ಕಸದ ಸಮಸ್ಯೆಗೆ ಕಟ್ಟುನಿಟ್ಟಿನ ವಿಧೇಯಕ
ನಗರಾಭಿವೃದ್ದಿ ಸಚಿವರ ಪರವಾಗಿ ಸಹಕಾರ ಸಚಿವ ಎಚ್.ಎಸ್.ಮಹದೇವಪ್ರಸಾದ್ ವಿಧೇಯಕವನ್ನು ಗುರುವಾರ ವಿಧಾನಮಂಡಲ ಅಧಿವೇಶದಲ್ಲಿ ಮಂಡಿಸಿದ್ದಾರೆ. ವಿಧೇಯಕ ಜಾರಿಗೆ ಬಂದರೆ ಬೆಂಗಳೂರು ಸೇರಿದಂತೆ ವಿವಿಧ ಮಹಾನಗರ ಪಾಲಿಕೆಗಳು ಸ್ವಚ್ಚವಾಗಲಿವೆ.
ವಿಧೇಯಕ ಏನು ಹೇಳುತ್ತದೆ : ಮಹಾನಗರ ಪಾಲಿಕೆ ವ್ಯಾಪ್ತಿಗಳಲ್ಲಿ ಅಕ್ರಮವಾಗಿ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸುವುದು ಕಾಯ್ದೆಯ ಜಾರಿಯಿಂದ ನಿಯಂತ್ರಣಗೊಳ್ಳಲಿದೆ. ಒಣ ಮತ್ತು ಹಸಿ ಕಸ ವಿಂಗಡಿಸುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದರೆ ದಂಡ ಕಟ್ಟುವುದು ಕಡ್ಡಾಯವಾಗಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಲ-ಮೂತ್ರ ವಿಸರ್ಜನೆ ನಿಯಂತ್ರಣಕ್ಕೆ ಬರಲಿದೆ.
ತಿದ್ದು ಪಡಿ ಕಾಯ್ದೆಯ ಅನ್ವಯ ಅನಧಿಕೃತವಾಗಿ ಆಳವಡಿಸಿರುವ ಆಪ್ಟಿಕಲ್ ಫೈಬರ್ ಕೇಬಲ್ ತೆರವುಗೊಳಿಸಿ, ಕಂಪನಿಗಳಿಗೆ ದಂಡ ವಿಧಿಸುವ ಅಧಿಕಾರವನ್ನು ಆಯಾ ಮಹಾನಗರ ಪಾಲಿಕೆಗಳಿಗೆ ನೀಡುವ ಪ್ರಸ್ತಾವನೆ ಇದೆ.
ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದು, ಉಗಿಯುವುದು, ಮಲ-ಮೂತ್ರ ವಿಸರ್ಜನೆ ಮಾಡುವುದು, ಮನೆಗಳ ಮುಂದೆ ಕಸ ಸುರಿಯುವುದು, ಸಾರ್ವಜನಿಕ ಸ್ಥಳಗಳಲ್ಲಿ ನಾಗರಿಕರಿಗೆ ತೊಂದರೆಯಾಗುವ ಕೃತ್ಯ ಮಾಡಿದರೆ ಮೊದಲ ಬಾರಿ 100 ರೂ., ಪುನರಾವರ್ತನೆಯಾದರೆ 200 ರೂ. ದಂಡ ವಿಧಿಸುವುದಾಗಿ ವಿಧೇಯಕದಲ್ಲಿ ತಿಳಿಸಲಾಗಿದೆ.
ಕಸ ವಿಂಗಡನೆ ಕುರಿತು : ವಸತಿ ಸಮುಚ್ಛಯಗಳು ಹಸಿ ಮತ್ತು ಒಣ ಕಸ ವಿಂಗಡಣೆ ಮಾಡಿ ಕೊಡದಿದ್ದರೆ ಮೊದಲನೇ ಬಾರಿ 100 ರೂ., ಪುನರಾವರ್ತನೆಯಾದರೆ 500 ರೂ. ದಂಡ ವಿಧಿಸುವುದು. ಪಾಲಿಕೆ ವ್ಯಾಪ್ತಿಯಲ್ಲಿನ ವಾಣಿಜ್ಯ ಕಟ್ಟಡಗಳು ಕಸ ವಿಂಗಡನೆ ಮಾಡದಿದ್ದರೆ, ಮೊದಲನೇ ಬಾರಿ 500 ರೂ., ಎರಡನೇ ಬಾರಿ 1000 ರೂ. ದಂಡ ವಿಧಿಸುವುದಾಗಿ ವಿಧೇಯಕದಲ್ಲಿ ಪ್ರಸ್ತಾವನೆ ಇದೆ.
