Breaking; ಹೊಸಪೇಟೆ, ಗಣೇಶ ಮೂರ್ತಿ ವಿಸರ್ಜನೆ ವೇಳೆ ಕ್ರೇನ್ ಪಲ್ಟಿ, ಒಬ್ಬ ಸಾವು
ಬಳ್ಳಾರಿ, ಸೆಪ್ಟೆಂಬರ್ 11: ವಿಜಯನಗರ ಜಿಲ್ಲೆಯ ಹೊಸಪೇಟೆಯ ತುಂಗಭದ್ರಾ ಡ್ಯಾಂ ಕಾಲುವೆ ಬಳಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಕ್ರೇನ್ ಪಲ್ಟಿಯಾಗಿದೆ. ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ.
35 ಅಡಿ ಎತ್ತರದ ಗಣೇಶ ಮೂರ್ತಿ ವಿಸರ್ಜನೆ ವೇಳೆ ಶನಿವಾರ ರಾತ್ರಿ 1.30ರ ಸುಮಾರಿಗೆ ಈ ಘಟನೆ ನಡೆದಿದೆ. ತುಂಗಭದ್ರಾ ಡ್ಯಾಂ ಕಾಲುವೆ ಬಳಿ ಗಣೇಶ ಮೂರ್ತಿ ಇದ್ದ ಕ್ರೇನ್ ಪಲ್ಟಿಯಾಗಿದೆ.
ತುಂಗಭದ್ರಾ ಡ್ಯಾಂನ ಇವಿ ಕ್ಯಾಂಪ್ ನಿವಾಸಿ ಅಶೋಕ್ (18) ಮೃತಪಟ್ಟವರು. ನಿಖಿಲ್ ಎಂಬುವವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಸ್ಥಿತಿಯೂ ಗಂಭೀರವಾಗಿದೆ.

ಹೊಸಪೇಟೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ 35 ಅಡಿ ಅತ್ತರದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಶನಿವಾರ ನಡೆದಿತ್ತು. ಟಿಬಿ ಡ್ಯಾಂ ಕಾಲುವೆಯಲ್ಲಿ ಗಣೇಶ ಮೂರ್ತಿ ವಿಸರ್ಜಿಸಲು ಸಕಲ ತಯಾರಿ ನಡೆದಿತ್ತು.
ವಾಹನದಿಂದ ಗಣೇಶ ಮೂರ್ತಿಯನ್ನು ಕ್ರೇನ್ ಮೂಲಕ ಎತ್ತಿ ಕಾಲುವೆಗೆ ಇಳಿಸುವಾಗ ಕ್ರೇನ್ ಪಲ್ಟಿಯಾಗಿದೆ. ಆಗ ಇಬ್ಬರು ಯುವಕರು ಅದರ ಅಡಿ ಸಿಲುಕಿದ್ದಾರೆ. ಯುವಕರು ಗಣೇಶ ವಿಸರ್ಜನೆ ನೋಡಲು ಬಂದಿದ್ದರು. ಅವರು ಗಣೇಶ ಪ್ರತಿಷ್ಠಾಪಿಸಿದ ಸಮಿತಿ ಸದಸ್ಯರಲ್ಲ.
ಕ್ರೇನ್ ಪಲ್ಟಿಯಾದ ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಆದರೆ ಕ್ರೇನ್ ಅಡಿಯಲ್ಲಿ ಸಿಲುಕಿದ್ದ ಯುವಕರು ಗಂಭೀರವಾಗಿ ಗಾಯಗೊಂಡಿದ್ದರು.
ಎರಡು ಕ್ರೇನ್ ತರಿಸಿ ಸುಮಾರು ಒಂದು ಗಂಟೆಗಳ ಕಾಲ ಕಾರ್ಯಚಾರಣೆ ನಡೆಸಲಾಯಿತು. ಆದರೆ ಗಾಯಗೊಂಡಿದ್ದ ಅಶೋಕ ಸಾವನ್ನಪ್ಪಿದರು. ಗಾಯಗೊಂಡ ನಿಖಿಲ್ರನ್ನು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.
ಘಟನಾ ಸ್ಥಳಕ್ಕೆ ಹೊಸಪೇಟೆ ಡಿವೈಎಸ್ಪಿ ವಿಶ್ವನಾಥ್ ರಾವ್ ಕುಲಕರ್ಣಿ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿದರು. ಪಿಯುಸಿ ಓದುತ್ತಿದ್ದ ಮಗನನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.












Click it and Unblock the Notifications