ಗೋಕಾಕ್ ಉಪ ಚುನಾವಣೆ ಬಳಿಕ ಮತ್ತೆ ಒಂದಾದ್ರಾ ಜಾರಕಿಹೊಳಿ ಬ್ರದರ್ಸ್?
ಬೆಳಗಾವಿ, ಜೂನ್ 19: ರಣ ರೋಚಕ ಹಣಾಹಣಿಗೆ ಸಾಕ್ಷಿಯಾಗಿದ್ದ ಗೋಕಾಕ್ ಕ್ಷೇತ್ರದ ಉಪ ಚುನಾವಣೆಯ ಬಳಿಕ ಮತ್ತೆ ಜಾರಕಿಹೊಳಿ ಬ್ರದರ್ಸ್ ಒಂದಾಗಿದ್ದಾರೆ. ಇಂದು ಬೆಂಗಳೂರಿನಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ನೂತನ ಮನೆಯ ಗೃಹಪ್ರವೇಶ ಕಾರ್ಯಕ್ರಮಕ್ಕೆ ಸಹೋದರ ಲಖನ್ ಜಾರಕಿಹೊಳಿ ಬಂದಿದ್ದು, ಎಲ್ಲ ಅನುಮಾನಗಳಿಗೆ ಉತ್ತರ ದೊರಕಿದೆ.
ಗೋಕಾಕ್ ಉಪ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಜಾರಕೊಹೊಳಿ ಬ್ರದರ್ಸ್ ಪರಸ್ಪರ ಬೈದಾಡಿಕೊಂಡು, ಹಾದಿರಂಪ, ಬೀದಿರಂಪ ಮಾಡಿಕೊಂಡಿದ್ದರು. ಕೊನೆಗೂ ಉಪ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿಯು ಲಖನ್ ವಿರುದ್ಧ ಗೆದ್ದು ಬೀಗಿದ್ದರು.
ಕಳೆದ ಎರಡು ದಿನಗಳ ಹಿಂದೆ ಕಿರಿಯ ಸಹೋದರ ಲಖನ್ ಜಾರಕಿಹೊಳಿಯನ್ನು ಹಿರಿಯ ಸಹೋದರ ರಮೇಶ್ ಜಾರಕಿಹೊಳಿ ಭೇಟಿಯಾಗಿದ್ದರು. ವಿಧಾನಸಭೆ ಉಪ ಚುನಾವಣೆ ಬಳಿಕ ಮೊದಲ ಬಾರಿ ಈ ಸಹೋದರರು ಭೇಟಿಯಾಗಿದ್ದಾರೆ.

ಇಂದು ಬೆಂಗಳೂರಿನ ಸದಾಶಿವ ನಗರದಲ್ಲಿ ರಮೇಶ್ ಜಾರಕಿಹೊಳಿ ಅವರ ನೂತನ ನಿವಾಸದ ಗೃಹಪ್ರವೇಶವಿತ್ತು.
ಈ ಕಾರ್ಯಕ್ರಮಕ್ಕೆ ಸಹೋದರ ಲಖನ್ ಜಾರಕಿಹೊಳಿ ತೆರಳಿ ರಮೇಶ್ ರನ್ನು ಭೇಟಿ ಮಾಡಿದ್ದಾರೆ.
ಉಪ ಚುನಾವಣೆಗೂ ಮುನ್ನ ಹಾವು ಮುಂಗಸಿಯಂತೆ ಜಾರಕಿಹೊಳಿ ಸಹೋದರರು ಕಚ್ಚಾಡಿದ್ದರು. ರಮೇಶ್ ಜಾರಕಿಹೊಳಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗುತ್ತಿದ್ದಂತೆ ಒಂದಾಗಿದ್ದಾರೆ.
ಲಖನ್ ಜಾರಕಿಹೊಳಿಗೆ ರಮೇಶ್ ಪುತ್ರ ಸಂತೋಷ ಸಾಥ್ ನೀಡಿದ್ದಾರೆ. ಇವರಿಬ್ಬರ ಈ ಭೇಟಿ ತೀವ್ರ ಕುತೂಹಲ ಮೂಡಿಸಿದ್ದು, ಗೋಕಾಕ್ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ ಮನೆ ಮಾಡಿದೆ.












Click it and Unblock the Notifications