ಶ್ರೀರಾಮುಲು ಖಡಕ್ ಸೂಚನೆ; ಬಳ್ಳಾರಿ ವಿಮ್ಸ್ನಲ್ಲಿ ಸ್ವಚ್ಛತಾ ಕಾರ್ಯ
ಬಳ್ಳಾರಿ, ಫೆಬ್ರವರಿ 08; ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಶನಿವಾರ ದಿಢೀರ್ ಭೇಟಿ ನೀಡಿದ್ದರು. ಆಸ್ಪತ್ರೆ, ಆವರಣದಲ್ಲಿ ಸ್ವಚ್ಛತೆ ಇಲ್ಲದಿರುವುದನ್ನು ಗಮನಿಸಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು. ಸೋಮವಾರದಿಂದ ವಿಮ್ಸ್ ಆಡಳಿತ ಮಂಡಳಿ ಸ್ವಚ್ಛತೆಗೆ ಗಮನಕೊಟ್ಟಿದೆ.
ವಿಮ್ಸ್ ಆಸ್ಪತ್ರೆಗೆ ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ಶ್ರೀರಾಮುಲು ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಭೇಟಿ ನೀಡಿದ್ದರು. ವಿವಿಧ ವಿಭಾಗಳಿಗೆ ಭೇಟಿ ನೀಡಿದ್ದರು. ರೋಗಿಗಳ ಜೊತೆ ಸಂವಾದ ನಡೆಸಿದ್ದರು.
ಸಚಿವರ ಭೇಟಿ ಬಳಿಕ ವಿಮ್ಸ್ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿದೆ. ಆಸ್ಪತ್ರೆಯ ಆವರಣದಾದ್ಯಂತ ಸ್ವಚ್ಛತಾ ಕಾರ್ಯವನ್ನು ಸೋಮವಾರ ಬೆಳಗ್ಗೆಯಿಂದಲೇ ಆರಂಭಿಸಿತು. ಆಸ್ಪತ್ರೆಯ ಹೆರಿಗೆ ವಾರ್ಡ್ ಹತ್ತಿರ, ಹಳೆಯ ಡೆಂಟಲ್ ಕಾಲೇಜು ಸುತ್ತಮುತ್ತ ಸೇರಿದಂತೆ ಅಸ್ಪತ್ರೆಯ ಎಲ್ಲೆಡೆ ಸ್ವಚ್ಛತಾ ಕಾರ್ಯ ಮಾಡಲಾಗುತ್ತಿದೆ.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಶುಶ್ರೂಷಕ ಅಧೀಕ್ಷಕರುಗಳಿಗೆ ಪತ್ರ ಬರೆದು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚನೆ ನೀಡಿದ್ದಾರೆ. ಪ್ರತಿನಿತ್ಯ ಶುಶ್ರೂಷ ಮೇಲ್ವಿಚಾರಕರು ಮತ್ತು ಸ್ವಚ್ಚತಾ ಕಾರ್ಯಕರ್ತರನ್ನು ಬಳಸಿಕೊಂಡು ಯಾವುದೇ ದೂರುಗಳು ಬರದ ಹಾಗೆ ವಾರ್ಡ್ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಚತೆ ಕಾಪಾಡಬೇಕು ಎಂದು ಹೇಳಿದ್ದಾರೆ.

ಪತ್ರದಲ್ಲಿ ಕ್ರಮ ಕೈಗೊಳ್ಳುವ ಎಚ್ಚರಿಕೆ
ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಫೆಬ್ರವರಿ 5 ಮತ್ತು 6 ರಂದು ವಿಮ್ಸ್ ಆಸ್ಪತ್ರೆಯಗೆ ಭೇಟಿ ನೀಡಿ ಆಸ್ಪತ್ರೆಯ ವಾರ್ಡ್ಗಳು ಮತ್ತು ಆಸ್ಪತ್ರೆಯ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಚತೆಯನ್ನು ಗಮನಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿನಿತ್ಯ ಸ್ವಚ್ಚತೆಯನ್ನು ಕಾಪಾಡಲು ತಿಳಿಸಿದ್ದಾರೆ ಮತ್ತು ತಪ್ಪಿದ್ದಲ್ಲಿ ಸಂಬಂಧಿತ ಅಧಿಕಾರಿಗಳ ವಿರುದ್ದ ನಿಯಮಸಾರವಾಗಿ ಕ್ರಮ ಜರುಗಿಸಲಾಗುವುದು ಎಂದು ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.

