ಬಿಜೆಪಿಗೆ ಮೈತ್ರಿ ಬೇಕಿಲ್ಲ ಅಡ್ವಾಣಿಗೆ ಮೋದಿ ಸಲಹೆ
ನವದೆಹಲಿ, ಜೂ.18: ಬಿಜೆಪಿಯ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೇರಿದ ಮೇಲೆ ಇದೇ ಮೊದಲ ಬಾರಿಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರನ್ನು ಮಂಗಳವಾರ(ಜೂ.18) ಭೇಟಿ ಮಾಡಿ ಮಾತನಾಡಿದರು.
ಪಕ್ಷದ ಆಂತರಿಕೆ ಭಿನ್ನಾಭಿಪ್ರಾಯ, ಮುಂದಿನ ಕಾರ್ಯತಂತ್ರ, ಬಿಜೆಪಿ ಸಖ್ಯ ಕಳೆದುಕೊಂಡ ಜೆಡಿಯು, ಎನ್ ಡಿಎ ಮುಂದಿನ ಕಥೆಯೇನು? ಮುಂತಾದ ವಿಷಯಗಳ ಬಗ್ಗೆ ಇಬ್ಬರು ನಾಯಕರು ಗಂಟೆಗಟ್ಟಲೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಮಿತ್ರ ಪಕ್ಷಗಳ ನೆರವಿಲ್ಲದೆ ಬಿಜೆಪಿ ಲೋಕಸಭೆ ಚುನಾವಣೆ ಎದುರಿಸಿ ಗೆಲ್ಲುವ ಸಾಮರ್ಥ್ಯವಿದೆ ನೀವು ಚಿಂತಿಸಬೇಡಿ ಎಂದು ಎನ್ ಡಿಎ ಜನಕರಲ್ಲಿ ಒಬ್ಬರಾದ ಅಡ್ವಾಣಿ ಅವರಿಗೆ ಮೋದಿ ಅವರು ಮನವರಿಕೆ ಮಾಡಿದ್ದಾರೆ ಎಂದು ಟಿವಿ ಮಾಧ್ಯಮಗಳು ವರದಿ ಮಾಡಿವೆ.

ನರೇಂದ್ರ ಮೋದಿ ಅವರು ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಆಹ್ಲುವಾಲಿಯಾ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ನಂತರ ದೆಹಲಿಯ ಬಿಜೆಪಿ ಕೇಂದ್ರ ಕಚೇರಿ ಪದಾಧಿಕಾರಿಗಳು, ಕಾರ್ಯಕರ್ತರ ಜೊತೆ ಸಭೆ ನಡೆಸಿದ್ದಾರೆ.
ಗೋವಾದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮೋದಿ ಅವರನ್ನು ರಾಷ್ಟ್ರೀಯ ನಾಯಕರಾಗಿ ಆಯ್ಕೆ ಮಾಡಿ, ಪ್ರಚಾರ ಸಮಿತಿ ಜವಾಬ್ದಾರಿ ವಹಿಸಿದ್ದರಿಂದ ಅಡ್ವಾಣಿ ಅವರು ಬೇಸತ್ತು ರಾಜೀನಾಮೆ ಸಲ್ಲಿಸಿದ್ದರು ಎಂಬ ವರದಿಗಳ ಬಗ್ಗೆ ಅಡ್ವಾಣಿ ಸ್ಪಷ್ಟನೆ ನೀಡಿದ್ದಾರೆ. ನಿಮ್ಮನ್ನು ಸಮಿತಿ ಅಧ್ಯಕ್ಷರನ್ನಾಗಿಸಿದ್ದರಿಂದ ನಾನು ರಾಜೀನಾಮೆ ಕೊಟ್ಟೆ ಎಂದರೆ ತಪ್ಪಾಗುತ್ತದೆ ಎಂದು ಅಡ್ವಾಣಿ ಅವರು ನರೇಂದ್ರ ಮೋದಿಗೆ ಸ್ಪಷ್ಟಪಡಿಸಿದ್ದಾರೆ.
ರಾಜೀನಾಮೆ ನೀಡುವಾಗ ಇದ್ದ ಮನಸ್ಥಿತಿ, ಗೊಂದಲ ಈಗ ನಿವಾರಣೆಯಾಗಿದೆ. ರಾಜೀನಾಮೆ ಹಿಂಪಡೆಯುವಲ್ಲಿ ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ ಅವರು ಮಹತ್ವದ ಪಾತ್ರವಹಿಸಿದರು ಎಂದು ಅಡ್ವಾಣಿ ಅವರು ಮೋದಿಗೆ ಹೇಳಿದ್ದಾರೆ.
ದೆಹಲಿಯ ಪೃಥ್ವಿರಾಜ್ ರಸ್ತೆಯಲ್ಲಿರುವ ಅಡ್ವಾಣಿ ನಿವಾಸಕ್ಕೆ ಭೇಟಿ ನೀಡಿದ ಮೋದಿ ಅವರು ಬಿಜೆಪಿಯ ಪ್ರಮುಖ ನಾಯಕರ ಮನೆಗಳಿಗೂ ಭೇಟಿ ನೀಡಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ ಬಂದಿದ್ದಾರೆ.
ಮೋದಿ ದೆಹಲಿ ಭೇಟಿ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಯೋಜನಾಬದ್ಧವಾಗಿ ಕಾರ್ಯನಿರ್ವಹಿಸಲಿದೆ ಎಂಬ ನಂಬಿಕೆ ನನಗಿದೆ. ಮೋದಿ ಅವರ ಮಾರ್ಗದರ್ಶನ ಕಿರಿಯ ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ ಅವಶ್ಯವಾಗಿದ್ದು, ಪಕ್ಷ ಸಂಘಟನೆಗೆ ನಾಂದಿ ಹಾಡಲಿದೆ ಎಂದಿದ್ದಾರೆ. ಒಟ್ಟಾರೆ ದೆಹಲಿಯ ಮೋದಿ ಅವರು ಮೊದಲ ಭೇಟಿಯಲ್ಲೇ ಎಲ್ಲರನ್ನು ಮೋಡಿ ಮಾಡಿದ್ದಾರೆ.












Click it and Unblock the Notifications