ಎಂಇಎಸ್ ಬೆಂಬಲಿಸಿದ ಮೇಯರ್ ವಿರುದ್ಧ ಕ್ರಮ: ರಮೇಶ್ ಜಾರಕಿಹೊಳಿ
ಬೆಳಗಾವಿ, ನವೆಂಬರ್ 01: ರಾಜ್ಯೋತ್ಸವ ಧ್ವಜಾರೋಹಣದ ನಂತರ ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿ, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಂಬಲಿಸಿದ ಮೇಯರ್ ಸಂಜೋತಾ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
ಕರಾಳ ದಿನಾಚರಣೆ ಆಚರಿಸೋದು ಎಂಇಎಸ್ ಉದ್ಯೋಗ. ಅದರ ಮೇಲೆ ಅವರ ಅಸ್ತಿತ್ವ ಇದೆ. ಅದಕ್ಕೆ ದಯವಿಟ್ಟು ನೀವು ಮಹತ್ವ ಕೊಡಬೇಡಿ. ಅದರ ಮೇಲೆಯೇ ಅವರ ಅಂಗಡಿ ನಡೆದಿದೆ. ಅದನ್ನ ನಿಲ್ಲಿಸಿದ್ರೆ ಅಂಗಡಿ ಮುಚ್ಚಬೇಕಾಗುತ್ತೆ. ಅದಕ್ಕೆ ಮಹತ್ವ ಕೊಟ್ಟರೆ ಅವರನ್ನ ನೀವೆ ದೊಡ್ಡವರನ್ನಾಗಿ ಮಾಡಿದಂತಾಗುತ್ತೆ ಎಂದು ಮಾಧ್ಯಮದವರಿಗೆ ಸಚಿವ ರಮೇಶ್ ಕಿವಿಮಾತು ಹೇಳಿದರು.
ಮೇಯರ್ ಭಾಗಿ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ರಮೇಶ್, ಒಬ್ಬಿಬ್ಬರು ಭಾಗವಹಿಸಿದ್ರೆ ಅದಕ್ಕೆ ಎಲ್ಲರನ್ನು ಹೊಣೆ ಮಾಡೋಕೆ ಆಗಲ್ಲ. ಉಪಮೇಯರ್ ಭಾಗವಹಿಸಿಲ್ಲ.

ನಾವು ಕನ್ನಡಿಗರು ಶಾಂತಪ್ರಿಯರು, ಹೀಗಾಗಿ ಕಳೆದ ಭಾರಿ ತಪ್ಪು ಮಾಡಿದ್ದಾಗ ಕ್ಷಮಿಸಿದ್ದೆವು, ಈ ಭಾರಿ ತಪ್ಪು ಕಂಡುಬಂದ್ರೆ ಕ್ರಮ ಜರುಗಿಸಲಾಗುವುದು. ಕರಾಳ ದಿನಾಚರಣೆಯಲ್ಲಿ ಭಾಗವಹಿಸಿದ್ದಕ್ಕೆ ಮೇಯರ್ ಮೇಲೆ ಕ್ರಮ ಕೈಗೊಳ್ಳುತ್ತೀವಿ ಎಂದು ಹೇಳಿದರು.
ಈ ನಡುವೆ, ಕನ್ನಡ ಪರ ಸಂಘಟನೆಯ ಕಾರ್ಯಕರ್ತರಿಂದ ಪ್ರತಿಭಟನೆ ನಡೆದಿದೆ.
ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಭಾಷಣ ಮಾಡಲಿಕ್ಕೆ ವೇದಿಕೆ ಮೇಲೆ ಬಂದ ಶಾಸಕ ಗಣೇಶ ಹುಕ್ಕೇರಿ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.
ಇನ್ನೊಂದೆಡೆ, ನಗರ ಅಧ್ಯಕ್ಷ ವಿಲಾಸ ಗಾಡಿವಡ್ಡರ ವಾಹನದ ಮೇಲೆ ಮರಾಠಿ ಬೋರ್ಡನ್ನು ಹಾಕಿಕ್ಕೊಂಡಿದ್ದಾರೆ.ಈ ಬೋರ್ಡನ್ನು ಕೂಡಲೆ ತೆರವುಗೊಳಿಸುವಂತೆ ಆಗ್ರಹಿಸಿ ವೇದಿಕೆಯ ಮುಂದೆ ಪ್ರತಿಭಟನೆ ನಡೆಸಿದರು.
ಎಸಿ ಗಿತಾ ಕವಲಗಿ, ತಹಶಿಲ್ದಾರ ಚಿದಂಬರ ಕುಲಕರ್ಣಿ ಅವರು ಪ್ರತಿಭಟನಾಕಾರರ ಮನ ಓಲೈಸಿ ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆ ನೋಡಿಕೊಂಡರು.












Click it and Unblock the Notifications