ಹುಬ್ಬಳ್ಳಿ : ಮದುವೆ ತಪ್ಪಿಸಲು ಆಸಿಡ್ ಹಾಕಿದ ಭಗ್ನ ಪ್ರೇಮಿ

ಹುಬ್ಬಳ್ಳಿಯ ಶರೀಫ್ (26) ಎಂಬುವವರು ಆಸಿಡ್ ದಾಳಿಗೆ ಸಿಲುಕಿ ಕಣ್ಣು ಕಳೆದುಕೊಂಡವರು. ಇವರ ಮೇಲೆ ಆಸಿಡ್ ಹಾಕಿದ ಅಬ್ದುಲ್ ಘನಿ, ಗಡುಸಾಬ್ ಎಂಬ ಆರೋಪಿಗಳನ್ನು ಹುಬ್ಬಳ್ಳಿ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಅಬ್ದುಲ್ ಯುವತಿಯನ್ನು ಪ್ರೀತಿಸುತ್ತಿದ್ದ. ಆ ಯುವತಿಯೊಂದಿಗೆ ಶರೀಫ್ ನಿಶ್ಚಿತಾರ್ಥ ನೆರೆವೇರಿತ್ತು. ಪ್ರಿಯತಮೆ ಕೈ ತಪ್ಪುವ ಭೀತಿಯಿಂದ ಶರೀಫ್ ಮೇಲೆ ಆಸಿಡ್ ಹಾಕಿ, ವಿವಾಹ ತಪ್ಪಿಸಲು ಯತ್ನಿಸಿದ್ದಾಗಿ, ಅಬ್ದುಲ್ ಘನಿ ತಪ್ಪೊಪ್ಪಿಕೊಂಡಿದ್ದಾನೆ.
ಶರೀಫ್ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಆತನ ಮುಖದ ಒಂದು ಭಾಗ ಸುಟ್ಟು ಹೋಗಿದ್ದು, ಒಂದು ಕಣ್ಣು ಸಹ ಸಂಪೂರ್ಣವಾಗಿ ಸುಟ್ಟು ಹೋಗಿದೆ ಎಂದು ಶರೀಫ್ ಸಹೋದರ ಹೇಳಿಕೆ ನೀಡಿದ್ದಾರೆ.
ಪರಸ್ಪರ ಪ್ರೀತಿಸುತ್ತಿದ್ದರು : ಅಬ್ದುಲ್ ಘನಿ ಮತ್ತು ಯುವತಿ ಪರಸ್ಪರ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಯುವತಿಗೆ 6 ತಿಂಗಳ ಹಿಂದೆ ಶರೀಫ್ ಅವರೊಂದಿಗೆ ನಿಶ್ಚಿತಾರ್ಥವಾಗಿತ್ತು. ಡಿಸೆಂಬರ್ ನಲ್ಲಿ ವಿವಾಹ ನಡೆಯಬೇಕಾಗಿತ್ತು.
ಆದರೆ, ಪ್ರೀತಿಯ ವಿಷಯವನ್ನು ಯುವತಿ ಮನೆಯವರ ಬಳಿ ಹೇಳಿರಲಿಲ್ಲ. ಪ್ರೀತಿಸಿದ ಯುವತಿ ವಿವಾಹವಾಗುತ್ತಾಳೆ ಎಂದು ತಿಳಿದ ಅಬ್ದುಲ್ ಘನಿ, ಗಡಾಸಾಬ್ ಜೊತೆ ಸೇರಿ ಆಕೆಯ ಭಾವಿ ಪತಿ ಮೇಲೆ ಮೇಲೆ ಆಸಿಡ್ ಹಾಕುವ ಯೋಜನೆ ರೂಪಿಸಿದ್ದಾರೆ.
ಸೋಮವಾರ ಶರೀಫ್ ಹುಬ್ಬಳ್ಳಿಯಲ್ಲಿ ನಡೆದು ಹೋಗುತ್ತಿದ್ದಾಗ, ಬೈಕ್ ನಲ್ಲಿ ಬಂದ ಅಬ್ದುಲ್ ಘನಿ ಅವರ ಮೇಳೆ ಆಸಿಡ್ ಹಾಕಿದ್ದಾರೆ. ಇದರಿಂದ ಶರೀಫ್ ಮುಖ ಮತ್ತು ಬಲಗೈಗೆ ಸುಟ್ಟು ಹೋಗಿದೆ. ಶರೀಫ್ ನೀಡಿದ ದೂರಿನ ಅನ್ವಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. (ಆಸಿಡ್ ದಾಳಿ ಜಾಮೀನು ರಹಿತ ಅಪರಾಧ : ಸುಪ್ರೀಂ)
ಮುರಿದು ಬಿದ್ದ ಮದುವೆ : ಯುವತಿ ಪ್ರಿಯಕರನಿಂದ ಆಸಿಡ್ ದಾಳಿ ನಡೆದ ಹಿನ್ನಲೆಯಲ್ಲಿ ಶರೀಫ್ ಜೊತೆಗಿನ ವಿವಾಹದ ಪ್ರಸ್ತಾಪವನ್ನು ಕೈ ಬಿಟ್ಟಿದ್ದೇವೆ ಎಂದು ಶರೀಫ್ ಸಹೋದರ ತಿಳಿಸಿದ್ದಾರೆ. ಮುಕ್ತ ಮಾರುಕಟ್ಟೆಯಲ್ಲಿ ಆಸಿಡ್ ದೊರೆಯದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.












Click it and Unblock the Notifications