ಸಂಗೊಳ್ಳಿ ರಾಯಣ್ಣ ಮ್ಯೂಸಿಯಂ: ವಾರದಲ್ಲಿ ಬಾಕಿ ಕಾಮಗಾರಿ ಮುಗಿಸಲು ಸಚಿವರ ಡೆಡ್ಲೈನ್
ಬೆಂಗಳೂರು, ನವೆಂಬರ್ 26: ಕರ್ನಾಟಕ ರಾಜ್ಯ ಸರ್ಕಾರ ಕಳೆದ ಮೂರು ನಾಲ್ಕು ವರ್ಷಗಳಿಂದ ಬಹುಕೋಟಿ ವೆಚ್ಚದಲ್ಲಿ ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರಲ್ಲಿ ಅನೇಕ ಕಾಮಗಾರಿ ನಡೆಸುತ್ತಿದೆ. ಸಂಗೊಳ್ಳಿ ರಾಯಣ್ಣ ಮ್ಯೂಸಿಯಂ, ಸಮಾಧಿ ಸ್ಥಳ, ಸೈನಿಕ ಶಾಲೆ, ಕೆರೆ ಅಭಿವೃದ್ಧಿ ನಡೆಸುತ್ತಿದೆ. ಈ ಅಭಿವೃದ್ಧಿ ಕೆಲಸಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಶಿವರಾಜ್ ತಂಗಡಗಿ ಅವರು ತ್ವರಿತ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಿದ್ದಾರೆ.
ನಿಗದಿತ ಕಾಲ ಮಿತಿಯೊಳಗೆ ರಾಯಣ್ಣ ಮ್ಯೂಸಿಯಂ ಪೂರ್ಣಗೊಳಿಸಬೇಕು. ಪ್ರಸ್ತಕ ವರ್ಷದ ಬೆಳಗಾವಿ ಚಳಿಗಾಲದ ಅಧಿವೇಶನಕ್ಕೂ ಮೊದಲು ಅಂದರೆ ಇನ್ನೊಂದು ವಾರದಲ್ಲಿ ಕೆಲಸ ಮುಗಿಸುವಂತೆ ಅವರು ಕೆಲಸಗಾರರಿಗೆ ಸೂಚಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಬೇಕಿದೆ ಎಂದು ಅವರು ತಿಳಿಸಿದರು.

ಒಟ್ಟು 261 ಕೋಟಿ ವೆಚ್ಚದಲ್ಲಿ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಹಾಗೂ ನಂದಗಡ ಮ್ಯೂಸಿಯಂ ನಿರ್ಮಾಣ ಕೆಲಸ ನಡೆಯುತ್ತಿದೆ. ಇನ್ನೂ 59 ಕೋಟಿ ರೂಪಾಯಿಯಲ್ಲಿ ಒಟ್ಟು 13 ಎಕರೆ ಜಾಗೆಯಲ್ಲಿ ನಂದಗಡ ವಸ್ತುಸಂಗ್ರಹಾಲಯ ತಲೆ ಎತ್ತಲಿದೆ ಎಂದು ಯೋಜನೆಗಳ ವಿವರ ನೀಡಿದರು.
ಚಳಿಗಾಲ ಅಧಿವೇಶನ ಹೊತ್ತಿಗೆ ಕಾಮಗಾರಿ ಮುಗಿಸಿ
ಮ್ಯೂಸಿಯಂ ಸ್ಥಾಪನೆ ಒಳಗೊಂಡಂತೆ ಯಾವುದೇ ಕಾಮಗಾರಿಗಳು ಒಂದೇ ಒಂದು ಕೆಲಸ ಬಾಕಿ ಇರದಂತೆ ನೋಡಿಕೊಳ್ಳಬೇಕು. ಯಾವುದೇ ಬಾಕಿ ಕೆಲಸ ಉಳಿದಂತೆ ಪೂರ್ಣಗೊಳಿಸಬೇಕು. ಇನ್ನೊಂದು ವಾರದಲ್ಲಿ ಕಾಂಪೌಂಡ್, ರಸ್ತೆ, ಕಲಾಕೃತಿಗಳು ಸೇರಿದಂತೆ ಅಗತ್ಯ ಕಾಮಗಾರಿಗಳು ತ್ವರಿತವಾಗಿ ಪೂರ್ಣಗೊಳಿಸಿ. ಬೆಳಗಾವಿ ಚಳಿಗಾಲ ಅಧಿವೇಶನದ ಹೊತ್ತಿಗೆ ಕೆಲಸ ಮುಗಿಸಿ ಎಂದು ಅವರು ಗಡುವು ಹಾಕಿದ್ದಾರೆ.

