ಕನಿಷ್ಠ ಬೆಂಬಲ ಯೋಜನೆ: ಬಿಳಿ ಜೋಳ ಖರೀದಿಗೆ ದರ ನಿಗದಿ
ಬಳ್ಳಾರಿ, ಏಪ್ರಿಲ್ 27: ಬಳ್ಳಾರಿ ಜಿಲ್ಲೆಯಲ್ಲಿ ಬಿಳಿ ಜೋಳ ಬೆಳೆದ ರೈತರಿಗೆ ಜಿಲ್ಲಾಡಳಿತ ಸಿಹಿಸುದ್ದಿ ನೀಡಿದೆ. 2024-25ನೇ ಸಾಲಿನ ಹಿಂಗಾರು ಋತುವಿನಲ್ಲಿ ಬೆಳೆದ ಬಿಳಿ ಜೋಳವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡಲಾಗುತ್ತದೆ ಎಂದು ಘೋಷಣೆ ಮಾಡಲಾಗಿದೆ. ರೈತರಿಂದ ನೇರವಾಗಿ ಬಿಳಿ ಜೋಳ ಖರೀದಿ ಮಾಡುವ ಮೊದಲು ಅವರು ಕೃಷಿ ಇಲಾಖೆಯಲ್ಲಿ ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
ಬಳ್ಳಾರಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಈ ಕುರಿತು ತೀರ್ಮಾನಿಸಿದೆ. 2024-25ನೇ ಸಾಲಿನ ಬೆಂಬಲ ಬೆಲೆ ಯೋಜನೆ ಕಾರ್ಯಾಚರಣೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿಯಮಿತ, ಬಳ್ಳಾರಿ ನಿರ್ವಹಿಸಲಿದೆ ಎಂದು ತಿಳಿಸಿದೆ.

ಹಿಂಗಾರು ಋತುವಿನಲ್ಲಿ ಬೆಳೆದ ಬಿಳಿ ಜೋಳವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಖರೀದಿಸಲಾಗುತ್ತದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಸಕೀನ ತಿಳಿಸಿದ್ದಾರೆ.
ಸರ್ಕಾರದ ಆದೇಶದಂತೆ ಬೆಂಬಲ ಬೆಲೆ ಯೋಜನೆಯಡಿ ಜೋಳವನ್ನು ಮಾರಾಟ ಮಾಡಲು ರೈತರು ಮೊದಲು ಕೃಷಿ ಇಲಾಖೆಯಲ್ಲಿ ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನಂತರ ಆಯಾ ತಾಲ್ಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆ, ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ತಾಲೂಕು ಕೇಂದ್ರ ಕಚೇರಿಗಳಲ್ಲಿ ತೆರೆಯಲಾಗುವ ಖರೀದಿ ಕೇಂದ್ರಗಳಲ್ಲಿ ಜೋಳ ಮಾರಾಟ ಮಾಡಲು ನೋಂದಾಯಿಸಿಕೊಳ್ಳಬೇಕು.
ಬೆಂಬಲ ಬೆಲೆ ಎಷ್ಟು?; ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಬಿಳಿ ಜೋಳ ಖರೀದಿ ಮಾಡಲು ದರವನ್ನು ಘೋಷಣೆ ಮಾಡಲಾಗಿದೆ. ಕ್ವಿಂಟಾಲ್ ಬಿಳಿಜೋಳ-ಹೈಬ್ರಿಡ್ ರೂ. 3,371 ಮತ್ತು ಬಿಳಿಜೋಳ-ಮಾಲ್ದಂಡಿ ರೂ. 3,421 ದರದಲ್ಲಿ ಖರೀದಿ ಮಾಡಲಾಗುತ್ತದೆ.
