ರಾಜ್ಯ ಹೆದ್ದಾರಿಗಳಲ್ಲೂ ಇನ್ನು ಟೋಲ್ ಕಟ್ಟಬೇಕು?

ಬೆಂಗಳೂರಿನಲ್ಲಿ ಈ ಕುರಿತು ಸುಳಿವು ನೀಡಿರುವ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ರಸ್ತೆ ಸುರಕ್ಷತೆ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಟೋಲ್ ಸಂಗ್ರಹ ಅನಿವಾರ್ಯವಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಟೋಲ್ ಸಂಗ್ರಹದ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಯಾವ ರಾಜ್ಯ ಹೆದ್ದಾರಿಗಳಲ್ಲಿ ಎಷ್ಟು ಟೋಲ್ ಸಂಗ್ರಹಿಸಬೇಕು ಎಂದು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಟೋಲ್ ಸಂಗ್ರಹದ ಕುರಿತು ಶೀಘ್ರದಲ್ಲೇ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಮಹಾದೇವಪ್ಪ ಹೇಳಿದರು.
ಬಿಜೆಪಿ ಸರ್ಕಾರದ ಯೋಜನೆ : ಹಿಂದಿನ ಬಿಜೆಪಿ ಸರ್ಕಾರ ಖಾಸಗಿ ಮತ್ತು ಸರ್ಕಾರಿ ಸಹಭಾಗಿತ್ವದಲ್ಲಿ ನಿರ್ಮಿಸಿರುವ ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸುವ ಕುರಿತು ಚಿಂತನೆ ನಡೆಸಿತ್ತು. ಆದರೆ, ಚುನಾವಣೆ ಎದುರಾಗಿದ್ದರಿಂದ ಯೋಜನೆಯನ್ನು ಕೈ ಬಿಟ್ಟಿತ್ತು.
ಸದ್ಯ ಕಾಂಗ್ರೆಸ್ ಸರ್ಕಾರ ಇದನ್ನು ಜಾರಿಗೆ ತಂದು ಆದಾಯ ಸಂಗ್ರಹಿಸುವ ಜೊತೆಗೆ, ಜನರ ಜೇಬಿಗೆ ಕತ್ತರಿ ಹಾಕಲು ಚಿಂತನೆ ನಡೆಸಿದೆ. ಸರ್ಕಾರದ ಈ ಕ್ರಮ ಜನರ ವಿರೋಧಕ್ಕೆ ಕಾರಣವಾಗಬಹುದು.
ಟೋಲ್ ಏಕೆ : ರಾಜ್ಯದಲ್ಲಿ 75 ಸಾವಿರ ಕಿ.ಮೀ.ರಾಜ್ಯ ಹೆದ್ದಾರಿ ಇದೆ. ಇವುಗಳನ್ನು ನಿರ್ಮಿಸಲು ನಬಾರ್ಡ್ ಮತ್ತು ಇತರೆ ಬ್ಯಾಂಕ್ ಗಳಿಂದ ಸಾಲ ಪಡೆಯಲಾಗಿದೆ. ಹೆದ್ದಾರಿಗಳ ನಿರ್ವಹಣೆಗಾಗಿ ಟೋಲ್ ಸಂಗ್ರಹ ಅನಿವಾರ್ಯವಾಗಿದೆ ಎಂಬುದು ಟೋಪ್ ಸಂಗ್ರಹಕ್ಕೆ ಸಚಿವರು ನೀಡುವ ಸಮರ್ಥನೆ.
ರಾಷ್ಟ್ರೀಯ ಹೆದ್ದಾರಿಗಳಿಗೆ ಅನುದಾನ : ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ನೀಡುವಂತೆ ಭೂ ಸಾರಿಗೆ ಸಚಿವ ಆಸ್ಕರ್ ಫರ್ನಾಂಡೀಸ್ ಅವರಿಗೆ ಮನವಿ ಮಾಡುವುದಾಗಿ ಎಚ್.ಸಿ.ಮಹಾದೇವಪ್ಪ ಹೇಳಿದರು.












Click it and Unblock the Notifications