ಈ ಯೋಜನೆಗಳನ್ನು ಕೈಗೆತ್ತಿಕೊಂಡಿರುವ ಗುತ್ತಿಗೆದಾರರ ಬಿಲ್ ಗಳನ್ನು ಸಕಾಲದಲ್ಲಿ ಪಾವತಿಸಬೇಕು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಐತಿಹಾಸಿಕ ಕುರುಹುಗಳ ಮರು ಚಿತ್ರಣದಲ್ಲಿ ವಸ್ತು ಸಂಗ್ರಹಾಲಯದಲ್ಲಿ ಯಾವುದೇ ವ್ಯತ್ಯಾಸ ಕಂಡು ಬರದಂತೆ ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಹೇಳಿದರು.
ಸಿನಿಮಾ ಆ್ಯನಿಮೇಟರ್ ವಿದ್ಯುನ್ಮಾನ ತಂತ್ರಜ್ಞಾನ ಅಳವಡಿಕೆ ಕಾರ್ಯ ಆರಂಭಿಸಬೇಕು. ಸರ್ಕಾರದಿಂದ ಗುತ್ತಿಗೆದಾರರ ಬಿಲ್ ಬಾಕಿ ಉಳಿಯದಂತೆ ನೋಡಿಕೊಳ್ಳಲಾಗುವುದು. 4 ವರ್ಷದಿಂದ ಮ್ಯೂಸಿಯಂ ಕಾಮಗಾರಿ ಶುರುವಾಗಿದೆ. ಸಂಗೊಳ್ಳಿಯಲ್ಲಿ 100 ಎಕರೆ ಭೂಮಿಯಲ್ಲಿ ಸೈನಿಕ ಶಾಲೆ, ಶೌರ್ಯ ಭೂಮಿ ಅಭಿವದ್ಧಿ ಪಡಿಸಿ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಿದ್ದಾರೆ ಎಂದು ವಿವರಿಸಿದರು.
ಮ್ಯೂಸಿಯಂ ಲೋಕಾರ್ಪಣೆ ಯಾವಾಗ?
ಸಂಗೊಳ್ಳಿ ರಾಯಣ್ಣ ಅವರ ಜೀವನ ಪರಿಚಯಿಸಲು ವಸ್ತುಸಂಗ್ರಹಾಲಯ ನಿರ್ಮಿಸಲು ನಾಲ್ಕು ವರ್ಷದ ಹಿಂದೆ ಕೈ ಹಾಕಲಾಗಿದೆ. ಇಲ್ಲಿ ಸಂಗೊಳ್ಳಿ ರಾಯಣ್ಣ ಅಧ್ಯಯನ ಕೇಂದ್ರ, ಗ್ರಂಥಾಲಯ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳು ತಲೆ ಎತ್ತಲಿವೆ. ಡಿಸೆಂಬರ್ ಅಂತ್ಯಕ್ಕೆ ಬೆಳಗಾವಿ ಅಧಿವೇಶನ ಮುಗಿಯುವ ಹೊತ್ತಿಗೆ ಮ್ಯೂಸಿಯಂ ಉದ್ಘಾಟನೆಗೆ ಚಿಂತನೆ ಇದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಬಳಿ ಚರ್ಚಿಸಲಾಗುವುದು.
ನವ ಪೀಳಿಗೆಗೆ ಇತಿಹಾಸ, ರಾಯಣ್ಣನ ಜೀವನ ಪರಿಚಯಿಸುವ ಪ್ರಯತ್ನ ಸರ್ಕಾರದ್ದಾಗಿದೆ. ಇಲ್ಲಿನ ನಂದಗಡದ ಕೆರೆಯಲ್ಲಿ ರಾಯಣ್ಣ ಮೂರ್ತಿ ಸ್ಥಾಪನೆ ಮಾಡಲಾಗುವುದು. ನಂದಗಡದ ರಾಯಣ್ಣ ಸಮಾಧಿಯಿಂದ ಮ್ಯೂಸಿಯಂವರೆಗೂ ಸಿಸಿ ರಸ್ತೆ ನಿರ್ಮಾಣ ಕೈಗೊಳ್ಳಲಾಗುವುದು ಎಂದರು.












Click it and Unblock the Notifications