ಸಚಿವ ಸ್ಥಾನಕ್ಕಿಂತ ಧಾರ್ಮಿಕ ನಂಬಿಕೆ ಮುಖ್ಯ: ರಮೇಶ್ ಜಾರಕಿಹೊಳಿ
ಬೆಳಗಾವಿ, ಅಕ್ಟೋಬರ್ 7: ತಮಗೆ ನೀಡಿರುವ ಖಾತೆಯ ಬಗ್ಗೆ ಯಾವ ಅಸಮಾಧಾನವೂ ಇಲ್ಲ. ಗ್ರಂಥಾಲಯ ಖಾತೆ ನೀಡಿದರೂ ನಡೆಸಿಕೊಂಡು ಹೋಗಲು ಸಿದ್ಧ ಎಂದು ಪೌರಾಡಳಿತ, ಬಂದರು ಒಳನಾಡು ಸಾರಿಗೆ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
'ಇದುವರೆಗೂ ಐದು ಸಚಿವ ಸಂಪುಟ ಸಭೆಗಳಿಗೆ ಗೈರುಹಾಜರಾಗಿದ್ದೇನೆ. ದೇವರಲ್ಲಿ ಏನನ್ನೋ ಕೇಳಿಕೊಂಡಿದ್ದೇನೆ. ಅದು ಈಡೇರುವವರೆಗೂ ಸಭೆಗೆ ಹೋಗುವುದಿಲ್ಲ. ಮುಂದಿನ ಸಚಿವ ಸಂಪುಟ ಸಭೆಗೂ ಗೈರು ಹಾಜರಾಗುತ್ತೇನೆ. ಆದರೆ ಖಾತೆ ಬಗ್ಗೆ ಅಸಮಾಧಾನವಿಲ್ಲ. ಗ್ರಂಥಾಲಯ ಖಾತೆ ಕೊಟ್ಟರೂ ನಿರ್ವಹಿಸುತ್ತೇನೆ' ಎಂದಿದ್ದಾರೆ.
ಸರ್ಕಾರಿ ವಾಹನ ಬಳಕೆ ಮಾಡದಿರುವುದರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೆಲವು ವಿಚಾರಗಳಲ್ಲಿ ದೇವರಲ್ಲಿ ನಂಬಿಕೆ ಇರಿಸಿದ್ದೇನೆ. ಆ ಕೆಲಸಗಳು ಪೂರ್ಣಗೊಳ್ಳುವವರೆಗೂ ಸರ್ಕಾರಿ ಕಾರು ಬಳಕೆ ಮಾಡುವುದಿಲ್ಲ ಎಂದು ತೀರ್ಮಾನಿಸಿದ್ದೇನೆ. ಕೆಲವು ವಿಚಾರಗಳನ್ನು ಮಾಧ್ಯಮಗಳ ಮುಂದೆ ಹೇಳಲು ಆಗುವುದಿಲ್ಲ. ನಾನು ದೇವರನ್ನು ನಂಬುತ್ತೇನೆ. ಸಚಿವ ಸ್ಥಾನಕ್ಕಿಂತಲೂ ನನಗೆ ಧಾರ್ಮಿಕ ನಂಬಿಕೆಯೇ ಮುಖ್ಯ ಎಂದು ಹೇಳಿದ್ದಾರೆ.

ಲೋಕಸಭೆ ಉಪಚುನಾವಣೆ ಸಿದ್ಧತೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಪಕ್ಷದ ಹೈಕಮಾಂಡ್ ಈ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.
ನಾನು ಸರ್ಕಾರದ ವಿರುದ್ಧ ಯಾವುದೇ ಅಸಮಾಧಾನ ಹೊಂದಿಲ್ಲ. ಕೆಲವೊಂದು ಸಮಸ್ಯೆಗಳ ಬಗ್ಗೆ ಮುಖಂಡರ ಮುಂದೆ ಪ್ರಸ್ತಾಪಿಸಿದ್ದೇನೆ. ಪ್ರಜಾಪ್ರಭುತ್ವದಲ್ಲಿ ಇಂತಹ ಗೊಂದಲಗಳು ಸಹಜ. ನಾವು ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನ ಹರಿಸಬೇಕೇ ವಿನಾ ಅದನ್ನು ದೊಡ್ಡದು ಮಾಡಬಾರದು ಎಂದು ಹೇಳಿದರು.












Click it and Unblock the Notifications