ಕರ್ನಾಟಕದ ಅನ್ನಭಾಗ್ಯ ಅಕ್ಕಿ ತಮಿಳುನಾಡಿಗೆ?

ಶನಿವಾರ ರಾತ್ರಿ ಈರೋಡಿಗೆ ಬಂದ ಚೆನ್ನೈ- ಮಂಗಳೂರು ಎಕ್ಸ್ಪ್ರೆಸ್ ಮತ್ತು ಮೈಸೂರು - ಮೈಲಾದುತುರೈ ಎಕ್ಸ್ಪ್ರೆಸ್ ರೈಲಿನ ಬೋಗಿಗಳಲ್ಲಿ 600 ಕ್ವಿಂಟಾಲ್ ಅಕ್ಕಿ ಪತ್ತೆಯಾಗಿದೆ. ಅಕ್ಕಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದರು, ಯಾರನ್ನು ಬಂಧಿಸಿಲ್ಲ.
ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯಡಿ ವಿತರಣೆಯಾದ ಅಕ್ಕಿ ಕಾಳಸಂತೆ ಮೂಲಕ ರಾಜ್ಯಕ್ಕೆ ಬಂದಿರಬಹುದು ಎಂದು ಈರೋಡಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅಕ್ಕಿ ಯಾರಿಗೆ ಸೇರಿದ್ದು ಎಂದು ತಿಳಿದು ಬಂದರೆ, ಹೆಚ್ಚಿನ ಮಾಹಿತಿ ತಿಳಿದು ಬರಲಿದೆ.
ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಪ್ರತಿವರ್ಷ ಕಾವೇರಿ ನೀರು ಹಂಚಿಕೆಗಾಗಿ ಬಡಿದಾಡಿಕೊಂಡರೂ, ಉಭಯ ರಾಜ್ಯಗಳ ಜನತೆಯ ಪರಸ್ಪರ ಸ್ನೇಹಿತರು ಎಂಬುದು ಹಲವಾರು ಬಾರಿ ಸಾಬೀತಾಗಿದೆ.
ತಮಿಳುನಾಡು ವಿಧಾನಸಭಾ ಚುನಾವಣೆ ವೇಳೆ ರಾಜಕೀಯ ಪಕ್ಷಗಳು ಮತದಾರರಿಗೆ ಹಂಚಿದ್ದ ಟೀವಿ, ಮಿಕ್ಸಿ ಸೇರಿದಂತೆ ಹಲವು ಮಾದರಿಯ ಎಲೆಕ್ಟ್ರಾನಿಕ್ ವಸ್ತುಗಳು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ದೊರಕಿದ್ದವು. ಈಗ ಕರ್ನಾಟಕದ ಅಕ್ಕಿಯು ತಮಿಳುನಾಡಿನತ್ತ ಹೋಗುತ್ತಿದೆ.
150 ಚೀಲ ಅಕ್ಕಿ ವಶ : ಕರ್ನಾಟಕದಿಂದ ಆಂಧ್ರಪ್ರದೇಶಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 150 ಚೀಲ ಅಕ್ಕಿಯನ್ನು ಸಿರಗುಪ್ಪ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಕ್ಕಿಯ ಸಾಗಣೆಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳು ಇರಲಿಲ್ಲ. ಅಕ್ಕಿಯನ್ನು ಎಲ್ಲಿಂದ ತರಲಾಗುತ್ತಿತ್ತು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಎರಡು ದಿನಗಳ ಹಿಂದೆ ಅನ್ನಭಾಗ್ಯ ಯೋಜನೆಯಡಿ ಹಂಚಿಕೆ ಮಾಡಲು ಇಟ್ಟಿದ್ದ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಪ್ರಕರಣ ಹಾಸನ ಜಿಲ್ಲೆಯಲ್ಲಿಯೂ ಬೆಳಕಿಗೆ ಬಂದಿತ್ತು. ಸರ್ಕಾರ ಅಕ್ಕಿ ಕಾಳಸಂತೆಗೆ ಮಾರಾಟವಾಗುವುದನ್ನು ತಡೆಯದಿದ್ದರೆ ಅನ್ನಭಾಗ್ಯ ನುಂಗಣ್ಣರಿಗೆ ಮಾತ್ರ ವರದಾನವಾಗಲಿದೆ.












Click it and Unblock the Notifications