ಕೆಣಕಿದರೆ ಹುಷಾರ್, ಕುಮಾರಸ್ವಾಮಿ ಎಚ್ಚರಿಕೆ!
ಬೆಂಗಳೂರು, ಜು.4 : "ಸಿಎಂ ಸಿದ್ದರಾಮಯ್ಯ ಏಪಕ್ಷೀಯವಾಗಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ ಎಂಬ ಭಾವನೆಯೇ ಇಲ್ಲವಾಗಿದೆ" ಎಂದು ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ ಹಾಗೂ ಬೆಂಗಳೂರು ವರದಿಗಾರರ ಕೂಟ ಬುಧವಾರ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಎಚ್.ಡಿ.ಕುಮಾರಸ್ವಾಮಿ, ನನ್ನನ್ನು ಕೆಣಕಬೇಡಿ ಎಂದು ಸಿಎಂಗೆ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.
ಇತಿಹಾಸದಲ್ಲಿ ಪ್ರಥಮ ಬಾರಿಗೆ ಸಿಇಟಿಗಿಂತ ಮುನ್ನ ಕಾಮೆಡ್-ಕೆ ಪ್ರವೇಶ ಪ್ರಕ್ರಿಯೆ ಆರಂಭಿಸಿದೆ. ಇದು ಶಿಕ್ಷಣ ಸಂಸ್ಥೆಗಳ ಲಾಬಿ. ಸೀಟ್ ಬ್ಲಾಕಿಂಗ್ ಎಂಬುದರಲ್ಲಿ ಕಾಂಗ್ರೆಸ್ನವರೇ ಹೆಚ್ಚಾಗಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ಕುಮಾರಸ್ವಾಮಿ ಆಗ್ರಹಿಸಿದರು.
ಸಿಎಂ ಸಿದ್ದರಾಮಯ್ಯ ಏಕಪಕ್ಷೀಯವಾಗಿ ಹಲವು ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಅದಕ್ಕೆ ಟೀಕೆ ವ್ಯಕ್ತವಾದರೆ, ಕೇವಲ ಪ್ರಸ್ತಾಪ ಎಂದು ನುಣುಚಿಕೊಳ್ಳುತ್ತಾರೆ. ಏಳು ಬಜೆಟ್ ಮಂಡಿಸಿದವರಿಗೆ ಮುಂದಾಲೋಚನೆಯೇ ಇಲ್ಲವಾಗಿದೆ ಎಂದು ವ್ಯಂಗ್ಯವಾಡಿದರು. ಕುಮಾರಸ್ವಾಮಿ ಹೇಳಿದ ಪ್ರಮುಖ ಅಂಶಗಳು ಹೀಗಿವೆ.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದೆ
ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರವಿದೆ. ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸಿಲ್ಲ. ಜನತಾಪರಿವಾರದ ಎ ಟೀಮ್ ಹಾಗೂ ಮೂಲ ಕಾಂಗ್ರೆಸ್ಸಿರು ಸಂಪುಟದಲ್ಲಿ ಮಂತ್ರಿಗಳಾಗಿದ್ದಾರೆ. ಸಿದ್ದರಾಮಯ್ಯ ಆತುರದಿಂದ ದುಡುಕಿನ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಹೀಗಾಗಿ ಸರ್ಕಾರ ಆರಂಭದಲ್ಲೇ ಕೋಮಾ ಸ್ಥಿತಿ ತಲುಪಿದೆ.

ಸಮನ್ವಯ ಸಮಿತಿ ಹಾಸ್ಯಸ್ಪದ
ಸಮ್ಮಿಶ್ರ ಸರ್ಕಾರ ವಿದ್ದಾಗ ಸಮನ್ವಯ ಸಮಿತಿ ರಚಿಸುವುದು ಕೇಳಿದ್ದೇವೆ. ಆದರೆ, ಬಹುಮತದ ಸರ್ಕಾರವಿರುವಾಗ ಸಮಿತಿ ರಚನೆ ಹಾಸ್ಯಸ್ಪದ. ಪಕ್ಷ ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲಿ ಸಮನ್ವಯ ಸಮಿತಿ ರಚನೆಯಾಗುತ್ತಿದೆ ಎಂದರೆ, ಪಕ್ಷ, ಮುಖ್ಯಮಂತ್ರಿ ಹಾಗೂ ಸಚಿವರ ನಡುವಿನ ವಿಶ್ವಾಸದ ಕೊರತೆ ಇದೆ ಎಂದು ಅರ್ಥ.

