ಬೆಳಗಾವಿ: ಕೃಷ್ಣೆಯ ಮೇಲೆಯೇ ಆಣಿ ಮಾಡಿದ್ದ ಕಾಂಗ್ರೆಸ್ ವಚನ ಭ್ರಷ್ಟ ಪಕ್ಷ ಎಂದ ಬೊಮ್ಮಾಯಿ
ಬೆಳಗಾವಿ, ಏಪ್ರಿಲ್ 26: ಉತ್ತರ ಕರ್ನಾಟಕದ 'ಕೃಷ್ಣಾ ಮೇಲ್ದಂಡೆ ಯೋಜನೆ'ಗೆ 50 ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದ ಕಾಂಗ್ರೆಸ್ ಕೃಷ್ಣೆಯ ಮೇಲೆಯೇ ಆಣೆ ಪ್ರಮಾಣ ಮಾಡಿತ್ತು. ನೀಡಿದ ಮಾತು ಈಡೇರಿಸಲಿಲ್ಲ. ಐದು ವರ್ಷದಲ್ಲಿ ಯಾವುದೇ ಯೋಜನೆ ಪೂರ್ಣಗೊಳಿಸದ ಕಾಂಗ್ರೆಸ್ ವಚನ ಭ್ರಷ್ಟ ಪಕ್ಷ ಕಾಂಗ್ರೆಸ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಜಿಲ್ಲೆಯ ಚಿಕ್ಕೋಡಿ ಸದಲಗಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಕತ್ತಿ ಪರ ಪ್ರಚಾರ ನಡೆಸಿ ಮತಯಾಚಿಸಿದರು. ಈ ವೇಳೆ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಈ ಭಾಗದಲ್ಲಿ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಯನ್ನು ನಾವೇ ಆರಂಭಿಸಿದ್ದೇವು. ನಾವೇ ಅನ್ನು ಪೂರ್ಣಗೊಳಿಸುವ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಮಹಾಲಕ್ಷ್ಮೀ ಏತ ನೀರಾವರಿಗೆ ಮೊದಲು 0.5 ನಂತರ 0.9 ಟಿಎಂಸಿ ನೀರು ಪಡೆಯಲು ಡಿಪಿಆರ್ ಮಾಡಲು ಸಿದ್ದ ಮಾಡಿದ್ದೇವು. ನಂತರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು. ಈ ಭಾಗದ ಶಾಸಕರು ಉಪ ಚುನಾವಣೆಯಲ್ಲಿ ಕ್ಷೇತ್ರವನ್ನು ದತ್ತು ತೆಗೆದುಕೊಳ್ಳುವುದಾಗಿ ಹೇಳಿದರು. ಆದರೆ ಯಾವುದೇ ಕೆಲಸ ಮಾಡಲಿಲ್ಲ. ನಂತರ ನಾವು ಅಧಿಕಾರಕ್ಕೆ ಬಂದ ಮೇಲೆ 200 ಕೋಟಿ ರೂ. ಯೋಜನೆಯ ಡಿಪಿಆರ್ ಮಾಡಿ ಬಂದಿದ್ದೇವೆ ಎಂದು ಅವರು ತಿಳಿಸಿದರು.
ಮುಂದಿನ ದಿನಗಳಲ್ಲಿ ಮಹಾಲಕ್ಷ್ಮೀ ಏತ ನೀರಾವರಿಯನ್ನು ರಮೇಶ್ ಕತ್ತಿಯವರ ಅಧ್ಯಕ್ಷತೆಯಲ್ಲಿಯೇ ಮಹಾಂತೇಶ್ ಕವಠಗಿಮಠ ಅವರ ಆಶಿರ್ವಾದದಿಂದ ಯೋಜನೆಗೆ ಚಾಲನೆ ನೀಡುತ್ತೇವೆ. ಪ್ರವಾಹ, ನೆರೆ ಬಂದಾಗ ಸಾಕಷ್ಟು ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದರು. ಅವರೆಲ್ಲರಿಗೂ 10 ಸಾವಿರ ಮನೆಗಳನ್ನು ಬೆಳಗಾವಿ ಜಿಲ್ಲೆಗೆ ನೀಡಲಾಯಿತು. ಚಿಕ್ಕೋಡಿ ತಾಲೂಕಿನಲ್ಲಿ 6000 ಮನೆಗಳನ್ನು ನಿರ್ಮಿಸಿದ್ದೇವೆ ಎಂದರು.