ಈಗಾಗಲೇ ನೋಂದಣಿ ಪ್ರಾರಂಭಗೊಂಡಿದ್ದು ಮೇ 31ರ ತನಕ ಖರೀದಿಸಲಾಗುತ್ತದೆ. ಬಳ್ಳಾರಿ ತಾಲ್ಲೂಕಿನ ಎಪಿಎಂಸಿ ಆವರಣ ಮತ್ತು ರೂಪನಗುಡಿ. ಸಿರುಗುಪ್ಪ ತಾಲ್ಲೂಕಿನ ಸಿರುಗುಪ್ಪ ಪಟ್ಟಣ, ಕರೂರು, ತಾಳೂರು ಮತ್ತು ಹಚ್ಚೋಳ್ಳಿ. ಕಂಪ್ಲಿ ತಾಲ್ಲೂಕಿನ ಕಂಪ್ಲಿ ಪಟ್ಟಣ, ಎಮ್ಮಿಗನೂರು. ಕುರುಗೋಡು ಮತ್ತು ಸಂಡೂರು ಇಲ್ಲಿ ಖರೀದಿ ಕೇಂದ್ರಗಳಿವೆ.
ರೈತರ ನೋಂದಣಿಯನ್ನು ತಾಲೂಕು ಮಟ್ಟದ/ ಹೋಬಳಿ ಮಟ್ಟದಲ್ಲಿ ಖರೀದಿ ಕೇಂದ್ರಗಳಲ್ಲಿ ಆನ್ಲೈನ್ ಮುಖಾಂತರ ಮಾಡಲಾಗುವುದು. ಖರೀದಿ ಕೇಂದ್ರಕ್ಕೆ ರೈತರು ಕೃಷಿ ಇಲಾಖೆಯಿಂದ ಪಡೆದಿರುವ ಅವರ ಫ್ರೂಟ್ಸ್ ಐಡಿ (ರೈತರ ನೊಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ) ಮತ್ತು ಆಧಾರ್ನೊಂದಿಗೆ ಬರಬೇಕು.
ಬೆಂಬಲ ಬೆಲೆಗಾಗಿ ರೈತರನ್ನು ಪ್ರತ್ಯೇಕವಾಗಿ ನೋಂದಾಯಿಸದೆ ಕೇವಲ ಅವರ ಫ್ರೂಟ್ಸ್ ಐಡಿಯ ಮೂಲಕ ಖರೀದಿಗೆ ನೋಂದಾಯಿಸಲಾಗುವುದು. ರೈತರ ಫ್ರೂಟ್ಸ್ ಐಡಿಯನ್ನು ರೈತರಿಂದಲೇ ಪ್ರಸ್ತುತ ಸಾಲಿನ ಫ್ರೂಟ್ಸ್ ಐಡಿ ಪಡೆಯುವುದು ಕಡ್ಡಾಯ. ರೈತರ ಬಳಿ ಫ್ರೂಟ್ಸ್ ಐಡಿ ಇಲ್ಲದಿದ್ದಲ್ಲಿ ಅಥವಾ ಅವರ ಫ್ರೂಟ್ಸ್ ಐಡಿ ಮಾಹಿತಿ ಪರಿಷ್ಕರಿಸಲು ಕೃಷಿ ಇಲಾಖೆಯನ್ನು ಸಂಪರ್ಕಿಸಿ ಸರಿಪಡಿಸಿಕೊಳ್ಳಬೇಕು.
ಪ್ರತಿಯೊಬ್ಬ ರೈತರ ಫ್ರೂಟ್ಸ್ ಐಡಿ ನಮೂದಿಸಿದ ನಂತರ ದತ್ತಾಂಶದಿಂದ ರೈತರ ಅಗತ್ಯ ಮಾಹಿತಿ ಲಭ್ಯವಾಗಲಿದೆ. ಮಾಹಿತಿಯಲ್ಲಿ ರೈತರ ಹೆಸರು, ವಿಳಾಸ, ಜಾತಿ, ವಯಸ್ಸು, ಮೊಬೈಲ್ ಸಂಖ್ಯೆ, ಜಮೀನು ಮತ್ತು ಬೆಳೆದಿರುವ ಬೆಳೆಯ ವಿವರಗಳು ಹಾಗೂ ರೈತರ ಬ್ಯಾಂಕ್ ಖಾತೆಯ ವಿವರಗಳು ಲಭ್ಯವಿರುತ್ತವೆ. ಹಾಗಾಗಿ ಪ್ರತ್ಯೇಕವಾಗಿ ಬೇರಾವುದೇ ದಾಖಲೆ ನೀಡುವ ಅವಶ್ಯಕತೆ ಇರುವುದಿಲ್ಲ.