ಪತ್ರದಲ್ಲಿ ಸಿಬ್ಬಂದಿಗೆ ಸೂಚನೆ
ಆಸ್ಪತ್ರೆಯಲ್ಲಿ ಸ್ವಚ್ಚತೆಯನ್ನು ಕಾಪಾಡುವುದು ತಮ್ಮ ಜವಾಬ್ದಾರಿಯಾಗಿದ್ದು, ಸ್ವಚ್ಚತೆ ಮೇಲ್ವಿಚಾರಣೆ ಮಾಡಲು ತಮ್ಮ ಅಧೀನದಲ್ಲಿ 14 ಜನ ಶುಶ್ರೂಷ ಮೇಲ್ವಿಚಾರಕರನ್ನು ಮತ್ತು ಸ್ವಚ್ಚತೆ ಮಾಡಲು 370 ಜನ ಸ್ವಚ್ಚತಾ ಕಾರ್ಯಕರ್ತರು ಕಾರ್ಯ ನಿರ್ವಹಿಸುತ್ತಿದ್ದರೂ ಸಹ ವಾರ್ಡ್ಗಳು ಮತ್ತು ಆಸ್ಪತ್ರೆಯ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಚತೆ ಇಲ್ಲವಾಗಿದೆ. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿಸಿರುವುದು ಮತ್ತು ಬೇಜವಾಬ್ದಾರಿಯಿಂದ ಇರುವುದು ಕಂಡು ಬಂದಿದೆ ಎಂದು ವೈದ್ಯಕೀಯ ಅಧೀಕ್ಷಕರು ಪತ್ರದಲ್ಲಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ಸಭೆ
ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ವಿಮ್ಸ್ ಆಸ್ಪತ್ರೆ ಭೇಟಿ ಬಳಿಕ ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ ಕೂಡ ಶುಶ್ರೂಷಕ ಅಧೀಕ್ಷಕರುಗಳು ಹಾಗೂ ಶುಶ್ರೂಷ ಮೇಲ್ವಿಚಾರಕರೊಂದಿಗೆ ವಿಮ್ಸ್ ಸಭಾಂಗಣದಲ್ಲಿ ಸೋಮವಾರ ಸಭೆ ನಡೆಸಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಆಸ್ಪತ್ರೆ, ಆವರಣದಲ್ಲಿ ಸ್ವಚ್ಛತೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದ್ದರು. ಆದ್ದರಿಂದ ತಕ್ಷಣದಿಂದಲೇ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ.

ಅಧಿಕಾರಿಗಳ ಜೊತೆ ಸಚಿವರ ಸಭೆ
ಶನಿವಾರ ವಿಮ್ಸ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ರೋಗಿಗಳ ಅಹವಾಲು ಆಲಿಸಿದ್ದ ಸಚಿವ ಬಿ. ಶ್ರೀರಾಮುಲು ಭಾನುವಾರ ವಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಆಸ್ಪತ್ರೆಯ ನಿರ್ದೇಶಕರು ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರ ಸಭೆ ನಡೆಸಿದ್ದರು. ವಿಮ್ಸ್ ಆಸ್ಪತ್ರೆ ಸುಧಾರಣೆಗೆ ಒಂದು ತಿಂಗಳು ಗಡುವು ನೀಡಿದ್ದರು. ಇಲ್ಲದಿದ್ದರೇ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು.
"ಜನರಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ವಿಷಯದಲ್ಲಿ ಒಂದು ತಿಂಗಳೊಳಗೆ ವಿಮ್ಸ್ ಆಸ್ಪತ್ರೆಯಲ್ಲಿ ಸುಧಾರಣೆಯಾಗಬೇಕು. ಆಸ್ಪತ್ರೆ, ಆವರಣದಲ್ಲಿ ಸ್ವಚ್ಛತೆ ಕಾಪಾಡಬೇಕು. ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕು" ಎಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದರು.

550 ಹಾಸಿಗೆ ಆಸ್ಪತ್ರೆಗೆ ಹೊಸ ಕಟ್ಟಡ
"ಬಳ್ಳಾರಿ ವಿಮ್ಸ್ಗೆ ಪ್ರತಿದಿನ ಕರ್ನಾಟಕ ಮತ್ತು ಆಂಧ್ರಪ್ರದೇಶದ ಸಾವಿರಾರು ಜನರು ಚಿಕಿತ್ಸೆಗೆ ಆಗಮಿಸುತ್ತಾರೆ. ಆಸ್ಪತ್ರೆ 1100 ಹಾಸಿಗೆಗಳಿಂದು ಕೂಡಿದ್ದು, 550 ಹಾಸಿಗೆಗಳ ಬಿಲ್ಡಿಂಗ್ ಶಿಥಿಲಗೊಂಡಿದ್ದು, ಅದನ್ನು ಒಡೆದು ಹೊಸ ಕಟ್ಟಡ ನಿರ್ಮಾಣಕ್ಕೆ ಸರ್ಕಾರದ ನೆರವು ಪಡೆಯಲಾಗುವುದು. ವೈದ್ಯರು ಮತ್ತು ಅಗತ್ಯ ಸಿಬ್ಬಂದಿಗಳು ಸಕಾಲಕ್ಕೆ ಆಸ್ಪತ್ರೆಯಲ್ಲಿ ಲಭ್ಯವಿದ್ದು, ಜನರಿಗೆ ಚಿಕಿತ್ಸೆ ನೀಡಬೇಕು ಮತ್ತು ಔಷಧಿಗಳ ಸಮಸ್ಯೆ ಬಾರದಂತೆ ನೋಡಿಕೊಳ್ಳಬೇಕು" ಎಂದು ಸಚಿವರು ಹೇಳಿದ್ದರು.












Click it and Unblock the Notifications