ಗುಜರಾತ್ ಮಾಜಿ ಸಿಎಂ ಮನೆಯಲ್ಲಿ ಕಳ್ಳತನ, ಚೌಕೀದಾರ್ ಮೇಲೆ ಅನುಮಾನ!
ಗಾಂಧಿನಗರ, ಮಾರ್ಚ್ 18: ಗುಜರಾತ್ನ ಮಾಜಿ ಮುಖ್ಯಮಂತ್ರಿ ಶಂಕರ್ ಸಿಂಗ್ ವಘೇಲಾ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಚೌಕೀದಾರನ ಮೇಲೆ ಅನುಮಾನ ವ್ಯಕ್ತಪಡಿಸಲಾಗಿದೆ.
ಚೌಕೀದಾರ ಎಂದ ಕೂಡಲೇ ಮೋದಿ ಮೇಲೆ ಅನುಮಾನ ಪಡಲಾಗುತ್ತಿದೆ ಎಂದುಕೊಳ್ಳುವಂತಿಲ್ಲ, ಶಂಕರ್ ಸಿಂಗ್ ವಘೇಲಾ ಅವರ ಮನೆ ಕಾವಲು ಕಾಯುತ್ತಿದ್ದ ವ್ಯಕ್ತಿಯೇ ಕಳ್ಳತನ ಮಾಡಿದ್ದಾನೆ ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಎನ್ಸಿಪಿಯ ಮುಖಂಡ ಸಹ ಆಗಿರುವ ಶಂಕರ್ ಸಿಂಗ್ ವಘೇಲಾ ಅವರು ಮೋದಿ ಅವರ ಗುರುಗಳು ಎಂದು ಸಹ ಕರೆಯಲಾಗುತ್ತದೆ. ಅವರ ಮನೆಯಲ್ಲಿ ಕಳ್ಳತನ ಆಗಿದ್ದು, ಹಣ, ಆಭರಣ ಕಾಣೆ ಆಗಿದೆ. ವಘೇಲಾ ಅವರು ತಮ್ಮ ಮನೆ ಕಾವಲಿಗಿದ್ದ ವ್ಯಕ್ತಿಯ ಮೇಲೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ವಘೇಲಾ ಅವರ ಮನೆಯಲ್ಲಿದ್ದ ಎರಡು ಲಕ್ಷ ಹಣ, ಮೂರು ಲಕ್ಷ ಮೌಲ್ಯದ ಆಭರಣ ಕಾಣೆಯಾಗಿದೆ ಎಂದು ವಘೇಲಾ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿದ್ದಾರೆ. ಮನೆಯ ಕಾವಲು ಕಾಯುತ್ತಿದ್ದ ಬಸುದೇವ ನೇಪಾಳಿ ಅಲಿಯಾಸ್ ಶಂಭು ಗೂರ್ಖಾ ಹಾಗೂ ಅವನ ಪತ್ನಿ ಶಾರದಾ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.