ಡಿ.15ರಂದು ಗುಜರಾತ್ಗೆ ಪ್ರಧಾನಿ; ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ
ಗುಜರಾತ್, ಡಿಸೆಂಬರ್ 14: ಪ್ರಧಾನಿ ನರೇಂದ್ರ ಮೋದಿ ಡಿ.15ರಂದು ಕಚ್ ನ ಧೋರ್ಡೊಗೆ ಭೇಟಿ ನೀಡಲಿದ್ದು, ರಾಜ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಉಪ್ಪುನೀರು ಶುದ್ಧೀಕರಣ ಘಟಕ, ನವೀಕರಿಸಬಹುದಾದ ಇಂಧನ ಉದ್ಯಾನ, ಸಂಪೂರ್ಣ ಸ್ವಯಂಚಾಲಿತ ಹಾಲು ಸಂಸ್ಕರಣೆ ಮತ್ತು ಪ್ಯಾಕಿಂಗ್ ಘಟಕವನ್ನು ಈ ಯೋಜನೆಗಳು ಒಳಗೊಂಡಿವೆ.
ನೂತನ ಸಂಸತ್ ಭವನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿ
ರಾಜ್ಯ ಸರ್ಕಾರವು ಸಮುದ್ರದ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸುವ ಸಲುವಾಗಿ ಕಚ್ ನ ಮಾಂಡ್ವಿಯಲ್ಲಿ ಉಪ್ಪು ನೀರು ಶುದ್ಧೀಕರಣ ಘಟಕವನ್ನು ಆರಂಭಿಸುವ ಮಹತ್ವದ ಹೆಜ್ಜೆ ಇಡುತ್ತಿದೆ. 10 ಕೋಟಿ ಲೀಟರ್ ಸಾಮರ್ಥ್ಯ (100 ಎಂಎಲ್ ಡಿ) ಹೊಂದಿರುವ ಉಪ್ಪು ನೀರು ಶುದ್ಧೀಕರಣ ಘಟಕವು ನರ್ಮದಾ ಗ್ರಿಡ್, ಸೌನಿ ನೆಟ್ ವರ್ಕ್ ಮತ್ತು ಸಂಸ್ಕರಿಸಿದ ತ್ಯಾಜ್ಯ ನೀರಿನ ಮೂಲಸೌಕರ್ಯಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸಲಿದೆ. ಇದು ದೇಶದಲ್ಲೇ ಸುಸ್ಥಿರ ಜಲಮೂಲವಾಗುವ ಪ್ರಮುಖ ಮೈಲುಗಲ್ಲು ಎನ್ನಲಾಗಿದೆ. ಮುಂದ್ರಾ, ಲಖಪತ್, ಅಬ್ದಾಸಾ ಮತ್ತು ನಖತ್ರಾನಾ ತಾಲೂಕು ಪ್ರದೇಶಗಳ ಸುಮಾರು 8 ಲಕ್ಷ ಜನರು ಈ ಸ್ಥಾವರದಿಂದ ಪ್ರಯೋಜನ ಪಡೆಯಲಿರುವುದಾಗಿ ತಿಳಿದುಬಂದಿದೆ.
ಈ ಯೋಜನೆಯಿಂದ ಭಾಚೌ, ರಾಪರ್ ಮತ್ತು ಗಾಂಧಿಧಾಮ ಮೇಲ್ದಂಡೆ ಜಿಲ್ಲೆಗಳಿಗೂ ಹೆಚ್ಚುವರಿ ನೀರಿನ ಹಂಚಿಕೆಯಾಗಲಿದೆ. ಇನ್ನು ವಿಘಕೋಟ್ ಗ್ರಾಮದ ಬಳಿ ನಿರ್ಮಿಸಲಾಗುತ್ತಿರುವ ಇಂಧನ ಉದ್ಯಾನ ದೇಶದ ಅತಿ ದೊಡ್ಡ ನವೀಕರಿಸಬಹುದಾದ ಇಂಧನ ಉತ್ಪಾದನಾ ಪಾರ್ಕ್ ಆಗಲಿದೆ. ಇದು 30 ಗಿಗಾ ವ್ಯಾಟ್ ನವೀಕರಿಸಬಹುದಾದ ಇಂಧನವನ್ನು ಉತ್ಪಾದಿಸಲಿರುವುದಾಗಿ ತಿಳಿದುಬಂದಿದೆ. 72,600 ಹೆಕ್ಟೇರ್ ಪ್ರದೇಶದಲ್ಲಿರುವ ಈ ಉದ್ಯಾನವು ಪವನ ಮತ್ತು ಸೌರವಿದ್ಯುತ್ ಸಂಗ್ರಹಣೆಗೆ ಪ್ರತ್ಯೇಕ ಹೈಬ್ರೀಡ್ ಪಾರ್ಕ್ ಝೋನ್ ಕೂಡ ಇರಲಿದೆ.
ಕಚ್ ನ ಸರ್ಹಾದ್ ಡೈರಿ ಅಂಜರ್ ನಲ್ಲಿ ಸಂಪೂರ್ಣ ಸ್ವಯಂಚಾಲಿತ ಹಾಲು ಸಂಸ್ಕರಣೆ ಮತ್ತು ಪ್ಯಾಕಿಂಗ್ ಘಟಕಕ್ಕೂ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸ್ಥಾವರಕ್ಕೆ 121 ಕೋಟಿ ರೂ. ವೆಚ್ಚವಾಗಲಿದ್ದು, ದಿನಕ್ಕೆ 2 ಲಕ್ಷ ಲೀಟರ್ ಹಾಲು ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿರಲಿದೆ.
ಕಾರ್ಯಕ್ರಮದಲ್ಲಿ ಗುಜರಾತ್ ಮುಖ್ಯಮಂತ್ರಿ ಉಪಸ್ಥಿತರಿರಲಿದ್ದು, ನಂತರ ಪ್ರಧಾನಮಂತ್ರಿ ವೈಟ್ ರಾನ್ ಗೆ ಭೇಟಿ ನೀಡಿ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲಿದ್ದಾರೆ.