ವೈಭವ ಮಳೆ : ಮರುಕಳಿಸಿದ ರಾಜಧಾನಿಯ ವೈಭವ
ಬೆಂಗಳೂರು, ಜುಲೈ26: ಈ ಬಾರಿ ಮುಂಗಾರು ಋತುವಿನಲ್ಲಿ ಮಳೆ ಪ್ರಭಾವ ಜೋರಾಗಿರುವುದರಿಂದ, ಹಿಂದಿನ ವರ್ಷ ರಾಜಧಾನಿಯ ಜನ ತಾವು ಪಟ್ಟ ಪಡಿಪಾಟಲನ್ನು ನೆನಪಿಸಿಕೊಂಡು ಕೂಲ್ ಕೂಲ್ ಆಗಿದ್ದಾರೆ. ಉತ್ತಮ ಮುಂಗಾರು ಮಳೆಯಿಂದಾಗಿ ರಾಜಧಾನಿಯ ವೈಭವ ಮರುಕಳಿಸಿದೆ.
ರಾಜಧಾನಿ ಬೆಂಗಳೂರು ಪಿಂಚಣಿದಾರರ ಸ್ವರ್ಗ, ಗಾರ್ಡನ್ ಸಿಟಿ ಎಂಬ ಹೆಗ್ಗಳಿಕೆಯನ್ನು ಮರುಗಳಿಸಿದೆ. ಈ ಬಾರಿ ಜೂನ್-ಜುಲೈನಲ್ಲಿ ಅನುದಿನವೂ ಬೆಂಗಳೂರಿನ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಮಿತಿಯಲ್ಲೇ ಇದೆ. ಇದರಿಂದ ಬೆಂಗಳೂರಿನ ಮಂದಿಯೂ Cool, Cool! ಹಿರಿಯರಂತೂ ತಂಪಾದ/ ಆಹ್ಲಾದಕರ ವಾತಾವರಣ ಕಂಡು ಸುಮಾರು 15-20 ವರ್ಷಗಳಷ್ಟು ಹಿಂದಕ್ಕೆ ಜಾರಿದ್ದಾರೆ.
ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸಧ್ಯ ಈ ಬಾರಿ ಆರೋಗ್ಯ ಸಮಸ್ಯೆಗಳೂ ಹೆಚ್ಚಾಗಿ ಕಾಡಿಲ್ಲ. ಬೆಂಗಳೂರು ಮಂದಿ ದಿನಾ ಬೆಳಗಾ ಬೆಚ್ಚನೆ ಸ್ವೆಟರು, ಶಾಲು, ಮಂಕಿ ಕ್ಯಾಪು ಧರಿಸಿ ಚುಮುಚುಮು ಚಳಿಯಲ್ಲಿ ನಗುನಗುತಾ ನಾಲ್ಕು ಹೆಜ್ಜೆ ಹಾಕುತ್ತಿದ್ದಾರೆ. ಪಾನಪ್ರಿಯ ಯುವಕರಂತೂ ಇನ್ನೂ ಸಂಜೆಯಾಗುವಂತಿಲ್ಲ ಆಗಲೇ ಪಬ್/ಬಾರ್ ಗಳ ಬಾಗಿಲು ಬಡಿಯುತ್ತಿದ್ದಾರೆ.
60ರ ದಶಕದ ಬೆಂಗಳೂರಿನ ಖ್ಯಾತಿಗೆ ತಕ್ಕಂತೆ ಬೆಂಗಳೂರು ಸಿಟಿ ಮತ್ತೆ ಹವಾನಿಯಂತ್ರಣಗೊಂಡಿದೆ. ತುಸು ಚಳಿಯಿದ್ದರೂ ತಂಗಾಳಿಗೆ ಮೈಯೊಡ್ಡಲು ಹಿರಿಯ ಮನಸುಗಳು ಹಾತೊರೆಯುತ್ತಿವೆ. ಹಿರಿಯ ತಲೆಮಾರಿನವರು ಒಂದೆಡೆ ಸೇರಿದರೆ ನಗರದ ಹವಾಮಾನದ ಬಗ್ಗೆಯೇ ಮಾತುಕತೆ ನಡೆಸುತ್ತಿದ್ದಾರೆ. ಬ್ರಿಟೀಷರನ್ನು ಕೈಬೀಸಿ ಕರೆಯುತ್ತಿದ್ದ ತಂಪು ತಂಪು ಹವಾ ಸಹ ಇದೇ ಆಗಿತ್ತು ಎನ್ನುತ್ತಾರೆ ದಂಡುಪ್ರದೇಶದಲ್ಲಿರುವ ಹಿರಿಯರೊಬ್ಬರು.
ಹೊರಗೆ ಹಳ್ಳ ಹಿಡಿದ ರೋಡುಗಳು, ಕಸದ ಗುಡ್ಡೆಗಳು, ಅಸ್ತವ್ಯಸ್ಥ ಸಂಚಾರ ವ್ಯವವ್ಥೆಯ ನಡುವೆಯೂ ಜನ ಬೆಂಗಳೂರನ್ನು ಮತ್ತು ಬೆಂಗಳೂರಿನ ಹವಾಮಾನವನ್ನು ಮತ್ತೆ ಪ್ರೀತಿಸುತ್ತಿದ್ದಾರೆ; ಮತ್ತೆ ಅಪ್ಪಿ ಮುದ್ದಾಡುತ್ತಿದ್ದಾರೆ. Long Live Bangalore's perfect weather! [ಮಡಿಕೇರಿ ಮಳೆ ಹಾವಳಿ]