ಬರೀ ಗೊಂದಲ ಸೃಷ್ಟಿಸುತ್ತಾರೆ
ಸಿಎಂ ಆಗಿ ಅಧಿಕಾರ ವಹಿಸಿಕೊಂಡ ನಂತರ ಘೋಷಿಸಿದ ಅಗ್ಗದ ಮದ್ಯ, ಪದವೀಧರರಿಗೆ ಮದ್ಯದ ಬಾರ್ ಲೈಸೆನ್ಸ್, ಹಾಲಿಗೆ ಪ್ರೋತ್ಸಾಹಧನ, 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಹಾಲು, ಜೂಲೈನಿಂದ ಅಗ್ಗದ ಬೆಲೆಯಲ್ಲಿ ಅಕ್ಕಿ ವಿತರಣೆ ಸೇರಿದಂತೆ ಹಲವು ವಿಚಾರದಲ್ಲಿ ನೀಡಿದ ಹೇಳಿಕೆಗಳನ್ನು ಸಿದ್ದರಾಮಯ್ಯ ವಾಪಸ್ ಪಡೆದಿದ್ದಾರೆ. ಇದಕ್ಕೆ ಮಾಧ್ಯಮಗಳು ಕಾರಣ ಎಂದು ಗೊಂದಲ ಸೃಷ್ಟಿಸುತ್ತಿದ್ದಾರೆ.

ಕೆಣಕಿದರೆ ದಾಖಲೆ ಬಿಡುಗಡೆ ಹುಷಾರ್!
ಸರ್ಕಾರಕ್ಕೆ ಆರು ತಿಂಗಳು ಅವಕಾಶ ಮಾಡಿಕೊಡಬೇಕು ಎಂದು ನಿರ್ಧರಿಸಿದ್ದೆ. ಆದರೆ, ಸಿಎಂ ನಮ್ಮನ್ನು ಕೆಣಕುತ್ತಿದ್ದಾರೆ. ನನ್ನ ಬಗ್ಗೆ ಲಘುವಾಗಿ ಮಾತನಾಡಿದರೆ ಅದನ್ನು ಅರಗಿಸಿಕೊಳ್ಳುವುದಿಲ್ಲ. ಸುಮ್ಮನೆ ಇರುವುದು ಇಲ್ಲ. ಅಧಿವೇಶನ ಬರಲಿ ದಾಖಲೆ ಬಿಡುಗಡೆ ಮಾಡುತ್ತೇನೆ.

ಸಾರಾಯಿ ದಾಖಲೆ ಸಂಗ್ರಹಿಸಿದ್ದೇನೆ
ಹಣಕಾಸು ಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಯಾವ ಲಾಬಿಗೆ ಮಣಿದಿದ್ದರು. ಯಾವ ರೀತಿ ನಡೆದುಕೊಂಡಿದ್ದರು. ಮದ್ಯದ ಲಾಬಿಗೆ ಹೇಗೆ ಮಣಿದಿದ್ದರು ಎಂಬ ದಾಖಲೆ ಇದೆ. ಸಿದ್ದರಾಮಯ್ಯ ನಾನೊಬ್ಬನೇ ಸತ್ಯ ಹರಿಶ್ಚಂದ್ರ, ಉಳಿದವರೆಲ್ಲ ಭ್ರಷ್ಟರು ಎಂದು ಹೇಳುತ್ತಿದ್ದಾರೆ. ಕಲರ್ ಸಾರಾಯಿ ಕೊಡಲು ಹೊರಟಿರುವುದು ಯಾವ ಲಾಬಿಗೆ ಮಣಿದು ಎಂದು ಎಚ್ಡಿಕೆ ಪ್ರಶ್ನಿಸಿದರು.

