ್ಣೊರೆಸುವ ತಂತ್ರ. ಆ ವೇಳೆಗೆ ಶೂನ್ಯ ಮಾಸ ಪ್ರಾರಂಭವಾಗಿರುತ್ತದೆ. ಆಗ ಮತ್ತೆ ನೆಪ ಹೇಳಿ ಸಂಪುಟ ವಿಸ್ತರಣೆ ಮುಂದಕ್ಕೆ ಹಾಕುತ್ತಾರೆ ಎಂದು ಕೆಲವು ಶಾಸಕರು ಆರೋಪಿಸಿದ್ದಾರೆ.











Click it and Unblock the Notifications