ಕಾಂಗ್ರೆಸ್ ಪರಿಹಾರ ಕಾರ್ಯ ಮಾಡಿದ್ದೇವೆ ಎನ್ನುತ್ತಾರೆ
ಮಳೆ, ಪ್ರವಾಹದ ಸಂದರ್ಭದಲ್ಲಿ ಈ ಭಾಗದಲ್ಲಿ ಎಲ್ಲ ಪರಿಹಾರ ಕಾರ್ಯವನ್ನು ತಾವೇ ಮಾಡಿದ್ದೇವೆ ಎಂದು ಹೇಳಿಕೊಂಡು ಕಾಂಗ್ರೆಸ್ನವರು ಓಡಾಡುತ್ತಾರೆ. ಕಷ್ಟ ಸಂದರ್ಭದಲ್ಲಿ ಜನರಿಗೆ ಯಾರು ಸ್ಪಂದಿಸುತ್ತಾರೆ. ಯಾರು ಪರಿಹಾರ ನೀಡುತ್ತಾರೆ. ಅವರಿಗೆ ಅವಕಾಶ ನೀಡಿ ಎಂದು ಬೊಮ್ಮಾಯಿ ಕೋರಿದರು.

ಈ ಭಾಗದಲ್ಲಿ ಒಣ ಬೇಸಾಯಕ್ಕೆ 13 ಸಾವಿರ ರೂಪಾಯಿ ನೀಡಿದ್ದೇವೆ. ಒಂದೇ ತಿಂಗಳಲ್ಲಿ ರೈತರ ಖಾತೆಗಳಿಗೆ ಹಣ ನೀಡಿದ್ದೇವೆ. ನೀರಾವರಿ ಜಮೀನಿಗೆ 15 ಸಾವಿರ ದಿಂದ 25 ಸಾವಿರ, ತೋಟಗಾರಿಕೆ ಬೆಳೆಗಳಿಗೆ 18 ಸಾವಿರದಿಂದ 28 ಸಾವಿರಕ್ಕೆ ಹೆಚ್ಚಳ ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ.
ಪ್ರವಾಹದ ಸ್ಥಳಕ್ಕೆ ರಾಹುಲ್ ಗಾಂಧಿ ಬರಲಿಲ್ಲ
ಕಾಂಗ್ರೆಸ್ ಅವಧಿಯಲ್ಲಿ ಅತಿ ಹೆಚ್ಚು ರೈತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಗ ಬಾರದ ರಾಹುಲ್ ಗಾಂಧಿ ಈಗ ಕೂಡಲ ಸಂಗಮಕ್ಕೆ ಬಂದಿದ್ದರು. ರೈತರು ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಬರಲಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ದೀನ ದಲಿತರಿಗೆ, ಹಿಂದುಳಿದವರಿಗೆ ಅನ್ಯಾಯ ಮಾಡಿದೆ. ಅವರ ಮೀಸಲಾತಿ ಹೆಚ್ಚಳ ಮಾಡಲು ಹೋರಾಟ ನಡೆಸಿದರೂ, ಮಾಡಲಿಲ್ಲ. ನಾನು ಮೀಸಲಾತಿ ಹೆಚ್ಚಳ ಮಾಡಿ ಸಾಮಾಜಿಕ ನ್ಯಾಯ ಕೊಡಿಸುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
ಚಿಕ್ಕೋಡಿ ಜನರು ಸ್ವಾಭಿಮಾನಿಗಳು ಹಣಕ್ಕೆ ಮತ ಮಾರಿಕೊಳ್ಳುವುದಿಲ್ಲ. ರಮೇಶ್ ಕತ್ತಿಯವರು ಅಭ್ಯರ್ಥಿಯಾದ ಕೂಡಲೇ ಜನರು ಸಾಕಷ್ಟು ಖುಷಿಯಾಗಿದ್ದಾರೆ. ಚಿಕ್ಕೋಡಿ ಅತ್ಯಂತ ಪ್ರಗತಿಯ ತಾಲೂಕಾಗಿದೆ. ಈ ಕ್ಷೇತ್ರದ ಜನರು ದಕ್ಷರಾಗಿರುವ ರಮೇಶ್ ಕತ್ತಿಯವರಿಗೆ ಮತ ನೀಡಲು ಸಿದ್ದರಾಗಿರಿ. ಮೇ 10 ಕ್ಕೆ ಮತ ಹಾಕಿ ಮೇ 13 ಕ್ಕೆ ವಿಜಯೊತ್ಸವ ಆಚರಿಸಬೇಕು ಎಂದು ಹೇಳುವ ಮೂಲಕ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿದರು.












Click it and Unblock the Notifications