ಮಂಡ್ಯ : ನಾಮಪತ್ರ ಸಲ್ಲಿಸಿದ ನಟಿ ರಮ್ಯಾ

ಶನಿವಾರ ಮಧ್ಯಾಹ್ನ 1 ಗಂಟೆ ವೇಳೆಗೆ ನಟಿ ರಮ್ಯಾ ಮಂಡ್ಯಕ್ಕೆ ಆಗಮಿಸಿದರು. ವಸತಿ ಸಚಿವ ಅಂಬರೀಶ್, ಶಾಸಕ ನರೇಂದ್ರ ಸ್ವಾಮಿ ಹಾಗೂ ಮಾಜಿ ಶಾಸಕ ಸುರೇಶ್ ಗೌಡ ಅವರ ಜೊತೆ ತೆರಳಿ ವಿಶ್ವೇಶ್ವರಯ್ಯ ಪ್ರತಿಮೆಗೆ ಮಾಲಾಪರ್ಣೆ ಮಾಡಿದ ರಮ್ಯಾ, ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಮೂಲಕ ರಮ್ಯಾ ಸಕ್ರಿಯ ರಾಜಕಾರಣಕ್ಕೆ ಧುಮುಕಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪ್ರರವಾಗಿ ಪ್ರಚಾರ ನಡೆಸಿದ್ದ ರಮ್ಯಾ, ಸದ್ಯ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು. ಆದರೆ, ಪಕ್ಷದ ನಾಯಕರ ಒತ್ತಡಕ್ಕೆ ಮಣಿದಿರುವ ರಮ್ಯಾ ಲೋಕಸಭೆ ಉಪ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಮಂಡ್ಯದಲ್ಲಿ ರಮ್ಯಾ ಜೆಡಿಎಸ್ ನ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಮತ್ತು ಬಿಜೆಪಿಯ ಯಶಸ್ವಿನಿ ಸೋಮಶೇಖರ್ ಅವರಿಗೆ ಸ್ಪರ್ಧೆ ನೀಡುತ್ತಿದ್ದಾರೆ. ಮಂಡ್ಯ ಕ್ಷೇತ್ರದ ಶಾಸಕ ಮತ್ತು ವಸತಿ ಸಚಿವ ಅಂಬರೀಶ್ ರಮ್ಯಾ ಅವರನ್ನು ಕಣಕ್ಕೆ ಇಳಿಸಿದ್ದಾರೆ. ಸಿನಿಮಾದಲ್ಲಿ ಯಶಸ್ಸು ಕಂಡಿರುವ ರಮ್ಯಾ ಚುನಾವಣೆಯಲ್ಲಿ ಜಯಗಳಿಸತ್ತಾರಾ ಕಾದು ನೋಡಬೇಕು.
ರಮ್ಯಾ ಪ್ರತಿಕ್ರಿಯೆ : ನಾನು ಮಂಡ್ಯ ಜಿಲ್ಲೆಯವಳು ನನ್ನನ್ನು ಗೆಲ್ಲಿಸಿ ಎಂದು ನಟಿ ರಮ್ಯಾ ಜನರಿಗೆ ಮನವಿ ಮಾಡಿದ್ದಾರೆ. ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಮ್ಯಾ, ನನ್ನ ತಾತ ಮಂಡ್ಯ ಜಿಲ್ಲೆಯವರು ಆದ್ದರಿಂದ ನಾನು ಈ ಜಿಲ್ಲೆಯವಳು ನನಗೆ ಬೆಂಬಲ ನೀಡಿ ಎಂದು ಮನವಿ ಮಾಡಿದರು.
ಚುನಾವಣೆ ಎದುರಿಸಲು ನಾನು ಸಿದ್ಧವಾಗಿದ್ದೇನೆ. ಚುನಾವಣೆಗೆ ಸ್ಪರ್ಧಿಸಬೇಕು ಎಂದು ಮೊದಲಿನಿಂದಲೂ ಆಸೆ ಇತ್ತು. ಆದರೆ, ಪಕ್ಷ ಇಷ್ಟು ಬೇಗ ಅವಕಾಶ ನೀಡುತ್ತದೆ ಎಂದು ತಿಳಿದಿರಲಿಲ್ಲ. ಪಕ್ಷದ ಹಿರಿಯ ನಾಯಕರ ನೇತೃತ್ವದಲ್ಲಿ ಚುನಾವಣೆ ಎದುರಿಸಿ ಗೆಲ್ಲುತ್ತೇನೆ ಎಂಬ ಭರವಸೆಯನ್ನು ರಮ್ಯಾ ವ್ಯಕ್ತಪಡಿಸಿದರು.
