ರಾಜ್ಯಪಾಲರ ಭಾಷಣದಲ್ಲಿ ಹೊಸತೇನಿಲ್ಲ : ಪ್ರತಿಪಕ್ಷಗಳು
ಬೆಂಗಳೂರು, ಜೂ. 3 : ಕಾಂಗ್ರೆಸ್ ಸರ್ಕಾರದ ಚೊಚ್ಚಲ ವಿಧಾನಸಭೆ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣ ಪ್ರತಿ ಪಕ್ಷಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ. ರಾಜ್ಯಪಾಲರು ತಮ್ಮ ಭಾಷಣದಲ್ಲಿ ಹೊಸ ಅಂಶವನ್ನು ಹೇಳಿಲ್ಲ. ಸಿದ್ದರಾಮಯ್ಯ ಸಂಪುಟ ನೀಡಿದ ಭಾಷಣ ಓದಿದ್ದಾರೆ. ಇದರಲ್ಲಿ ದೂರದೃಷ್ಟಿಯ ಆಲೋಚನೆಗಳು ಇಲ್ಲ ಎಂದು ಪ್ರತಿ ಪಕ್ಷಗಳು ಕಿಡಿ ಕಾರಿವೆ.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯವನ್ನು ವಿಧಾನ ಮಂಡಲದಲ್ಲಿ ಮಂಡಿಸಿದಾಗ ಪ್ರತಿ ಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸೂಚನೆಯನ್ನು ಇಂದೇ ನೀಡಿವೆ. ಪ್ರಮುಖ ಪ್ರತಿಪಕ್ಷ ಜೆಡಿಎಸ್ ಯೋಜನೆಗಳ ಬಗ್ಗೆ ಸ್ಪಷ್ಟತೆ ಇಲ್ಲದೆ ಭಾಷಣ ಮಾಡಿದ್ದಾರೆ ಎಂದು ಟೀಕಿಸಿದೆ.
ಬಿಜೆಪಿ ಮತ್ತು ಕೆಜೆಪಿ ರಾಜ್ಯಪಾಲರು ಭ್ರಷ್ಟಾಚಾರದ ಬಗ್ಗೆ ಮಾತನಾಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಕೇಂದ್ರ ಸರ್ಕಾರ ಭ್ರಷ್ಟಾಚಾರ ನಡೆಸಿರುವಾಗ, ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ನೈತಿಕ ಶಕ್ತಿ ಕಳೆದುಕೊಂಡಿದೆ ಎಂದು ಆರೋಪಿಸಿವೆ.(ರಾಜ್ಯಪಾಲರ ಭಾಷಣದ ಮಖ್ಯಾಂಶಗಳು)
ವಿಧಾನಪರಿಷತ್ ಸದಸ್ಯರು ರಾಜ್ಯಪಾಲರ ಭಾಷಣವನ್ನು ಟೀಕಿಸಿದ್ದು, ವಿಧಾನಪರಿಷತ್ ಸದಸ್ಯ ಎಂ.ಸಿ.ನಾಣಯ್ಯ ಮತ್ತು ಪರಿಷತ್ ಪ್ರತಿಪಕ್ಷ ನಾಯಕ ಡಿ.ವಿ.ಸದಾನಂದ ಗೌಡ ರಾಜ್ಯಪಾಲರ ಭಾಷಣ ನೀರಸವಾಗಿತ್ತು ಎಂದು ಹೇಳಿದ್ದಾರೆ. ಒಟ್ಟಾರೆ ವಿವಿಧ ನಾಯಕರು ಏನು ಹೇಳಿದರು ನೋಡೋಣ.

ಹೊಸ ಯೋಜನೆಗಳೇ ಇಲ್ಲ : ಕುಮಾರಸ್ವಾಮಿ
ರಾಜ್ಯಪಾಲರ ಭಾಷಣದಲ್ಲಿ ಯಾವುದೇ ಹೊಸ ಯೋಜನೆಗಳಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷನಾಯಕ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ. ಬಿಜೆಪಿ ಸರ್ಕಾರದಲ್ಲಿದ್ದ ಯೋಜನೆಗಳನ್ನೇ ಮತ್ತೊಮ್ಮೆ ಘೋಷಿಸಿದ್ದಾರೆ. ಸರ್ಕಾರ ಮುಂದಿನ ಯೋಜನೆಗಳ ಬಗ್ಗೆ ಸ್ಪಷ್ಟತೆ ಇಲ್ಲ. ಸದನದಲ್ಲಿ ಈ ಕುರಿತು ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.

