900 ಟನ್ ಕಾಳುಮೆಣಸು ಬೆಂಕಿ ಹಾಕ್ತಾರಂತೆ!

ಕೇರಳದ ಕಾಳುಮೆಣಸು ಮಾರುವ ದಲ್ಲಾಳಿಗಳು ಮಾಡಿರುವ ಎಡವಟ್ಟಿನಿಂದಾಗಿ 38 ಕೋಟಿ ರೂ.ಮೌಲ್ಯದ ಸುಮಾರು 850 ಟನ್ ಕಾಳುಮೆಣಸನ್ನು ಸುಡುವಂತೆ, ಕೇರಳ ಆಹಾರ ಸುರಕ್ಷೆ ಇಲಾಖೆ ಅಧಿಕಾರಿಗಳು ಆದೇಶ ನೀಡಿದ್ದಾರೆ.
ರಫ್ತು ಉದ್ದೇಶಕ್ಕೆಂದು ಸಂಗ್ರಹಿಸಲಾಗಿದ್ದ ಕಾಳುಮೆಣಸು ಹಾಳಾಗಬಾರದು ಎಂದು ದಲ್ಲಾಳಿಗಳು, ಅವುಗಳಿಗೆ ಡೀಸೆಲ್ ಬೆರೆಸಿಟ್ಟ ವಿಷಯ ಬೆಳಕಿಗೆ ಬಂದಿದ್ದರಿಂದ 850 ಟನ್ ಕಾಳು ಮೆಣಸನ್ನು ಸುಟ್ಟುಹಾಕುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಡೀಸೆಲ್ ಮಿಶ್ರಣ ಏಕೆ : ಕಾಳುಮೆಣಸು ದೀರ್ಘ ಕಾಲ ಬಾಳಿಕೆ ಬರುವ ಸಾಂಬಾರ ಪದಾರ್ಥ. ಆದರೆ,ಗೋದಾಮುಗಳಲ್ಲಿ ದಾಸ್ತಾನು ಇಟ್ಟರೆ ತೇವಾಂಶದಿಂದಾಗಿ ಬೂಸ್ಟು ಹಿಡಿಯುತ್ತದೆ. ಬೂಸ್ಟ್ ಬಂದರೆ ಅವುಗಳನ್ನು ಪುನಃ ಒಣಗಿಸಿಸಬೇಕಾಗುತ್ತದೆ.
ಇದನ್ನು ತಪ್ಪಿಸಲು ದಲ್ಲಾಳಿಗಳು ಕಾಳುಮೆಣಸಿಗೆ ಡೀಸೆಲ್, ಕಲ್ಲೆಣ್ಣೆ ಮುಂತಾದ ತೈಲ ಬೆರೆಸುತ್ತಾರೆ. ಡೀಸೆಲ್, ಫ್ಯಾರಾಫಿನ್ ಆಯಿಲ್ ಮತ್ತಿತರ ಎಣ್ಣೆಗಳನ್ನು ಸುಟ್ಟು ಬೆರೆಸಿದರೆ ಕಾಳುಮೆಣಸಿಗೆ ಗಾಢ ಕಪ್ಪು ಬಣ್ಣ ಬರುತ್ತದೆ ಮಾತ್ರವಲ್ಲ ದೀರ್ಘಕಾಲ ದಾಸ್ತಾನು ಇಟ್ಟರೂ ಬೂಸ್ಟು ಹಿಡಿಯುವುದಿಲ್ಲ.
ದಲ್ಲಾಳಿಗಳು ಹೀಗೆ ಡೀಸೆಲ್ ಬೆರೆಸಿದ ಕಾಳುಮೆಣಸನ್ನು ವಿದೇಶದಗಳಿಗೆ ರಫ್ತು ಮಾಡಿದ್ದಾರೆ. ವಿದೇಶಕ್ಕೆ ರಫ್ತಾದ ಕಾಳು ಮೆಣಸು ಕಲಬೆರಕೆಯಾಗಿದೆ ಎಂಬ ದೂರಿನೊಂದಿಗೆ ವಾಪಸ್ ಬಂದಿತ್ತು. ಅಧಿಕಾರಿಗಳು ಪರಿಶೀಲನೆ ನಡೆಸಿದಾಗ, ಕಲಬೆರಕೆ ಆಗಿರುವುದು ಪತ್ತೆಯಾಗಿದೆ.
ಭಾರತೀಯ ಸಾಂಬಾರ ಮಂಡಳಿಯ ನಿರ್ದೇಶನದಂತೆ, ಕೇರಳ ಆಹಾರ ಸುರಕ್ಷಾ ಅಧಿಕಾರಿಗಳು ಗೋದಾಮುಗಳಿಗೆ ಭೇಟಿ ನೀಡಿದಾಗ ಕಲಬೆರಕೆ ಆಗುತ್ತಿರುವುದು ಪತ್ತೆಯಾಗಿದೆ. ಆದ್ದರಿಂದ ಕಲಬೆರಕೆ ಆದ ಕಾಳುಮೆಣಸನ್ನು ಸುಟ್ಟು ಹಾಕುವಂತೆ ಆದೇಶ ನೀಡಲಾಗಿದೆ.
ಕ್ಯಾನ್ಸರ್ ಸಾಧ್ಯತೆ : ಡೀಸೆಲ್ ಕಲಬೆರಕೆ ಆದ ಕಾಳು ಮೆಣಸು ಸೇವಿಸಿದರೆ, ಜನರಿಗೆ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳು ಬರುವ ಸಾಧ್ಯತೆ ಇದೆ. ಆದ್ದರಿಂದ ಅವುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡದೆ, ಸುಟ್ಟು ಹಾಕಲಾಗುತ್ತಿದೆ.
ವಿದೇಶದಿಂದ ಬಂದ 850 ಟನ್ ಕಾಳುಮೆಣಸು ಮತ್ತು ಕಲಬೆರಕೆ ಆಗುವಾಗ ಕೇರಳದ 600 ಗೋದಾಮುಗಳಿಂದ ವಶಪಡಿಸಿಕೊಂಡ ಮೆಣಸು ಸೇರಿದಂತೆ ಒಟ್ಟು 900 ಟನ್ ಕಾಳುಮೆಣಸು ನಾಶ ಮಾಡಲು ಆದೇಶ ನೀಡಲಾಗಿದೆ.












Click it and Unblock the Notifications