ಬೆಳಗಾವಿ ಅಧಿವೇಶನಕ್ಕೆ 10 ಕೋಟಿ ವೆಚ್ಚವಂತೆ!
ಬೆಳಗಾವಿ, ನ.7 : ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸಲು ಪೂರ್ವಭಾವಿ ಸಿದ್ಧತೆಗಾಗಿ 10 ಕೋಟಿ ರೂ.ಗಳ ಅನುದಾನ ಅಗತ್ಯವಿದೆ ಎಂದು ಜಿಲ್ಲಾಡಳಿತ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದೆ. ನ.25ರಿಂದ ಹತ್ತು ದಿನಗಳ ಕಾಲ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು, ಸದ್ಯ ಸಿದ್ಧತೆಗಳು ಆರಂಭವಾಗಿವೆ.
ಸುವರ್ಣ ವಿಧಾನಸೌಧದಲ್ಲಿ ಅಧಿವೇಶನಕ್ಕೂ ಮೊದಲು, ಅಗತ್ಯ ವಿದ್ಯುದೀಕರಣ, ನಗರದ ರಸ್ತೆಗಳ ದುರಸ್ತಿ, ಗಣ್ಯರು ಉಳಿದುಕೊಳ್ಳುವ ಪ್ರವಾಸಿ ಮಂದಿರದಲ್ಲಿ ಅಗತ್ಯ ಕಾಮಗಾರಿ ಸೇರಿದಂತೆ ಒಟ್ಟು 64 ಕಾಮಗಾರಿಗಳನ್ನು ಈ ಅವಧಿಯಲ್ಲಿ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಜಿಲ್ಲಾಡಳಿತ ಹಾಗೂ ಲೋಕೋಪಯೋಗಿ ಇಲಾಖೆ ಮೂಲಕ 9.60 ಕೋಟಿ ರೂ. ಪ್ರಸ್ತಾವನೆ ಸಿದ್ಧಪಡಿಸಿ ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಲಾಗಿದೆ.

ಚಳಿಗಾಲದ ಅಧಿವೇಶನಕ್ಕೆ ಜಿಲ್ಲಾಡಳಿತ ಮತ್ತು ಲೋಕೋಪಯೋಗಿ ಇಲಾಖೆ ಸಿದ್ಧತೆ ಆರಂಭಿಸಿವೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಚೊಚ್ಚಲ ಅಧಿವೇಶನ ನಡೆದ ನಂತರ, ಸುವರ್ಣಸೌಧದಲ್ಲಿ ಚಟುವಟಿಕೆಗಳು ಕಡಿಮೆಯಾಗಿದ್ದವು. ಆದ್ದರಿಂದ ಸದ್ಯ ಧೂಳಿನಿಂದ ತುಂಬಿ ಹೋಗಿರುವ ಸೌಧವನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದೆ. ಮಳೆಗಾಲದಿಂದ ಪಾಚಿಗಟ್ಟಿದ್ದ ಕಟ್ಟಡವನ್ನು ಕೆಮಿಕಲ್ ಹಾಕಿ ಶುಚಿಗೊಳಿಸಲಾಗುತ್ತಿದೆ.
ಊಟಕ್ಕೆ ಎರಡು ಕೋಟಿ : ಹತ್ತು ದಿನಗಳ ಅಧಿವೇಶನಕ್ಕಾಗಿ ಆಗಮಿಸುವ ಜನಪ್ರತಿನಿಧಿಗಳು, ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು ಮತ್ತು ಇತರ ಇಲಾಖೆಗಳ ಸಿಬ್ಬಂದಿಗಳ ಊಟೋಪಚಾರಕ್ಕಾಗಿ ಈ ಬಾರಿ ಜಿಲ್ಲಾಡಳಿತ ಬರೋಬ್ಬರಿ 2 ಕೋಟಿ ವೆಚ್ಚ ಮಾಡಲು ಉದ್ದೇಶಿಸಿದೆ. ಕಳೆದ ಅಧಿವೇಶನದ ಸಂದರ್ಭ ನಡೆದ ಕೆಲ ಕಹಿ ಘಟನೆಗಳ ಹಿನ್ನೆಲೆಯಲ್ಲಿ ಈ ಬಾರಿ ಪೊಲೀಸ್ ಇಲಾಖೆ ಸಾಕಷ್ಟು ಜಾಗೃತವಾಗಿದ್ದು, ಸೂಕ್ತ ಭದ್ರತೆಗೆ 2.85 ಕೋಟಿ ರೂ.ಬೇಕು ಎಂದು ಪ್ರಸ್ತಾವನೆ ಸಲ್ಲಿಸಿದೆ.
ಅಧಿವೇಶನ ಸಂದರ್ಭದಲ್ಲಿ ಸುವರ್ಣ ವಿಧಾನಸೌಧದ ಸುತ್ತಲೂ ಗಸ್ತು ತಿರುಗಲು ಪೊಲೀಸರಿಗೆ ಸರಿಯಾದ ರಸ್ತೆ ಸಂಪರ್ಕವಿರಲಿಲ್ಲ. ಆದ್ದರಿಂದ ಈ ಬಾರಿ 60 ಲಕ್ಷ ರೂ. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಗೆ ರಸ್ತೆ ನಿರ್ಮಾಣ ಮಾಡುತ್ತಿದೆ. ಸದ್ಯ ಜಿಲ್ಲಾಡಳಿತ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಗೆ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಕಳೆದ ವರ್ಷ ದುರಸ್ತಿ ಮಾಡಿದ ಪ್ರವಾಸಿ ಮಂದಿರದಲ್ಲಿ ಈ ಬಾರಿಯೂ ಕಾಮಗಾರಿ ಏಕೆ? ಎಂಬ ಪ್ರಶ್ನೆ ಮೂಡಿದೆ. (ಸುವರ್ಣಸೌಧಕ್ಕೆ ಮತ್ತೆ 40 ಕೋಟಿ ವೆಚ್ಚ)












Click it and Unblock the Notifications