ಹಿಂದಿನ ಸುದ್ದಿ : ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಪ್ರತಿಷ್ಠೆಯ ಕಣವಾಗಿ ಬದಲಾಗಿರುವ ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭೆ ಉಪ ಚುನಾವಣೆ ಕಣ ರಂಗೇರಿದೆ. ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಚಿತ್ರನಟಿ ರಮ್ಯಾ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.
ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಹಿರಿಯ ನಾಯಕ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ನಡುವಿನ ಪ್ರತಿಷ್ಠೆ ಉಪ ಚುನಾವಣೆಯಲ್ಲಿ ಅಡಗಿದೆ. ಚುನಾಯಿತ ಪ್ರತಿನಿಧಿಗಳ ಅವಧಿ ಎಂಟು ತಿಂಗಳು ಇದ್ದರೂ ಚುನಾವಣಾ ಕಣ ಮಾತ್ರ ಕುತೂಹಲ ಕೆರಳಿಸಿದೆ.
ಉಪ ಚುನಾವಣೆಗೆ ನಾಮತ್ರಸಲ್ಲಿಸಲು ಶನಿವಾರ ಕೊನೆಯ ದಿನವಾಗಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದೆ. ಬಿಜೆಪಿ ಉಪ ಚುನಾವಣೆ ಬಗ್ಗೆ ಅಷ್ಟು ಆಸಕ್ತಿ ಹೊಂದಿಲ್ಲ ಎಂಬುದು ಬಹಿರಂಗವಾಗಿದೆ.
ಮಂಡ್ಯ : ಮಂಡ್ಯದಿಂದ ಮಾಜಿ ಸಂಸದ ಜಿ.ಮಾದೇಗೌಡ ಅವರನ್ನು ಕಣಕ್ಕೆ ಇಳಿಸುವ ವಸತಿ ಸಚಿವ ಅಂಬರೀಶ್ ಅವರ ಪ್ರಯತ್ನ ಫಲ ನೀಡಿಲ್ಲ. ಆದ್ದರಿಂದ ನಟಿ ರಮ್ಯಾ ಅವರನ್ನು ಅಖಾಡಕ್ಕೆ ಇಳಿಸಲು ನಿರ್ಧರಿಸಿ, ಅವರನ್ನು ಒಪ್ಪಿಸುವ ಜವಾಬ್ದಾರಿಯನ್ನು ಅಂಬರೀಶ್ ಅವರ ಹೆಗಲಿಗೆ ವಹಿಸಲಾಗಿದೆ. ನಾಮಪತ್ರ ಸಲ್ಲಿಸಲು ಶಮಿವಾರ ಕೊನೆಯ ದಿನವಾಗಿದೆ.
ಎಲ್.ಆರ್.ಶಿವರಾಮೇಗೌಡ ಮತ್ತು ರಮ್ಯಾ ಸೇರಿದಂತೆ ಹತ್ತು ಅಭ್ಯರ್ಥಿಗಳು ಮಂಡ್ಯದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಅಂತಿಮವಾಗಿ ರಮ್ಯಾ ಅವರು ಸ್ಪರ್ಧಿಸುತ್ತಾರೆ ಎಂಬುದು ಖಚಿತವಾಗಿದೆ. ರಮ್ಯಾಗೆ ಎದುರಾಳಿಯಾಗಿ, ಜೆಡಿಎಸ್ ನ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಯಶಸ್ವಿನಿ ಸೋಮಶೇಖರ್ ಸ್ಪರ್ಧಿಸಲಿದ್ದಾರೆ.
ಬೆಂಗಳೂರು ಗ್ರಾಮಾಂತರ : ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ನಡುವಿನ ನೇರ ಸ್ಪರ್ಧೆಯ ಕಣವಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಪರಿವರ್ತನೆಯಾಗಿದೆ. ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರೆ, ಜೆಡಿಎಸ್ ನಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ನಾಗರಾಜು ನಾಮಪತ್ರ ಸಲ್ಲಿಸಿದ್ದಾರೆ.
ಚುಣಾವಣೆ ಏಕೆ : ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರಾಗಿದ್ದ ಚೆಲುವರಾಯಸ್ವಾಮಿ ಮತ್ತು ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, ಜಯಗಳಿಸಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳ ಅವಧಿ ಎಂಟರಿಂದ ಒಂಭತ್ತು ತಿಂಗಳು ಮಾತ್ರ. ನಂತರ ಚುಣಾವಣೆ ಎದುರಾಗಲಿದೆ.(ಚುನಾವಣಾ ವೇಳಾಪಟ್ಟಿ)












Click it and Unblock the Notifications