10,751 ಕಾರ್ಮಿಕರನ್ನು ಕ್ವಾರಂಟೈನ್ ಮಾಡಲು ಮುಂದಾದ ಬಳ್ಳಾರಿಯ ಜಿಂದಾಲ್
ಬಳ್ಳಾರಿ, ಜೂನ್ 12: ಕೊರೊನಾ ವೈರಸ್ ಮಹಾಮಾರಿಯು ಈ ಮೊದಲು ರಾಜ್ಯದಲ್ಲಿ ಮೈಸೂರಿನ ಜುಬಿಲಿಯಂಟ್ ಕಾರ್ಖಾನೆಯನ್ನು ಕಾಡಿತ್ತು. ಆದರೆ ಗಣಿನಾಡು ಬಳ್ಳಾರಿಯ ಜಿಂದಾಲ್ ಸಮೂಹ ಸಂಸ್ಥೆ ಈಗಾಗಲೇ ಜುಬಿಲಿಯಂಟ್ ಕಾರ್ಖಾನೆಯನ್ನೂ ಮೀರಿಸಿದೆ.
Recommended Video
ಎರಡು ಸಾವಿರ ಸಿಬ್ಬಂದಿ ಹೊಂದಿರುವ ಜುಬಿಲಿಯಂಟ್ ಕಾರ್ಖಾನೆಯಲ್ಲಿ ಕೇವಲ 76 ಪ್ರಕರಣ ದಾಖಲಾಗಿತ್ತು , ಆದರೆ 35 ಸಾವಿರ ನೌಕರರನ್ನು ಹೊಂದಿರುವ ಜಿಂದಾಲ್ ನಲ್ಲಿ ಕೇವಲ ಮೂರು ದಿನಗಳಲ್ಲಿ 86 ಪ್ರಕರಣಗಳು ದಾಖಲಾಗಿವೆ. ಹೀಗಿರುವಾಗ ಜಿಂದಾಲ್ ಸಮೂಹ ಸಂಸ್ಥೆ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ. ಸೋಂಕು ತೆಡೆಯಬೇಕಿದ್ದ ಸಂಸ್ಥೆ ಕಾಟಾಚಾರಕ್ಕೆ ತನ್ನ ಸಿಬ್ಬಂದಿಯನ್ನು ಹೋಮ್ ಕ್ವಾರಂಟೈನ್ ಮಾಡಿದೆ.
86ಕ್ಕೇರಿದ ಬಳ್ಳಾರಿಯ ಜಿಂದಾಲ್ ಕಾರ್ಖಾನೆ ಸೋಂಕಿತರ ಸಂಖ್ಯೆ
ರಾಜ್ಯದ ಅತೀ ದೊಡ್ಡ ಉಕ್ಕಿನ ಕಾರ್ಖಾನೆ ಜಿಂದಾಲ್ ನಲ್ಲಿ ಕೊರೊನಾ ವೈರಸ್ ರಣಕೇಕೆ ಹಾಕುತ್ತಿದೆ. ಕೇವಲ ಮೂರೇ ದಿನಗಳಲ್ಲಿ ಜಿಂದಾಲ್ ನಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಶತಕ ಸಮೀಪಿಸಿದ್ದು, ಸೋಂಕಿತರ ಸಂಖ್ಯೆ 86 ಕ್ಕೆ ಏರಿಕೆಯಾಗಿದೆ. ಹೀಗಿರುವಾಗ ಜಿಂದಾಲ್ ನೆಪ ಮಾತ್ರಕ್ಕೆ ತನ್ನ ಕಾರ್ಮಿಕರ ಹಿತ ಕಾಪಾಡುವ ಸಲುವಾಗಿ ಕೇವಲ ನಾಲ್ಕು ದಿನಗಳ ಕಾಲ ಹೋಮ್ ಕ್ವಾರಂಟೈನ್ ಮಾಡಲು ಮುಂದಾಗಿದೆ.