ಫ್ರೂಟ್ಸ್ ದತ್ತಾಂಶದನ್ವಯ ರೈತರ ಬೆಳೆ ಸಮೀಕ್ಷೆ ವಿವರದಂತೆ ಬೆಳೆ ವಿಸ್ತೀರ್ಣಕ್ಕನುಗುಣವಾಗಿ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಬಹುದಾದ ಗರಿಷ್ಠ ಪ್ರಮಾಣವನ್ನು ತೋರಿಸಲಾಗುವುದು. ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿದಾಗ ಅದೇ ಖರೀದಿ ಕೇಂದ್ರದಲ್ಲೇ ಖರೀದಿ ಮಾಡಿಕೊಳ್ಳುವುದು. ರೈತರು ಖರೀದಿ ವಿವರಗಳನ್ನು ಒಪ್ಪಿ ನಮೂದಿಸಿದ ನಂತರ ಸ್ವೀಕೃತಿಯನ್ನು ಮುದ್ರಿಸಿ ರೈತರರಿಗೆ ನೀಡಲಾಗುವುದು. ರೈತರು ಭತ್ತ/ ರಾಗಿ/ ಜೋಳ ಸರಬರಾಜು ಮಾಡುವಾಗ ಎಫ್ಎಕ್ಯೂ ಗುಣಮಟ್ಟವನ್ನು ಪರಿಶೀಲಿಸಿ ಖರೀದಿಸಲಾಗುತ್ತದೆ.
ಜೋಳವನ್ನು ಪ್ರತಿ ರೈತರಿಂದ ಪ್ರತಿ ಎಕರೆಗೆ 20 ಕ್ವಿಂಟಾಲ್ ನಂತೆ ಗರಿಷ್ಠ 150 ಕ್ವಿಂಟಾಲ್ ಮೀರದಂತೆ ಖರೀದಿಸತಕ್ಕದ್ದು. ಬೆಂಬಲ ಬೆಲೆ ಯೋಜನೆಯಡಿ ಜೋಳವನ್ನು ಸರಬರಾಜು ಮಾಡಿದ ರೈತರಿಗೆ ಅವರು ಕೃಷಿ ಇಲಾಖೆಯಲ್ಲಿ ನೋಂದಾಯಿಸಿ ಕೊಂಡಿರುವ ಬ್ಯಾಂಕ್ ಖಾತೆಗೆ ಆರ್.ಟಿ.ಜಿ.ಎಸ್ ಮೂಲಕ ಹಣ ಪಾವತಿಸಲಾಗುತ್ತದೆ.
ಮಧ್ಯವರ್ತಿಗಳು/ ಏಜೆಂಟರ್ಗಳು ಖರೀದಿ ಕೇಂದ್ರಗಳಿಗೆ ಜೋಳವನ್ನು ತಂದಲ್ಲಿ ಅಂತಹವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಬೆಂಬಲ ಬೆಲೆ ಯೋಜನೆ ಬಗ್ಗೆ ರೈತರಿಗೆ ಯಾವುದೇ ಸಮಸ್ಯೆಗಳಿದ್ದರೆ ಜಿಲ್ಲಾ ವ್ಯವಸ್ಥಾಪಕರು ಕರ್ನಾಟಕ ಕೃಷಿ ಮಾರಾಟ ಮಂಡಳಿ ಬಳ್ಳಾರಿ ಇವರು ಹಾಗೂ ತಾಲ್ಲೂಕಿನ ತಹಸಿಲ್ದಾರ್/ ಕೃಷಿ ಅಧಿಕಾರಿ/ ಎ.ಪಿ.ಎಂ.ಸಿ ಕಾರ್ಯದರ್ಶಿ/ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು.












Click it and Unblock the Notifications