ಎಚ್ಚರ: ತುಂಗಭದ್ರಾ ಅಣೆಕಟ್ಟೆಯಿಂದ 3 ಲಕ್ಷ ಕ್ಯೂಸೆಕ್ ನೀರು ಹೊರಕ್ಕೆ
ಬಳ್ಳಾರಿ, ಆಗಸ್ಟ್ 11: ತುಂಗಭದ್ರಾ ಅಣೆಕಟ್ಟೆಯಿಂದ ಇಂದು ಸಂಜೆ 3 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದ್ದು, ಸುಮಾರು 10 ಹಳ್ಳಿಗಳು ಮುಳುಗಡೆಯ ಭೀತಿ ಎದುರಿಸುತ್ತಿವೆ.
ಇಂದು ಸಂಜೆ ವೇಳೆಗೆ ತುಂಗಭದ್ರಾ ಜಲಾಶಯದಿಂದ ನೀರು ಹೊರಗೆ ನಿಡಲಾಗುತ್ತಿದ್ದು, ಮುಳುಗಡೆ ಭೀತಿ ಎದುರಿಸುತ್ತಿರುವ ಹಳ್ಳಿಗಳನ್ನು ಖಾಲಿ ಮಾಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಮತ್ತು ಸ್ಥಳಾಂತರಿಸಿದವರಿಗಾಗಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ.
1633 ಅಡಿ ಸಾಮರ್ಥ್ಯವುಳ್ಳ ತುಂಗಭದ್ರಾ ಜಲಾಶಯವು ನಿನ್ನೆಯ ಮಾಹಿತಿಯಂತೆ 1626 ಅಡಿ ತುಂಬಿತ್ತು. ನಿನ್ನೆ 1.84 ಕ್ಯೂಸೆಕ್ ನೀರು ಒಳಹರಿವು ಆಗಿತ್ತು. 60,000 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗಿತ್ತು. ಇಂದು ಒಳಹರಿವು ಇನ್ನಷ್ಟು ಹೆಚ್ಚಾದ ಕಾರಣ ಇಂದು ಇನ್ನೂ ಹೆಚ್ಚಿನ ನೀರನ್ನು ನದಿಗೆ ಬಿಡಲಾಗುತ್ತಿದೆ.

ಬಳ್ಳಾರಿ ಜಿಲ್ಲೆಯ ಕೆಲ ಭಾಗದಲ್ಲಿ ಈಗಾಗಲೇ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಹೊಸಪೇಟೆ ತಾಲ್ಲೂಕಿನ ಐದು ಮತ್ತು ಕಂಪ್ಲಿ ತಾಲ್ಲೂಕಿನ ಐದು ತಾಲ್ಲೂಕುಗಳು ಮುಳುಗಡೆ ಭೀತಿ ಎದುರಿಸುತ್ತಿವೆ. ಅವಶ್ಯಕತೆ ಇದ್ದಲ್ಲೆಲ್ಲಾ ಗಂಜಿ ಕೇಂದ್ರಗಳನ್ನು ತೆರೆಯುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಮಳೆಯಿಂದ ಹಾಗೂ ಜಲಾಶಯದಿಂದ ನೀರು ಬಿಟ್ಟ ಸಂದರ್ಭದಲ್ಲಿ ಸರಕಾರ ನೀಡುವ ಪರಿಹಾರ ಪದ್ಧತಿ ತುಂಬಾ ಹಳೆಯದಾಗಿದೆ. ತುಂಬಾ ಹಾನಿಯಾದರೂ ಕಡಿಮೆ ಪರಿಹಾರ ನೀಡಲಾಗುತ್ತಿದ್ದು, ಇದು ಬದಲಾವಣೆಯಾಗಬೇಕು ಎಂದು ಶಾಸಕ ಗಣೇಶ ಅವರು ಒತ್ತಾಯಿಸಿದರು. ಬೆಳೆಹಾನಿಗೆ ಸಂಬಂಧಿಸಿದಂತೆ ಈಗಾಗಲೇ ಅಧಿಕಾರಿಗಳ ತಂಡ ಸಮೀಕ್ಷೆ ನಡೆಸಿದ್ದು, ಅಗತ್ಯ ಪರಿಹಾರ ನೀಡಲಿದೆ ಎಂದು ಕಂಪ್ಲಿ ಶಾಸಕ ಗಣೇಶ್ ಹೇಳಿದರು.
3 ಲಕ್ಷ ಕ್ಯೂಸೆಕ್ ಬಿಟ್ಟರೆ ಕಂಪ್ಲಿ ಸೇತುವೆ ಬಳಿಯ 500 ಕುಟುಂಬಗಳ ಸ್ಥಳಾಂತರಕ್ಕೆ ಮನವೊಲಿಸಿ ಅವರನ್ನು ಬೇರೆಡೆ ಸ್ಥಳಾಂತರಿಸಲಾಗುವುದು. ಅವರಿಗೆ ಸುಸಜ್ಜಿತ ಮನೆ ನಿರ್ಮಿಸಿಕೊಡಲಾಗುವುದು ಎಂದರು.












Click it and Unblock the Notifications