ನಮ್ಮ ಯೋಜನೆಗಳನ್ನು ಮತ್ತೊಮ್ಮೆ ಹೇಳಿದ್ದಾರೆ : ಶೆಟ್ಟರ್
ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಯಲ್ಲಿದ್ದ ಯೋಜನೆಗಳನ್ನು ಮತ್ತೊಮ್ಮೆ ರಾಜ್ಯಪಾಲರು ಹೇಳಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಯಾವುದೇ ಹೊಸ ಯೋಜನಗಳನ್ನು ಸರ್ಕಾರ ನೀಡಿಲ್ಲ. ಸರ್ಕಾರಕ್ಕೆ ದೂರದೃಷ್ಠಿ ಇಲ್ಲ ಎಂಬುದನ್ನು ರಾಜ್ಯಪಾಲರ ಭಾಷಣವೇ ತೋರಿಸುತ್ತಿದೆ.

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಹಕ್ಕಿಲ್ಲ : ಯಡಿಯೂರಪ್ಪ
ರಾಜ್ಯಪಾಲರು ತಮ್ಮ ಭಾಷಣದಲ್ಲಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಕೇಂದ್ರದಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ಸಿಗರು ಈ ಮಾತನ್ನು ರಾಜ್ಯಪಾಲರಿಂದ ಹೇಳಿಸಬಾರದಿತ್ತು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಬಿಜೆಪಿ ಸರ್ಕಾರದ ಎಫ್ ಐಆರ್ ನಂತಿದೆ : ಡಿ.ವಿ.ಸದಾನಂದಗೌಡ
ಬಿಜೆಪಿ ಸರ್ಕಾರದ ವಿರುದ್ಧ ಸಲ್ಲಿಸಿರುವ ಆರೋಪ ಪಟ್ಟಿಯಂತೆ ರಾಜ್ಯಪಾಲರ ಭಾಷಣವಿದೆ ಎಂದು ಮೇಲ್ಮನೆ ಪ್ರತಿಪಕ್ಷದ ನಾಯಕ ಡಿ.ವಿ.ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಭಾಷಣದಲ್ಲಿ ಸಮಾಜಕ್ಕೆ ಯಾವುದೇ ಹೊಸ ಸಂದೇಶ ನೀಡುವ ಅಂಶಗಳಿಲ್ಲ. ಒಂದು ರೂ.ಗೆ ಒಂದು ಕೆ.ಜಿ ಅಕ್ಕಿ ಯೋಜನೆಯನ್ನು ರಾಜ್ಯಪಾಲರರಿಂದ ಹೇಳಿಸಿ, ಅವರ ಗೌರವಕ್ಕೆ ಚ್ಯುತಿ ಉಂಟುಮಾಡಲಾಗಿದೆ.

ರಾಜ್ಯದ ಆಡಳಿತ ಮಾರ್ಗಸೂಚಿ ಅಲ್ಲ : ಎಂ.ಸಿ.ನಾಣಯ್ಯ
ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲರು ಮಾಡುವ ಭಾಷಣ ಸರ್ಕಾರದ ಐದು ವರ್ಷಗಳ ಮಾರ್ಗಸೂಚಿ ಆಗಿರಬೇಕು. ಆದರೆ, ಹಿಂದಿನ ಸರ್ಕಾರವಿದ್ದಾಗ ಮಾಡಿದ್ದ ಭಾಷಣವನ್ನೆ ರಾಜ್ಯಪಾಲರು ಮತ್ತೊಮ್ಮೆ ಓದಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ, ಜೆಡಿಎಸ್ ಮುಖಂಡ ಎಂ.ಸಿ.ನಾಣಯ್ಯ ಹೇಳಿದ್ದಾರೆ.












Click it and Unblock the Notifications