ಸರ್ಕಾರ ಸಾಂಸ್ಥಿಕ ಕ್ವಾರಂಟೈನ್ ರದ್ದು ಮಾಡಿದ್ದು, ಹೋಮ್ ಕ್ವಾರಂಟೈನ್ ನ್ನು ೧೪ ದಿನಗಳಿಗೆ ಮೀಸಲು ಮಾಡಿದೆ. ಆದರೆ ಜಿಂದಾಲ್ ಮಾತ್ರ ಕೇವಲ ನಾಲ್ಕು ದಿನಗಳ ಕಾಲ ಕ್ವಾರಂಟೈನ್ ಮಾಡಿ, ನಾಟಕವಾಡುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿವೆ.
ಬಳ್ಳಾರಿಯ 1793 ಕಾರ್ಮಿಕರು, ಸಂಡೂರಿನ 503 ಕಾರ್ಮಿಕರು, ಹೊಸಪೇಟೆಯ 989 ಕಾರ್ಮಿಕರು, ತೋರಣಗಲ್ ಸುತ್ತಲಿನ ಹಳ್ಳಿಯ 4262 ಕಾರ್ಮಿಕರು, ಜಿಂದಾಲ್ ಟೌನ್ ಶಿಪ್ ನಲ್ಲಿ ವಾಸವಾಗಿರುವ 3207 ಕಾರ್ಮಿಕರು ಸೇರಿದಂತೆ ಒಟ್ಟು 10,751 ಕಾರ್ಮಿಕರಿಗೆ ಹೋಮ್ ಕ್ವಾರಂಟೈನ್ ಮಾಡಲಾಗಿದೆ.
ರಾಜ್ಯದ ನಂಬರ್ ಒನ್ ಉಕ್ಕು ಕಾರ್ಖಾನೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ಜಿಂದಾಲ್ ಸಂಸ್ಥೆಯನ್ನು ಲಾಕ್ ಡೌನ್ ಸಮಯದಲ್ಲಿಯೂ ಬಂದ್ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದರು. ಆದರೆ ಈ ಹಿಂದೆ ಈ ಕಾರ್ಖಾನೆಯಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ಈ ಕಾರ್ಖಾನೆಯಲ್ಲಿ ಕೇವಲ ಮೂರು ದಿನಗಳಲ್ಲಿ 86 ಪ್ರಕರಣ ದಾಖಲಾಗಿದ್ದು, ಈಗಲಾದರೂ ಜಿಂದಾಲ್ ನ್ನು ಸಂಪೂರ್ಣ ಬಂದ್ ಮಾಡುವಂತೆ ಒತ್ತಡ ಹೆಚ್ಚಾಗಿದೆ.
ಬಳ್ಳಾರಿಯ ಜಿಂದಾಲ್ ನಲ್ಲಿ ಕೊರೊನಾ ಸ್ಫೋಟ; ಜಿಲ್ಲೆಯಲ್ಲಿ 94ಕ್ಕೇರಿದ ಸೋಂಕಿತರ ಸಂಖ್ಯೆ
ಈ ಸಮೂಹ ಸಂಸ್ಥೆಯಲ್ಲಿ 35 ಸಾವಿರಕ್ಕೂ ಅಧಿಕ ನೌಕರರು ಕೆಲಸ ಮಾಡುತ್ತಿದ್ದು, ಇವರ ರಕ್ಷಣೆ ಮಾಡುವುದು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿದೆ. ಹೀಗಿದ್ದರೂ ಜಿಂದಾಲ್ ಮಾತ್ರ ಏನೂ ಆಗಿಲ್ಲ, ಎನ್ನುವ ಹಾಗೆ ಕೇವಲ ನಾಲ್ಕು ದಿನಗಳ ಕ್ವಾರಂಟೈನ್ ಮಾಡಿದ್ದು ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ . ಅಲ್ಲದೇ ಜಿಂದಾಲ್ ನಲ್ಲಿ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್.
ರಾಜ್ಯ ಸರ್ಕಾರ ಮತ್ತು ಜಿಂದಾಲ್ ಸಂಸ್ಥೆಯು ಆದಷ್ಟೂ ಬೇಗ ಎಚ್ಚರ ವಹಿಸದೇ ಇದ್ದರೆ ಕೊರೊನಾ ವೈರಸ್ ತನ್ನ ಅಟ್ಟಹಾಸವನ್ನು ಮುಂದುವರೆಸಲಿದೆ.