ಬಿಎಸ್ವೈ ವಾಪಸಾತಿ ಚರ್ಚೆ: ಜೋಶಿ, ಡಿವಿಎಸ್ ಪೌರೋಹಿತ್ಯ

ಕುತೂಹಲಸದ ಬೆಳವಣಿಗೆಯೆಂದರೆ ಯಡಿಯೂರಪ್ಪ ಅವರಿಂದ ಮುಖ್ಯಮಂತ್ರಿ ಪಟ್ಟಕ್ಕೇರಿ ಅಲ್ಲಿಂದ ಇಳಿದು ಬರುತ್ತಿದ್ದಂತೆ ಇನ್ನಿಲ್ಲದಂತೆ ಯಡಿಯೂರಪ್ಪ ವಿರುದ್ಧವೇ ವಾಗ್ದಾಳಿ ನಡೆಸುತ್ತಿದ್ದ ಡಿವಿ ಸದಾನಂದಗೌಡರು ಸಹ ಯಡಿಯೂರಪ್ಪ ಮರುಸೇರ್ಪಡೆಗೆ ಒಲವು ತೋರಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರೂ ಯಡಿಯೂರಪ್ಪ ವಾಪಸಾತಿಗೆ ಪೌರೋಹಿತ್ಯವಹಿಸಲು ಸಿದ್ಧವಾಗಿದ್ದಾರೆ. ಇದಕ್ಕೆ ಮಹೂರ್ತವೂ ನಿಗದಿಯಾಗಿದ್ದು ಧಾರವಾಡದಲ್ಲಿರುವ ಜೋಶಿ ಅವರು ರಾಜಧಾನಿಗೆ ವಾಪಸಾಗುತ್ತಿದ್ದಂತೆ ಇದೇ ಗುರುವಾರ ಜೂನ್ 27ರಂದು ಪಕ್ಷದ ಹಿರಿಯ ನಾಯಕರೊಂದಿಗೆ ಸಭೆ ನಡೆಸಿ, ಯಡಿಯೂರಪ್ಪ ಅವರನ್ನು ವಾಪಸ್ ಕರೆತರುವ ವಿಷಯದ ಸಾಧಕ-ಬಾಧಕಗಳ ಕುರಿತು ಸಮಗ್ರ ಸಮಾಲೋಚನೆ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ
ಈ ಸಂಬಂಧ ಧಾರವಾಡದಲ್ಲಿ ಮಾತನಾಡಿರುವ ಪ್ರಹ್ಲಾದ್ ಜೋಶಿ ಅವರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳುವ ನಿರ್ಧಾರ ರಾಷ್ಟ್ರೀಯ ನಾಯಕರ ಮೇಲಿದೆ. ರಾಷ್ಟ್ರೀಯ ನಾಯಕರು ಈ ಕುರಿತು ಸೂಚಿಸಿದರೆ ನಾನು ಮತ್ತು ಸದಾನಂದಗೌಡರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಸಕಾರಣವೂ ಇದೆ:
ಜೋಶಿ ತಮ್ಮ ಪ್ರಯತ್ನಕ್ಕೆ ಸಕಾರಣವನ್ನೂ ನೀಡಿದ್ದಾರೆ: ಪಕ್ಷದ ಒಡಕಿನಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮತಗಳು ಒಡೆದು ಹೋದವು. ಪರಿಣಾಮ ಬಿಜೆಪಿ ಕಡಿಮೆ ಕ್ಷೇತ್ರಗಳಲ್ಲಿ ಗೆಲವು ಸಾಧಿಸಿತು. ಒಡೆದು ಹೋದ ಮತಗಳನ್ನು ಕೂಡಿಸಿದರೆ ಬಿಜೆಪಿಯ ಮತಗಳೇ ಹೆಚ್ಚು. ಎಲ್ಲ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳಿಗೆ ಮತದಾರರೂ ಒಂದೇ ತೆರನಾದ ಸ್ಪಷ್ಟತೆ ನೀಡುವುದಿಲ್ಲ. ಹೀಗಾಗಿ ಬಿಜೆಪಿ ಸೋತಿಲ್ಲ, ಕಾಂಗ್ರೆಸ್ ಗೆದ್ದಿಲ್ಲ ಎಂಬಂತಹ ಫಲಿತಾಂಶವಿದು. ಕಾಲಚಕ್ರ ತಿರುಗುತ್ತಿರುತ್ತದೆ ಎಂಬುದನ್ನು ಕಾಂಗ್ರೆಸ್ ಅರಿಯಬೇಕು ಎಂದು ವಿಶ್ಲೇಷಿಸಿದ್ದಾರೆ.











Click it and Unblock the Notifications