ಎಚ್ಡಿಕೆ ಕಾರಿಗೆ ಅಸ್ತು, ಆದ್ರೆ ಅಪ್ಪ ಚೆಕ್ ಹರಿದ್ಹಾಕಿದ್ದರಂತೆ!

ರಾಮನಗರದ ಶಾಸಕ ಕುಮಾರಸ್ವಾಮಿಗೆ ಅಧಿಕೃತ ವಾಹನ ಸೌಲಭ್ಯ ನೀಡಲು ಹೊಸ ಕಾರು ಖರೀದಿಗೆ ಸಚಿವಾಲಯ ಒಪ್ಪಿದೆ. ಈ ಮಧ್ಯೆ, ಕುಮಾರಸ್ವಾಮಿ ಅವರ ಅಪ್ಪ ಎಚ್ ಡಿ ದೇವೇಗೌಡರು ಬೇಲೂರಿನಲ್ಲಿ ಇಂಟರೆಸ್ಟಿಂಗ್ ಸಂಗತಿಯೊಂದನ್ನು ಹೇಳಿದ್ದಾರೆ.
ಏನಪ್ಪಾ ಅಂದರೆ 'ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದಾಗ ಭತ್ಯೆ ವೇತನದ ಚೆಕ್ ಅನ್ನು ಹರಿದು ಹಾಕಿದ್ದೆ. ಕೇವಲ ಭತ್ಯೆ ಹಾಗೂ ಸಂಬಳಕ್ಕಾಗಿ ತಾನು ಸಂಸದನಾದವನಲ್ಲ. ಟಿಎ- ಡಿಎಗಾಗಿ ಸಂಸತ್ತಿಗೆ ಹೋಗುವ ಜಾಯಮಾನ ನನ್ನದಲ್ಲ' ಎಂದು ತಿಳಿಸಿದ್ದಾರೆ.
ಆರ್ಥಿಕ ಇಲಾಖೆಯ ಅನುಮೋದನೆ ಸಿಕ್ಕಿದ್ದು, ಬಿಳಿ ಬಣ್ಣದ ಟೊಯೋಟಾ ಫಾರ್ಚೂನರ್ ಕಾರನ್ನು 23.22 ಲಕ್ಷ ರೂ. ವೆಚ್ಚದಲ್ಲಿ ಟೊಯೋಟಾ ಮೋಟಾರ್ಸ್ ಕಂಪನಿಯಿಂದ ಖರೀದಿಸಲು ಸಚಿವಾಲಯದಿಂದ ಆದೇಶ ಹೊರಬಿದ್ದಿದೆ.
ಸೋ, ಸದ್ಯದಲ್ಲೇ ಕುಮಾರಸ್ವಾಮಿ ಅವರ ಸಂಚಾರಕ್ಕಾಗಿ ಫಾರ್ಚೂನರ್ ಸರಕಾರಿ ಕಾರು ಮನೆ ಮುಂದೆ ನಿಲ್ಲಲಿದೆ. ಆದರೆ ಮನೆ ಯಾವುದು ಎಂಬುದು ಇನ್ನೂ ಇರ್ತ್ಯರ್ಥವಾಗಿಲ್ಲ.
ಏಕೆಂದರೆ 'ಸರಕಾರಿ ಬಂಗಲೆಗಳು ಯಾವುವೂ ಖಾಲಿ ಇಲ್ಲ. ಎಲ್ಲಾ ಅಲಾಟ್ ಆಗಿಬಿಟ್ಟಿವೆ. ಬಾಡಿಗೆ ಮನೆ ಕೇಳಿದರೆ ಕೊಡಲಾಗುವುದು. ಇತೀಚೆಗೆ ಸರಕಾರಿ ಬಾಡಿಗೆಯನ್ನು 50 ಸಾವಿರ ರೂ. ನಿಂದ 1 ಲಕ್ಷ ರೂ. ಗೆ ಏರಿಸಲಾಗಿದೆ' ಎಂದು ಸಿಎಂ ಸಿದ್ದು ಹೇಳಿದ್ದಾರೆ.












Click it and Unblock the Notifications