ಗುಪ್ತಚರ ವರದಿ ಸಂಗ್ರಹಿಸುತ್ತಿದ್ದಾರೆ
ಮುಖ್ಯಮಂತ್ರಿಗಳು ಗುಪ್ತಚರ ಇಲಾಖೆ ಅಧಿಕಾರಿಗಳನ್ನು ಬಿಟ್ಟು ಕುಮಾರಸ್ವಾಮಿ ಏನು ಮಾಡ್ತಾರೆ?, ಯಾರ ಜತೆ ಮಾತಾಡ್ತಾರೆ?' ಎಂಬ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇದರ ಬದಲಾಗಿ ತಮ್ಮ ಸಂಪುಟದ ಸಚಿವರು ಹಾಗೂ ಇಲಾಖೆಯ ಪ್ರಮುಖ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲಿ ಎಂದು ವ್ಯಂಗ್ಯವಾಡಿದರು.

ಸೀಟ್ ಬ್ಲಾಕಿಂಗ್ ತನಿಖೆ ಮಾಡಿ
ಸಿಇಟಿಗಿಂತ ಮುನ್ನ ಕಾಮೆಡ್-ಕೆ ಪ್ರವೇಶ ಪ್ರಕ್ರಿಯೆ ಆರಂಭಿಸಿದೆ. ಇದು ಶಿಕ್ಷಣ ಸಂಸ್ಥೆಗಳ ಲಾಬಿ. ಸೀಟ್ ಬ್ಲಾಕಿಂಗ್ ಎಂಬುದರಲ್ಲಿ ಕಾಂಗ್ರೆಸ್ನವರೇ ಹೆಚ್ಚಾಗಿದ್ದಾರೆ. ಸಿದ್ದರಾಮಯ್ಯ ಅವರಿಗೆ ಬಡವರಿಗೆ ಸೀಟು ಸಿಗದೆ,ಅನ್ಯಾಯವಾಗುತ್ತಿದೆ ಎಂಬುದರ ಕುರಿತು ಕಾಳಜಿ ಇಲ್ಲ. ಸೀಟ್ ಬ್ಲಾಕಿಂಗ್ ಬಗ್ಗೆ ಕೂಡಲೇ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ನಾನು ಅಡ್ಜೆಸ್ಟ್ಮೆಂಟ್ ರಾಜಕಾರಣ ಮಾಡಬೇಕಾ?
ಹಿಂದೆ ಬಿಎಸ್ವೈ ಮೇಲೆ ದಾಖಲೆ ಬಿಡುಗಡೆ ಮಾಡಿ ಒಂದು ಸಮುದಾಯದ ವಿರೋಧ ಕಟ್ಟಿಕೊಂಡಿದ್ದೇನೆ. ಇದೀಗ ಸಿದ್ದರಾಮಯ್ಯ ಅವರ ಮೇಲೆ ಮಾತನಾಡಿದರೆ ಮತ್ತೊಂದು ಸಮುದಾಯ ವಿರೋಧ ಕಟ್ಟಿಕೊಳ್ಳಬೇಕು.ಒಂದೆರಡು ಸಮುದಾಯದ ವಿರೋಧ ಕಟ್ಟಿಕೊಂಡು ರಾಜಕಾರಣ ಮಾಡುವುದು ಹೇಗೆ? ನಾನೂಅಡ್ಜೆಸ್ಟ್ಮೆಂಟ್ ರಾಜಕಾರಣ ಮಾಡುವುಡೋದೆ ಒಳ್ಳೆಯದಾ ಎಂದು ಅನ್ನಿಸುತ್ತಿದೆ.

ಹೋರಾಟ ಬಿಡೋಲ್ಲ
ಕೆಜೆಪಿ ಮತ್ತು ಬಿಜೆಪಿಯ ನಡುವೆ ಹೊಂದಾಣಿಕೆಯ ಮಾತುಗಳು ಕೇಳಿಬರುತ್ತಿವೆ. ಇದರಿಂದ ಜೆಡಿಎಸ್ ಪಕ್ಷದ ರಾಜಕೀಯ ತೀರ್ಮಾನಗಳು ಬದಲಾವಣೆ ಆಗುವುದಿಲ್ಲ. ಎರಡೂ ಪಕ್ಷಗಳು ವಿಲೀನಗೊಂಡು ಪ್ರತಿಪಕ್ಷ ಸ್ಥಾನ ಕೈತಪ್ಪಿ ಹೋದರೂ, ಶಾಸಕನಾಗಿ ಹೋರಾಟ ಮುಂದುವರೆಸುತ್ತೇನೆ.












Click it and Unblock the Notifications