ಸಾರ್ವಜನಿಕ ಸ್ಥಳಗಳಾದ ರಸ್ತೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಆಟದ ಮೈದಾನ, ಪಾರ್ಕ್ ಮುಂತಾದ ಕಡೆ ಸ್ಚಚ್ಛತೆ ಕಾಪಾಡಲು ಇರುವ ನಿಯಮವನ್ನು ಉಲ್ಲಂಘಿಸಿದರೆ, ಮೊದಲನೇ ಬಾರಿ 100 ರೂ., ಎರಡನೇ ಬಾರಿ 200 ರೂ.ದಂಡ ವಿಧಿಸುವುದಾಗಿ ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ.
ಕಟ್ಟಡ ನಿರ್ಮಾಣದ ತಾಜ್ಯಗಳನ್ನು ರಸ್ತೆ ಬದಿಯಲ್ಲಿ ಸುರಿಯಬಾರದು ಎಂದು ವಿಧೇಯಕದಲ್ಲಿ ಕಡ್ಡಾಯವಾದ ನಿಯಮ ರೂಪಿಸಲಾಗಿದೆ. ರಸ್ತೆ ಬದಿಯಲ್ಲಿ ತಾಜ್ಯ ಸುರಿದರೆ, 1000 ದಿಂದ 5000 ರೂ.ವರೆಗೂ ದಂಡ ವಿಧಿಸಲು ನಿರ್ಧರಿಸಲಾಗಿದೆ.
ಕೆಲವು ದಿನಗಳ ಹಿಂದೆ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸದ ವಿಲೇವಾರಿ ಸಮಸ್ಯೆ ಹೆಚ್ಚಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ ಈ ವಿಧೇಯಕ ಮಂಡಿಸಿದ್ದು, ಸದನದ ಒಪ್ಪಿಗೆ ಪಡೆದು ಅದನ್ನು ಜಾರಿಗೆ ತರಲು ಮುಂದಾಗಿದೆ.
ಬೆಂಗಳೂರಿನಲ್ಲೇ ಜಾರಿ : ಈ ವಿಧೇಯಕಕ್ಕೆ ಸದನದಲ್ಲಿ ಒಪ್ಪಿಗೆ ದೊರೆತರೆ ಮೊದಲು ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಇದು ಜಾರಿಗೆ ಬರಲಿದೆ. ಕಸ ವಿಂಗಡನೆ ಮಾಡದಿದ್ದರೆ, 100 ರೂ. ದಂಡ ವಿಧಿಸುವ ಪ್ರಸ್ತಾವನೆಯನ್ನು ಬಿಬಿಎಂಪಿ ಈಗಾಗಲೇ ಮಂಡಿಸಿದೆ.
ನಗರಾಭಿವೃದ್ಧಿ ಇಲಾಖೆಯ ಒಪ್ಪಿಗೆಗಾಗಿ ಇದನ್ನು ಕಳುಹಿಸಲಾಗಿದೆ. ರಾಜ್ಯ ಸರ್ಕಾರದ ಅನುಮತಿ ಪಡೆಯುದ ಕಾರಣ ಈ ಪ್ರಸ್ತವಾನೆಯನ್ನು ಬಿಬಿಎಂಪಿ ಜಾರಿಗೊಳಿಸಿರಲಿಲ್ಲ. ಈಗ ಸದನದಲ್ಲಿಯೂ ವಿಧೇಯಕ ಮಂಡನೆಯಾಗಿದ್ದು, ಸದನದ ಅನುಮತಿ ದೊರೆತ ಬಳಿಕ ಬೆಂಗಳೂರಿನಲ್ಲಿ ಮೊದಲು ಜಾರಿಗೆ ಬರಲಿದೆ.