ಸದನದ ಸ್ವಾರಸ್ಯ : ಶಾಸಕರ ಗೈರು, ಸ್ಪೀಕರ್ ಗರಂ

ಮಂಗಳವಾರ ಬೆಳಗ್ಗೆ 11 ಗಂಟೆಗೆ ಸರಿಯಾಗಿ ಅಧಿವೇಶನ ಪ್ರಾರಂಭವಾಯಿತು. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ನಡೆಯಬೇಕಾಗಿತ್ತು. ಆದರೆ, ಆಡಳಿತ ಮತ್ತು ಪ್ರತಿಪಕ್ಷಗಳ ಹಲವಾರು ಶಾಸಕರು ಗೈರು ಹಾಜರಾಗಿದ್ದು, ಸದನ ಖಾಲಿಯಾಗಿತ್ತು. ಸ್ವತಃ ಆಡಳಿತ ಪಕ್ಷದ ಹಲವಾರು ಸಚಿವರು ಗೈರು ಹಾಜರಾಗಿದ್ದರು.
ಸಿಡಿದ ಸಿ.ಟಿ.ರವಿ : ಆಡಳಿತ ಪಕ್ಷದ ಶಾಸಕರ ವರ್ತನೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿತು. ಮಾಜಿ ಸಚಿವರಾದ ಸಿ.ಟಿ.ರವಿ ಮತ್ತು ಜೀವರಾಜ್ ಶಾಸಕರು ಎಲ್ಲಿ? ಆಡಳಿತ ಪಕ್ಷದ ಸದಸ್ಯರೇ ಗೈರು ಹಾಜರಾದರೆ ಹೇಗೆ? ನಾವು ಸದನದಿಂದ ಹೊರನಡೆಯುತ್ತೇವೆ ಎಂದು ಸ್ಪೀಕರ್ ಅವರಿಗೆ ಮನವಿ ಮಾಡಿದರು.
ಅಶೋಕ್ ಅಸಮಾಧಾನ : ಮಾಜಿ ಮುಖ್ಯಮಂತ್ರಿ ಆರ್.ಅಶೋಕ್ ರಾಜ್ಯಾಪಾಲರ ಭಾಷಣಕ್ಕೂ ಆಡಳಿತ ಪಕ್ಷದ ಶಾಸಕರು ಗೈರು ಹಾಜರಾಗಿದ್ದರು. ಹಿಂದಿನ ಸಾಲಿನವರನ್ನು ಮುಂದೆ ತಂದು ಕೂರಿಸಿ ಸದನ ತುಂಬಿಸಲಾಗಿದೆ. ಶಾಸಕರು ಏಕೆ ಸದನಕ್ಕೆ ಬರುತ್ತಿಲ್ಲ ಎಂದು ಆಡಳಿತ ಪಕ್ಷ ವಿವರ ನೀಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ಪೀಕರ್ ಗರಂ : ಬಿಜೆಪಿ ಶಾಸಕರನ್ನು ಸಮಾಧಾನ ಪಡಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಆಡಳಿತ ಪಕ್ಷದ ವಿರುದ್ಧ ಗರಂ ಆದರು. ನಾಳೆಯಿಂದ ಸದನ ಪ್ರಾರಂಭವಾಗುವ ಮೊದಲು ಸದನದಲ್ಲಿ ಎಲ್ಲಾ ಶಾಸಕರು ಹಾಜರಿರಬೇಕು ಎಂದು ಸೂಚಿಸಿದರು.
ಜಯಚಂದ್ರ ತಪ್ಪೊಪ್ಪಿಗೆ : ಸ್ಪೀಕರ್ ಮಾತಿನಿಂದ ತಪ್ಪೊಪ್ಪಿಕೊಂಡ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ, ಹೌದು ಶಾಸಕರು ಗೈರು ಹಾಜರಾಗಿದ್ದಾರೆ. ನಾಳೆಯಿಂದ ಎಲ್ಲರೂ ಹಾಜರಾಗುವಂತೆ ಮಾಹಿತಿ ನೀಡಿ ಕರೆತರುತ್ತೇವೆ ಎಂದು ಹೇಳಿದರು.
ಶ್ರದ್ಧಾಂಜಲಿ ಸಮರ್ಪಣೆ : ಕೆಲವು ದಿನಗಳ ಹಿಂದೆ ನಿಧನರಾದ ಗಾಯಕ ಪಿ.ಬಿ.ಶ್ರೀನಿವಾಸ್, ಮಾಜಿ ರಾಜ್ಯಪಾಲೆ ರಮಾದೇವಿ ಮುಂತಾದ ಗಣ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ನಂತರ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಪ್ರಾರಂಭಿಸಲಾಯಿತು.
ಡಿಕೆಶಿ ಗೈರು : ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕನಕಪುರ ಕ್ಷೇತ್ರದ ಶಾಸಕ ಡಿ.ಕೆ.ಶಿವಕುಮಾರ್ ಇಂದು ಸಹ ಸದನಕ್ಕೆ ಗೈರು ಹಾಜರಾಗಿದ್ದರು. ಅವರು ದೆಹಲಿಯಲ್ಲಿದ್ದು, ನಾಳೆ ಸದನಕ್ಕೆ ಆಗಮಿಸುವ ನಿರೀಕ್ಷೆ ಇದೆ. ಶಾಸಕರಾಗಿ ಅವರಿನ್ನೂ ಪ್ರಮಾಣ ವಚನ ಸ್ವೀಕರಿಸಿಲ್ಲ.












Click it and Unblock the Notifications