ಬೆಂಗಳೂರು ಸುತ್ತಮುತ್ತ 8 ನಗರಗಳ ಅಭಿವೃದ್ಧಿ

ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಅವರು, ನಗರೀಕರಣ ಮತ್ತು ಕೈಗಾರಿಕೀಕರಣದಿಂದಾಗಿ ರಾಜಧಾನಿ ಬೆಂಗಳೂರಿನ ಮೇಲೆ ಒತ್ತಡ ಹೆಚ್ಚಾಗಿದೆ. ನಗರದ ಸುತ್ತಮುತ್ತಲ ಪ್ರದೇಶ ಅಭಿವೃದ್ಧಿ ಮಾಡಿ ನಗರದ ಒತ್ತಡ ಕಡಿಮೆ ಮಾಡಲಾಗುವುದು ಎಂದರು.
ಅಂದಾಜು 2,100 ಕೋಟಿ ರೂ. ವೆಚ್ಚದಲ್ಲಿ ಮೊದಲು ಹಂತದಲ್ಲಿ ಬೆಂಗಳೂರು ಸುತ್ತಮುತ್ತಲಿನ 8,005 ಚ.ಕಿ.ಮೀ ಪ್ರದೇಶಗಳಲ್ಲಿ ನಗರ ಕ್ಲಸ್ಟರ್ ಯೋಜನೆ ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ನೆಲಮಂಗಲ, ಮಾಗಡಿ, ಆನೇಕಲ್, ಬಿಡದಿ, ದಾಬಸ್ ಪೇಟೆ, ಹಾರೋಹಳ್ಳಿ, ದೇವನಹಳ್ಳಿ ಮತ್ತು ಹೊಸಕೋಟೆಗಳನ್ನು ನಗರ ಕ್ಲಸ್ಟರ್ ಗಳಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಹಣಕಾಸು ನಿಗಮ ಯೋಜನೆ ಅನುಷ್ಠಾನದ ನೋಡಲ್ ಏಜೆನ್ಸಿಯಾಗಿ ಕೆಲಸ ಮಾಡಲಿದೆ. ಇದಕ್ಕಾಗಿ ಏಪ್ಯನ್ ಅಭಿವೃದ್ಧಿ ಬ್ಯಾಂಕಿನಿಂದ 1,400 ಕೋಟಿ ರೂ. ಸಾಲ ಪಡೆಯಲಾಗುವುದು ಎಂದರು.
ಬಿಜೆಪಿ-ಜೆಡಿಎಸ್ ಸರ್ಕಾರ 2006ರಲ್ಲಿ 5 ಕ್ಲಸ್ಟರ್ ಗಳನ್ನು ಅಭಿವೃದ್ದಿ ಪಡಿಸಲು ಯೋಜನೆ ರೂಪಿಸಿತ್ತು. ಸದ್ಯ ಕಾಂಗ್ರೆಸ್ ಸರ್ಕಾರ 8 ಕ್ಲಸ್ಟರ್ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಿದೆ ಎಂದು ತಿಳಿಸಿದರು.
6 ತಿಂಗಳಲ್ಲಿ ಉಪ ನಗರ ರೈಲು : ಮುಂದಿನ 6 ತಿಂಗಳ ಅವಧಿಯಲ್ಲಿ ಬೆಂಗಳೂರು ಸುತ್ತಮುತ್ತಲಿನ ನಗರಗಳಿಗೆ ಉಪ ನಗರ ರೈಲು ಸೇವೆ ಒದಗಿಸಲಾಗುವುದು ಎಂದು ಸಚಿವರು ಹೇಳಿದರು. ಈ ಯೋಜನೆಗಾಗಿ 8,759 ಕೋಟಿ ರೂ. ಅನುದಾನದ ಅಗತ್ಯವಿದೆ ಎಂದರು.
ಮೊದಲ ಹಂತದಲ್ಲಿ ಬೆಂಗಳೂರು ನಗರ-ನಾಯಂಡನಹಳ್ಳಿ-ಜ್ಞಾನಭಾರತಿ-ಕೆಂಗೇರಿ-ಬಿಡದಿ-ರಾಮನಗರ, ಬೆಂಗಳೂರು ನಗರ-ಕಟ್ಮೋನೆಂಟ್, ಬೆಂಗಳೂರು ಪಶ್ಚಿಮ-ಕೆ.ಆರ್.ಪುರಂ-ವೈಟ್ ಫೀಲ್ಡ್-ದೇವನಗೊಂತಿ-ಮಾಲೂರು ನಡುವೆ ರೈಲು ಸಂಚಾರ ಪ್ರಾರಂಭಿಸಲಾಗುವುದು ಎಂದು ಸಚಿವರು ಹೇಳಿದರು.












Click it and Unblock the Notifications