ಲೋಕಸಭೆಗೆ ಸ್ಪರ್ಧಿಸಲು ಯಡಿಯೂರಪ್ಪ ಚಿಂತನೆ
ಬೆಂಗಳೂರು, ಆಗಸ್ಟ್ 1: ಬಿಎಸ್ ಯಡಿಯೂರಪ್ಪ ಅವರು ಬಿಜೆಪಿಗೆ ಮರಳುವ ವಿಚಾರ ಆರಕ್ಕೇರಲಿಲ್ಲ; ಮೂರಕ್ಕಿಳಿಯಲಿಲ್ಲ ಎಂಬಂತಾಗಿದೆ. ಆದರೂ ಯಡಿಯೂರಪ್ಪ ಶಕ್ತಿ ಮೀರಿ ತಮ್ಮ ಪ್ರಯತ್ನ ಜಾರಿಯಲ್ಲಿಟ್ಟಿದ್ದು, ಅದಕ್ಕೆ ಅಡ್ಡಿಪಡಿಸುತ್ತಿರುವ/ ವಿಳಂಬ ಧೋರಣೆ ಅನುಸರಿಸುತ್ತಿರುವ ನಾಯಕರಿಗೆ ಎಲ್ಲಿ ಬಿಸಿ ತಾಕಿಸಬೇಕೋ ಅಲ್ಲಿ ತಾಗಿಸುತ್ತಿದ್ದಾರೆ.
ಈ ಮಧ್ಯೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಶಿವಮೊಗ್ಗ ಕ್ಷೇತ್ರದ ಬಿಜೆಪಿಯ ಹಾಲಿ ಸಂಸದ ಬಿವೈ ರಾಘವೇಂದ್ರ ಮತ್ತೂಮ್ಮೆ ಲೋಕಸಭಾ ಚುನಾವಣೆಗೆ ಅಷ್ಟೇನೂ ಆಸಕ್ತಿ ಹೊಂದಿಲ್ಲ.
ಹಾಗಾಗಿ ಬಿಜೆಪಿಗೆ ವಾಪಸಾಗುವುದೋ ಅಥವಾ ಕೆಜೆಪಿಯಲ್ಲೇ ಮುಂದುವರಿಯುವುದೋ ಅದು ಆಮೇಲಿನ ಮಾತು. ಆದರೆ ತಾವೇ ಏಕೆ ಲೋಕಸಭೆಗೆ ಸ್ಪರ್ಧಿಸಬಾರದು ಎಂಬ ಚಿಂತನೆ ಯಡಿಯೂರಪ್ಪ ಅವರಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಕೆಜೆಪಿಯಿಂದ ಸ್ಪರ್ಧಿಸಿ ಗೆಲ್ಲುವುದು ದುಸ್ತರದ ಮಾತೇ ಸರಿ. ಹೀಗಾಗಿ ಬಿಜೆಪಿಗೆ ವಾಪಸಾಗಿ ಸ್ಪರ್ಧಿಸಿದಲ್ಲಿ ಗೆಲುವು ಸುಲಭವಾಗಲಿದೆ. ಜತೆಗೆ ಕೇಂದ್ರದಲ್ಲಿ ಎನ್ ಡಿಎ ಅಧಿಕಾರದ ಗದ್ದುಗೆ ಏರುವ ಸಾಧ್ಯತೆಯೂ ಇದೆ. ಮುಂದೆ ಕೇಂದ್ರದ ಮಂತ್ರಿಯಾಗುವ ಅವಕಾಶವೂ ಒದಗಿಬರಬಹುದು ಎಂಬ ದಿಕ್ಕಿನಲ್ಲಿ ಲೆಕ್ಕಾಚಾರ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ರಾಜನಾಥ್ ಅವರಿಂದಲೇ ಗಾಳ
ಈ ಮಧ್ಯೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬಿಜೆಪಿಗೆ ವಾಪಸ್ ಕರೆತರುವ ವಿಷಯ ಇದ್ದಲ್ಲೇ ಇದೆ. ಎರಡು ಲೋಕಸಭಾ ಕ್ಷೇತ್ರ ಹಾಗೂ ಮೂರು ವಿಧಾನಪರಿಷತ್ ಕ್ಷೇತ್ರಗಳ ಉಪಚುನಾವಣೆ ಸಮ್ಮುಖದಲ್ಲಿ ಯಡಿಯೂರಪ್ಪ ವಾಪಸಾತಿ ಪ್ರಕ್ರಿಯೆ ಕ್ಷಿಪ್ರವಾಗಿ ನಡೆಯಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಆದರೂ ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರೇ ಯಡಿಯೂರಪ್ಪಗೆ ಗಾಳ ಹಾಕುತ್ತಿದ್ದಾರೆ ಎನ್ನಲಾಗಿದೆ.

