ಆಂಧ್ರಕ್ಕೆ 'ಕಿಂಗ್' ಆಗಲು ಹೊರಟ ಪವನ್ ಕಲ್ಯಾಣ್ ಗೆ ನಿರಾಶೆ
ಅಮರಾವತಿ, ಮೇ 20: ತೆಲುಗು ಚಿತ್ರರಂಗದ ಪವರ್ ಸ್ಟಾರ್, ಜನಸೇನಾ ಪಕ್ಷದ ಸ್ಥಾಪಕ ಪವನ್ ಕಲ್ಯಾಣ್ ಅವರ ಚುನಾವಣಾ ರಾಜಕೀಯದ ಆರಂಭದ ಹೆಜ್ಜೆಯಲ್ಲೇ ಮುಗ್ಗರಿಸಲಿದ್ದಾರೆ. ಆಂಧ್ರಪ್ರದೇಶ ವಿಧಾನಸಭೆಗಾಗಿ ಎರಡು ಕ್ಷೇತ್ರಗಳಿಂದ ಕಣಕ್ಕಿಳಿದಿರುವ ಪವನ್ ಗೆ ಮೇ 19ರಂದು ಹೊರ ಬಂದ ಎಕ್ಸಿಟ್ ಪೋಲ್ ನಿಂದ ಕಹಿ ಸುದ್ದಿ ಬಂದಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಬಹುತೇಕ ಎಕ್ಸಿಟ್ ಪೋಲ್ ಗಳಲ್ಲಿ ವೈಎಸ್ಸಾರ್ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ. ಕೆಲವು ಸಮೀಕ್ಷೆಗಳಲ್ಲಿ ಚಂದ್ರಬಾಬು ನಾಯ್ಡು ಅವರು ಅಧಿಕಾರ ಉಳಿಸಿಕೊಳ್ಳಲಿದ್ದಾರೆ ಎಂದು ಬಂದಿದೆ. ಆದರೆ, ಪವನ್ ಕಲ್ಯಾಣ್ ಅವರು ಕಿಂಗ್ ಅಥವಾ ಕಿಂಗ್ ಮೇಕರ್ ಆಗಲು ಸಾಧ್ಯವಿಲ್ಲ ಎಂದು ಎಕ್ಸಿಟ್ ಪೋಲ್ ಹೇಳಿದೆ.
ಜನಸೇನಾ ಪಕ್ಷಕ್ಕೆ 1 ರಿಂದ 4 ಸ್ಥಾನಗಳು ಮಾತ್ರ ಸಿಗಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಆದರೆ, ಸ್ವಾಗತಾರ್ಹ ಸಂಗತಿಯೆಂದರೆ ಶೇ 10ರಷ್ಟು ಮತ ಗಳಿಸಲಿದೆ ಎಂಬ ವರದಿ ಬಂದಿದೆ. ಈಗಷ್ಟೇ ಎಂಟ್ರಿ ಕೊಟ್ಟಿರುವ ರಾಜಕೀಯ ಪಕ್ಷಕ್ಕೆ ಇದು ಬಹು ದೊಡ್ಡ ಹೆಜ್ಜೆ ಎನ್ನಬಹುದು.

ಜನಸೇನಾ 140 ವಿಧಾನಸಭಾ ಕ್ಷೇತ್ರ ಹಾಗೂ 18 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಆಂಧ್ರಪ್ರದೇಶದಲ್ಲಿ ಏಪ್ರಿಲ್ 11ರಂದು 175 ಸದಸ್ಯರ ವಿಧಾನಸಭೆ ಹಾಗೂ 25 ಸದಸ್ಯರ ಲೋಕಸಭೆಗೆ ಚುನಾವಣೆ ನಡೆಸಲಾಯಿತು. ಮೇ 23ರಂದು ಫಲಿತಾಂಶ ಹೊರ ಬರಲಿದೆ.
ಮಿಕ್ಕಂತೆ ಆಂಧ್ರಪ್ರದೇಶದ 25 ಲೋಕಸಭಾ ಕ್ಷೇತ್ರಗಳ ಸಮೀಕ್ಷೆಯಂತೆ, ಬಿಜೆಪಿ ಸಖ್ಯ ಕಳೆದುಕೊಂಡ ಬಳಿಕ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಪಕ್ಷ(ಟಿಡಿಪಿ) ತನ್ನ ಪ್ರಾಬಲ್ಯ ಕಳೆದುಕೊಂಡಿದೆ. ಕಳೆದ ಚುನಾವಣೆಯಲ್ಲಿ ಟಿಡಿಪಿ ಆಂಧ್ರದಲ್ಲಿ 15, ತೆಲಂಗಾಣದಲ್ಲಿ 1 ಸ್ಥಾನ ಗಳಿಸಿತ್ತು. ಈ ಬಾರಿ ಕೇವಲ 6 ಸ್ಥಾನಕ್ಕೆ ಕುಸಿಯಲಿದೆ. ಟಿಡಿಪಿಯ ನಷ್ಟ, ವೈಎಸ್ಸಾರ್ ಕಾಂಗ್ರೆಸ್ಸಿಗೆ ಲಾಭವಾಗಲಿದೆ. ವೈಸ್ಸಾರ್ ಕಾಂಗ್ರೆಸ್ 16 ಸ್ಥಾನ ಗಳಿಸಲಿದೆ(2014ರಲ್ಲಿ 8 ಗಳಿಸಿತ್ತು), ಬಿಜೆಪಿ 2014ರಲ್ಲಿ ಗಳಿಸಿದ್ದ 2 ಸ್ಥಾನವನ್ನು ಈ ಬಾರಿ ಕಳೆದುಕೊಳ್ಳಲಿದೆ.











Click it and Unblock the Notifications