ಬಿಪಿಎಲ್ ಕಾರ್ಡ್ ವಾಪಸ್ ವಿಚಾರ; ಸಚಿವ ಉಮೇಶ್ ಕತ್ತಿ ಗರಂ!
ಬೆಳಗಾವಿ, ಫೆಬ್ರವರಿ 16; ಬಿಪಿಎಲ್ ಕಾರ್ಡ್ ವಾಪಸ್ ಮಾಡುವ ವಿಚಾರದಲ್ಲಿ ಸಚಿವ ಉಮೇಶ್ ಕತ್ತಿ ಮಾಧ್ಯಮಗಳ ವಿರುದ್ಧ ಗರಂ ಆಗಿದ್ದಾರೆ. "ಬಿಪಿಎಲ್ ಕಾರ್ಡ್ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ" ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳು ಸಚಿವರ ಬಳಿಕ ಸ್ಪಷ್ಟನೆ ಕೇಳಿದರು. ಆಗ ಸಚಿವರು ಮಾಧ್ಯಮ ಪ್ರಕಟಣೆ ಪ್ರತಿ ನೀಡಿ ಕೈ ಮುಗಿದು ಹೊರಡಲು ಮುಂದಾದರು. ಈ ವೇಳೆ ಪುನಃ ಸ್ಪಷ್ಟನೆ ಕೇಳಲಾಯಿತು.
ಆಗ ಸಚಿವರು, "ದಯಮಾಡಿ ನಿಮ್ಮ ಟಿವಿ ಮಾಧ್ಯಮಗಳು ಟಿಆರ್ಪಿಗೋಸ್ಕರ ಇದನ್ನು ಬಳಸಬೇಡಿ. ಒಂದು ಸರ್ಕಾರ, ಒಬ್ಬ ರಾಜ್ಯದ ಮಂತ್ರಿಯಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ. ಇಂದಿಗೂ ನನ್ನ ಹೇಳಿಕೆಗೆ ಖಚಿತವಾದ ಸರ್ಕಾರಿ ಆದೇಶಗಳನ್ನು ಕೊಡುತ್ತೀನಿ" ಎಂದರು.

"ಈಗಾಗಲೇ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು ಪ್ರಿಂಟ್ ಮಾಡಿ ಎಲ್ಲಾ ಕಡೆ ಹಂಚಬಹುದು. ದಯಮಾಡಿ ಸರ್ಕಾರ, ಸಿಎಂ ಈ ಬಗ್ಗೆ ಯಾವುದೇ ನಿರ್ದೇಶನ ಕೊಟ್ಟಿಲ್ಲ. ಮುಖ್ಯಮಂತ್ರಿಗಳ ಜೊತೆ ಈ ಬಗ್ಗೆ ಚರ್ಚೆನೂ ಆಗಿಲ್ಲ" ಎಂದು ಸ್ಪಷ್ಟನೆ ನೀಡಿದರು.
"ಇಲ್ಲ ಸಲ್ಲದ ಹೇಳಿಕೆಗಳನ್ನು ಕೊಟ್ಟು ಬಡತನ ರೇಖೆಗಿಂತ ಕೆಳಗಿದ್ದ ಜನರನ್ನು ತಪ್ಪು ದಾರಿಗೆ ಒಯ್ಯಬೇಡಿ. 2012 ರಿಂದ ಹೊರಡಿಸಿದ್ದ ಮಾನದಂಡಗಳು ಏನಿವೆಯೋ ಅವೇ ಮುಂದುವರಿಯುತ್ತವೆ. ಈ ಹಿಂದಿನ ಆದೇಶದಲ್ಲಿ ಬೈಕ್, ಫ್ರಿಡ್ಜ್ ಬಗ್ಗೆ ಇತ್ತಾ?" ಎಂದು ಪ್ರಶ್ನೆ ಮಾಡಿದರು.
ಯಡಿಯೂರಪ್ಪ ಸ್ಪಷ್ಟನೆ; ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಹ ಬಿಪಿಎಲ್ ಕಾರ್ಡ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. "ಬಿಪಿಎಲ್ ಕಾರ್ಡ್ ಬಗ್ಗೆ ಯಾವುದೇ ಚರ್ಚೆ ಅಗತ್ಯವಿಲ್ಲ. 2017ರಲ್ಲಿ ಏನು ಮಾನದಂಡ ಇದೆಯೋ ಅದೇ ಮುಂದುವರಿಯುತ್ತದೆ. ಆದರೆ, ಕೆಲವು ಶ್ರೀಮಂತರು ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ಅನಗತ್ಯವಾಗಿ ಬಿಪಿಎಲ್ ಕಾರ್ಡ್ ಪಡೆದವರು ವಾಪಸ್ ಮಾಡಬೇಕು" ಎಂದರು.












Click it and Unblock the Notifications