ಸಂಕಷ್ಟದಲ್ಲಿದ್ದ ಹಂಪಿ ಗೈಡ್ಗಳಿಗೆ ಸಹಾಯ ಮಾಡಿದ ಸುಧಾಮೂರ್ತಿ
ವಿಜಯನಗರ, ಮೇ 20; ವಿಶ್ವವಿಖ್ಯಾತ ಹಂಪಿ ಪ್ರವಾಸಿ ಮಾರ್ಗದರ್ಶಿಗಳು ಕೊರೊನಾ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದನ್ನು ಗಮನಿಸಿದ ಇನ್ಫೋಸಿಸ್ನ ಸುಧಾಮೂರ್ತಿ ಗೈಡ್ಗಳ ನೆರವಿಗೆ ಧಾವಿಸಿದ್ದಾರೆ.
ಕಳೆದ ವರ್ಷವೂ ಲಾಕ್ಡೌನ್ ಅವಧಿಯಲ್ಲಿ ಗೈಡ್ಗಳ ಬದಕು ಸಂಕಷ್ಟಕ್ಕೆ ಸಿಲುಕಿತ್ತು. ಈ ವರ್ಷವೂ ಪುನಃ ಅದೇ ಸ್ಥಿತಿ ಬಂದಿದೆ. ಸುಧಾಮೂರ್ತಿ 100 ಗೈಡ್ ಗಳಿಗೆ ತಲಾ 10 ಸಾವಿರ ರೂ. ಧನ ಸಹಾಯ ಮಾಡಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಆದಾಯವಿಲ್ಲದೇ ಕೈಕಟ್ಟಿ ಕುಳಿತುಕೊಂಡ ಸಂದರ್ಭದಲ್ಲಿ ಸುಧಾಮೂರ್ತಿ ಗೈಡ್ಗಳಿಗೆ ಸದ್ದಿಲ್ಲದೇ ನೆರವು ನೀಡಿದ್ದಾರೆ. ಕಳೆದ ವರ್ಷವು ಸಹ ಸುಧಾಮೂರ್ತಿ ಗೈಡ್ಗಳಿಗೆ ಸಹಾಯ ಮಾಡಿದ್ದರು.
ಪ್ರವಾಸಿತಾಣಗಳಲ್ಲಿ ಇರುವ ಗೈಡ್ಗಳು ದಿನದ ಸಂಪಾದನೆಯನ್ನು ನೆಚ್ಚಿಕೊಂಡಿದ್ದಾರೆ. ಈಗ ಸುಧಾಮೂರ್ತಿ ನೆರವು ನೀಡಿದ್ದರಿಂದ ಕೆಲ ತಿಂಗಳು, ನೆಮ್ಮದಿಯಿಂದ ಜೀವನ ಸಾಗಿಸಬಹುದಾಗಿದೆ. ಸಂಕಷ್ಟ ಕಾಲದಲ್ಲಿ ಸುಧಾಮೂರ್ತಿ ಧನ ಸಹಾಯವನ್ನು ಮರೆಯುವಂತಿಲ್ಲ ಎಂದು ಗೈಡ್ಗಳು ಸಂತಸ ವ್ಯಕ್ತಪಡಿಸಿದರು.
ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಜನರ ಸಂಚಾರಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಮೇ 19ರ ಬೆಳಗ್ಗೆ 10 ರಿಂದ ಮೇ 24ರ ಬೆಳಗ್ಗೆ 6ರವರೆಗೆ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಲಾಗಿದೆ.

7 ತಿಂಗಳು ಪ್ರವಾಸಿಗರು ಇರಲಿಲ್ಲ
ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿತ್ತು. ಸತತ 7 ತಿಂಗಳ ಕಾಲ ಪ್ರವಾಸಿಗರು ಹಂಪಿಯತ್ತ ಮುಖ ಮಾಡಿರಲಿಲ್ಲ. ಡಿಸೆಂಬರ್ ಹಾಗೂ ಜನವರಿಗೆ ಪ್ರವಾಸಿಗರು ಭಯಬಿಟ್ಟು ಹಂಪಿಯ ಕಡೆ ಹಜ್ಜೆ ಹಾಕಿದರು. ಈಗ ಮತ್ತೆ ಲಾಕ್ ಡೌನ್ ಘೋಷಣೆ ಮಾಡಲಾಗಿದ್ದು, ಗೈಡ್ ಗಳಿಗೆ ಸಂಕಷ್ಟ ಆರಂಭವಾಗಿದೆ.

ಸರ್ಕಾರ ಸಹಾಯ ಮಾಡಬೇಕು
ಹಂಪಿಯಲ್ಲಿ ಪ್ರವಾಸಿಗರಿಗೆ ಅರ್ಥವಾಗುವ ರೀತಿಯಲ್ಲಿ ಸುಲಲಿತವಾಗಿ ಇತಿಹಾಸವನ್ನು ಗೈಡ್ಗಳು ವಿವರಿಸುತ್ತಾರೆ. ಇದು ಪ್ರವಾಸೋದ್ಯಮ ಬೆಳವಣಿಗೆಗೆ ಸಹಕಾರಿಯಾಗಿದೆ. ಆದರೆ ಸರಕಾರ ಇಂತಹ ಸಂಕಷ್ಟ ಸಮಯದಲ್ಲಿ ಗೈಡ್ಗಳನ್ನ ಪರಿಗಣಿಸುವುದಿಲ್ಲ. ಕೂಡಲೇ ಸರಕಾರ ಗೈಡ್ ನೆರವಿಗೆ ಆಗಮಿಸಬೇಕು ಎಂದು ಗೈಡ್ಗಳು ಆಗ್ರಹಿಸಿದರು.

ಬದುಕು ಸಾಗಿಸಲು ಸಹಾಯಕ
"ಸುಧಾಮೂರ್ತಿ ಅವರ ಧನಸಹಾಯ ಬಳಷ್ಟು ಸಹಕಾರಿಯಾಗಿದೆ. ಅಲ್ಲದೇ, ಬದುಕು ಸಾಗಿಸಲು ಸಹಾಯಕವಾಗಿದೆ" ಎಂದು ಹಂಪಿಯ ಹಿರಿಯ ಮಾರ್ಗದರ್ಶಿ ಹನುಮಾನಸಿಂಗ್ ಹೇಳಿದರು.

ಎಂದೂ ಮರೆಯುವಂತಿಲ್ಲ
"ಸುಧಾಮೂರ್ತಿ ಸಹಾಯ ಎಂದು ಮರೆಯುವಂತಿಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ಜೀವನ ನಡೆಸುವುದು ಕಷ್ಟಕರವಾಗಿದೆ. ಇತಂಹ ಸಂದಿಗ್ಧ ಪರಿಸ್ಥಿತಿಯಲ್ಲಿ ಧನ ಸಹಾಯ ಮಾರ್ಗದರ್ಶಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ" ಎಂದು ಗೈಡ್ ಗೋಪಾಲ್ ಹೇಳಿದ್ದಾರೆ.












Click it and Unblock the Notifications