ಡಿನೋಟಿಫಿಕೇಷನ್ ಕೇಸ್ : ಬಜೆಟ್ ಮಂಡನೆ ದಿನದಂದು ಎಚ್ಡಿಕೆ ಕೋರ್ಟಿಗೆ?
Recommended Video
ಬೆಂಗಳೂರು, ಜೂನ್ 27: ಸಮ್ಮಿಶ್ರ ಸರ್ಕಾರದ ಮೊಟ್ಟ ಮೊದಲ ಬಜೆಟ್ ಮಂಡನೆ ಇಟ್ಟ ಮುಹೂರ್ತ ಯಾಕೋ ಸರಿ ಇದ್ದಂತೆ ಕಾಣುತ್ತಿಲ್ಲ. ಜುಲೈ 5ರಂದು ಬಜೆಟ್ ಭಾಷಣ ಮಾಡಲು ಸಿದ್ಧರಾಗುತ್ತಿರುವ ಎಚ್ ಡಿ ಕುಮಾರಸ್ವಾಮಿ ಅವರಿಗೆ ಅಂದು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಬಂದಿದೆ.
2006ರ ಥಣಿಸಂದ್ರ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಎಚ್ ಡಿಕುಮಾರಸ್ವಾಮಿ ಹಾಗೂ ಚೆನ್ನಿಗಪ್ಪ ಅವರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯವು ಸಮನ್ಸ್ ಜಾರಿಗೊಳಿಸಿದೆ. ಜೂನ್ 23ರಂದೇ ಸಮನ್ಸ್ ಜಾರಿಗೊಳಿಸಲಾಗಿದ್ದು, ಜುಲೈ 05ರಂದು ಖುದ್ದು ಹಾಜರಾಗಬೇಕಿದೆ.
ಎಚ್ ಡಿ ಕುಮಾರಸ್ವಾಮಿ ಅವರು 2006ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನ ಥಣಿಸಂದ್ರದಲ್ಲಿದ್ದ 3.24 ಎಕರೆ ಜಮೀನು ಡಿನೋಟಿಫಿಕೇಶನ್ ಮಾಡಿದ್ದರು.
2012ರಲ್ಲಿ ಚಾಮರಾಜನಗರದ ಮಹದೇವಸ್ವಾಮಿ ಎಂಬುವರು ಲೋಕಾಯುಕ್ತ ಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ಕುಮಾರಸ್ವಾಮಿ ಅವರು ನಿರೀಕ್ಷಣಾ ಜಾಮೀನು ಪಡೆದು ಪ್ರಕರಣ ರದ್ದತಿಗೆ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಹೈಕೋರ್ಟ್ ಪ್ರಕರಣ ರದ್ದು ಮಾಡಲು ನಿರಾಕರಿಸಿ, ತನಿಖೆಗೆ ಆದೇಶಿಸಿತ್ತು.
ಏನಿದು ಭೂಮಿ ಡಿನೋಟಿಫಿಕೇಷನ್ ಕೇಸ್
ಬೆಂಗಳೂರಿನ ಥಣಿಸಂದ್ರದ 3 ಎಕರೆ 24 ಗುಂಟೆ ಭೂಮಿ ಡಿನೋಟಿಫಿಕೇಷನ್ ಕೇಸ್ ಇದಾಗಿದೆ. ಶ್ರೀರಾಮ್ ಹಾಗೂ ರವಿಪ್ರಕಾಶ್ ಎಂಬುವವರಿಗೆ ಎಚ್ಡಿಕೆ ಅವರು ಡಿನೋಟಿಫಿಕೇಷನ್ ಮಾಡಿಕೊಟ್ಟಿದ್ದರು. ಬಿಡಿಎ ಭೂಮಿ ಸ್ವಾಧೀನಕ್ಕೆ ಪಡೆದು ಪರಿಹಾರ ನೀಡಿದ ಬಳಿಕ ಸದರಿ ನಿವೇಶನವನ್ನು ಹಂಚಿಕೆ ಮಾಡಲಾಗಿತ್ತು. ಆದರೆ, ಅಂದು ಅರಣ್ಯ ಸಚಿವರಾಗಿದ್ದ ಸಿ ಚೆನ್ನಿಗಪ್ಪ ಅವರ ಮನವಿ ಮೇರೆಗೆ ಕುಮಾರಸ್ವಾಮಿ ಅವರು ಡಿನೋಟಿಫಿಕೇಷನ್ ಮಾಡಿದ್ದರು.
ಸರ್ಕಾರಕ್ಕೆ 50-60 ಕೋಟಿ ನಷ್ಟವಾಗಿದೆ
ಡಿನೋಟಿಫಿಕೇಶನ್ ಮಾಡಿಸಿಕೊಂಡವರು ಕೋಟ್ಯಾಂತರ ರೂಪಾಯಿ ಲಾಭ ಗಳಿಸಿದ್ದರು. ಅಲ್ಲದೇ ಡಿನೋಟಿಫೈ ಮಾಡಿದ್ದ ಜಮೀನು ಮಾರಾಟದಿಂದ ಪಾಲು ಪಡೆದಿರುವ ಆರೋಪ ಸಿಎಂ ಮತ್ತು ಚನ್ನಿಗಪ್ಪರನ್ನು ಸುತ್ತಿಕೊಂಡಿತ್ತು.ಡಿನೋಟಿಫೈ ಆದ ಜಮೀನಿನಿಂದ 44 ನಿವೇಶನಗಳನ್ನು ರೂಪಿಸಿ ಹಂಚಲಾಗಿದೆ. ಸರ್ಕಾರಕ್ಕೆ ಸುಮಾರು 50-60 ಕೋಟಿ ನಷ್ಟವಾಗಿದೆ ಎಂದು ಆರೋಪಿಸಲಾಗಿತ್ತು.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅನ್ವಯ ಪ್ರಕರಣ
ಐಪಿಸಿ ಸೆಕ್ಷನ್ 182, 420ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅನ್ವಯ ಪ್ರಕರಣದ ತನಿಖೆ ನಡೆಸಲಾಗಿತ್ತು. 2007ರ ಅಕ್ಟೋಬರ್ನಲ್ಲಿ ಥಣಿಸಂದ್ರ ಗ್ರಾಮದಲ್ಲಿ 3.8 ಎಕರೆ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಲು ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಆದೇಶಿಸಿದ್ದರು. ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸರು ಚಾರ್ಜ್ ಶೀಟ್ ಕೂಡಾ ಹಾಕಿದ್ದರು.
ಪ್ರಕರಣ ರದ್ದು ಪಡಿಸಲು ಕೋರಿದ್ದ ಎಚ್ಡಿಕೆ
2012ರಲ್ಲಿ ಚಾಮರಾಜನಗರದ ಮಹದೇವಸ್ವಾಮಿ ಎಂಬುವರು ಲೋಕಾಯುಕ್ತ ಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ಕುಮಾರಸ್ವಾಮಿ ಅವರು ನಿರೀಕ್ಷಣಾ ಜಾಮೀನು ಪಡೆದು ಪ್ರಕರಣ ರದ್ದತಿಗೆ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಹೈಕೋರ್ಟ್ ಪ್ರಕರಣ ರದ್ದು ಮಾಡಲು ನಿರಾಕರಿಸಿ, ತನಿಖೆಗೆ ಆದೇಶಿಸಿತ್ತು. ಈಗ ಮತ್ತೊಮ್ಮೆ ಪ್ರಕರಣ ಜೀವ ಪಡೆದುಕೊಂಡಿದೆ.