ಮೊದಲು ಪಕ್ಷಕ್ಕೆ ಬನ್ನಿ; ಆಮೇಲೆ ಸ್ಥಾನಮಾನ
'ಮೊದಲು ಪಕ್ಷಕ್ಕೆ ಬನ್ನಿ. ಈಗ ಯಾವುದೇ ಸ್ಥಾನಮಾನ ನೀಡುವುದಿಲ್ಲ. ಆದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ನಿರ್ಧಾರಗಳೇ ಅಂತಿಮ. ನೀವು ಹೇಳಿದಂತೆ ಚುನಾವಣೆ ಎದುರಿಸೋಣ. ಲೋಕಸಭಾ ಚುನಾವಣೆ ನಂತರವಷ್ಟೇ ನಿಮಗೆ ಸೂಕ್ತ ಸ್ಥಾನಮಾನ ನೀಡಲಾಗುವುದು' ಎಂಬ ಪ್ರಸ್ತಾವನೆಯನ್ನು ರಾಜನಾಥ್ ಸಿಂಗ್ ಅವರು ಯಡಿಯೂರಪ್ಪ ಮುಂದಿಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.

ರಾಜನಾಥ್ ಪ್ರಸ್ತಾವನೆಗೆ ಓಕೆ ಆದರೆ ಅತ್ಯಾಪ್ತರ ವಿರೋಧ
ಈ ಪ್ರಸ್ತಾವನೆ ಬಗ್ಗೆ ಯಡಿಯೂರಪ್ಪ ಆಸಕ್ತಿ ತೋರಿದಂತಿದೆ. ಏಕೆಂದರೆ ಪ್ರತ್ಯೇಕ ಪಕ್ಷ ಕಟ್ಟಿಕೊಂಡು ಏಗುವುದಕ್ಕಿಂತ ವಾಪಸ್ ಹೋಗುವುದೇ ಲೇಸು ಎಂಬ ಹಂತಕ್ಕೆ ಅವರು ಬಂದು ನಿಂತಿದ್ದಾರೆ. ಆದರೆ, ಅವರೊಂದಿಗೆ ಬಿಜೆಪಿ ತೊರೆದು ಕೆಜೆಪಿ ಸೇರಿರುವ ಅತ್ಯಾಪ್ತರು ಮಾತ್ರ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಯಾವುದೇ ಸ್ಥಾನಮಾನವಿಲ್ಲದೆ ಬಿಜೆಪಿಗೆ ವಾಪಸಾಗುವುದರಲ್ಲಿ ಅರ್ಥವಿಲ್ಲ ಎಂಬ ಕಿವಿಮಾತಿಗೂ ಯಡಿಯೂರಪ್ಪ ತಲೆ ಅಲ್ಲಾಡಿಸುತ್ತಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

ಲೋಕಸಭೆ ಚುನಾವಣೆ ನಂತರ ಯಡಿಯೂರಪ್ಪ ಪ್ರತಿಪಕ್ಷದ ನಾಯಕ
ಹೀಗಾಗಿ ಸದ್ಯಕ್ಕೆ ಯಡಿಯೂರಪ್ಪ ವಾಪಸ್ ಬಂದಾಕ್ಷಣ ವಿಧಾನಸಭೆಯ ಪ್ರಮುಖ ಪ್ರತಿಪಕ್ಷದ ಸ್ಥಾನ ಬಿಜೆಪಿ ಪಾಲಾಗಲಿದೆ. ಲೋಕಸಭಾ ಚುನಾವಣೆ ಮುಗಿಯುವವರೆಗೆ ಈಗ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿರುವ ಜಗದೀಶ್ ಶೆಟ್ಟರ್ ಅವರೇ ಪ್ರತಿಪಕ್ಷದ ನಾಯಕರಾಗಲಿ. ಚುನಾವಣೆ ನಂತರ ಯಡಿಯೂರಪ್ಪ ಅವರಿಗೆ ಪ್ರತಿಪಕ್ಷದ ನಾಯಕ ಸ್ಥಾನ ನೀಡಿದರಾಯಿತು ಎಂಬ ಅಭಿಪ್ರಾಯವೂ ರಾಜನಾಥ್ ಅವರದ್ದಾಗಿದೆ ಎಂದು ತಿಳಿದು ಬಂದಿದೆ.

ಆಷಾಢದ ನಂತರ ಬಿಜೆಪಿಗೆ ವಾಪಸ್
ಯಡಿಯೂರಪ್ಪ ತಮ್ಮ ಆಪ್ತರ ಮಾತನ್ನು ಮೀರಿ ನಿರ್ಧಾರ ಕೈಗೊಂಡಲ್ಲಿ ಆಷಾಢ ಮುಗಿದ ನಂತರ ಬಿಜೆಪಿಗೆ ಅವರನ್ನು ವಾಪಸ್ ಕರೆತರುವ ಪ್ರಯತ್ನಗಳು ನಿರ್ಣಾಯಕ ಹಂತಕ್ಕೆ ತಲುಪುವುದು ನಿಶ್ಚಿತವಾಗಿದೆ.












Click it and Unblock the Notifications